ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟ – ನಿರ್ಮಾಪಕ ರಾಜಾಶಂಕರ್

ಪೋಸ್ಟ್ ಶೇರ್ ಮಾಡಿ

ರಾಜಾಶಂಕರ್ ಹಿರಿಯರ ಮೂಲಸ್ಥಳ ಮಧುಗಿರಿ ಸಮೀಪದ ಒಂದು ಗ್ರಾಮ. ಅವರ ಜನ್ಮನಾಮ ಶಂಕರ್‌. ತಂದೆ ಸಿದ್ದೇಗೌಡರು ಕಾರಣಾಂತರಗಳಿಂದ ಮೈಸೂರಿಗೆ ಬಂದು ನೆಲೆಸಿದರು. ಕೆಲಸಮಯ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದರು. ಮುಂದೆ ಸ್ಟುಡಿಯೋ ಮುಚ್ಚಿದ ನಂತರ ವುಡ್‌ಲ್ಯಾಂಡ್ ಚಿತ್ರಮಂದಿರದಲ್ಲಿ ಕೆಲಸಕ್ಕೆ ಸೇರಿ ಇಪ್ಪತ್ತು ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು. ಶಂಕರ್‌ ಅವರಿಗೆ ನಟನೆಯೆಡೆಗಿನ ಸೆಳೆತಕ್ಕೆ ಇದೂ ಕಾರಣವಾಯ್ತು. ಶಂಕರ್‌ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ ನಾಟಕದ ನಂಟು ಬೆಳೆಯಿತು. ಹಲವು ನಾಟಕಗಳಲ್ಲಿ ಅಭಿನಯಿಸಿದರು. ಇಂಟರ್‌ಮೀಡಿಯಟ್‌ ಶಿಕ್ಷಣ ಮುಗಿಸಿದ ನಂತರ ರೆವೆನ್ಯೂ ಇಲಾಖೆಯಲ್ಲಿ ಗುಮಾಸ್ತನ ಕೆಲಸ ಸಿಕ್ಕಿತು. ಉದ್ಯೋಗದ ಜೊತೆಗೆ ನಾಟಕದ ನಂಟನ್ನೂ ಪೋಷಿಸುತ್ತಾ ಬಂದರು ಶಂಕರ್‌. ನಾಟಕದೆಡೆಗಿನ ಆಸಕ್ತಿ ಹೆಚ್ಚಾಗಿ ಉದ್ಯೋಗಕ್ಕೆ ತೊಂದರೆಯಾಗುತ್ತಿದ್ದಂತೆ ಕೆಲಸಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.

ಒಮ್ಮೆ ನಿರ್ದೇಶಕ ಎಚ್‌.ಎಲ್‌.ಎನ್‌.ಸಿಂಹ ಅವರು ನಾಟಕವೊಂದರಲ್ಲಿ ಶಂಕರ್‌ರನ್ನು ನೋಡಿದರು. ಅದು ಶಂಕರ್‌ ನಟನಾ ಬದುಕಿಗೆ ತಿರುವಾಯ್ತು. ಇವರ ಪಾತ್ರದಿಂದ ಪ್ರಭಾವಿತರಾದ ಸಿಂಹ ಅವರು ತಮ್ಮ ‘ಅಬ್ಬಾ ಆ ಹುಡುಗಿ’ ಚಿತ್ರಕ್ಕೆ ನಾಯಕನನ್ನಾಗಿ ಶಂಕರ್‌ರನ್ನು ಆಯ್ಕೆ ಮಾಡಿದರು. ಅವರ ಹೆಸರಿನ ಹಿಂದೆ ‘ರಾಜಾ’ ಸೇರಿಸಿ ‘ರಾಜಾಶಂಕರ್‌’ ಎಂದು ಕರೆದದ್ದೂ ಸಿಂಹ ಅವರೇ. ಮುಂದೆ ‘ಅನುರಾಧ’ ಮತ್ತು ‘ಜಾಣರ ಜಾಣ’ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದರು. ಮುಂದೆ ಉಪನಾಯಕ, ಪೋಷಕ ಪಾತ್ರಗಳು ಸೇರಿದಂತೆ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ವರನಟ ರಾಜಕುಮಾರ್ ಅವರಿಗೆ ರಾಜಾಶಂಕರ್ ಆಪ್ತರು. ಕೌಟುಂಬಿಕ ಕಾರಣಗಳಿಗಾಗಿ ರಾಜ್‌ ಸಹೋದರ ವರದಪ್ಪನವರು ಮದರಾಸನ್ನು ತೊರೆದು ಬೆಂಗಳೂರಿಗೆ ಬಂದು ನೆಲೆಸಿದಾಗ, ರಾಜ್‌ ಅವರ ವ್ಯವಹಾರ, ವ್ಯವಸ್ಥೆ ನಿಭಾಯಿಸುವುದು ಪಾರ್ವತಮ್ಮ ಒಬ್ಬರಿಗೇ ಕಷ್ಟವಾಯ್ತು. ಆಗ ರಾಜಾಶಂಕರ್ ನೆರವಿಗೆ ಬಂದರು. ಸುಮಾರು ಆರೇಳು ವರ್ಷಗಳ ಕಾಲ ಅವರು ರಾಜ್‌ ಜೊತೆಗಿದ್ದರು.

ರಾಜಾಶಂಕರ್‌ ಅವರಿಗೆ ನೆರವಾಗಲು ರಾಜಕುಮಾರ್ ಡೇಟ್ಸ್ ಕೊಟ್ಟಾಗ ಸಿದ್ಧವಾಗಿದ್ದು ‘ಬಂಗಾರದ ಪಂಜರ’. ಇದು ರಾಜಾಶಂಕರ್ ನಿರ್ಮಾಣದ ಮೊದಲ ಸಿನಿಮಾ. ವಿಜಯವಾಣಿ, ಶಾಂತಿನಿವಾಸ ಚಿತ್ರಗಳ ನಿರ್ಮಾಣ ಆರಂಭಿಸಿ ಇತರರಿಗೆ ಮಾರಿದರು. ಅಮರಜೀವಿ, ಬೇವುಬೆಲ್ಲ, ಮಂಗಳ ಮುಹೂರ್ತ, ಮನಸ್ಸಿದ್ದರೆ ಮಾರ್ಗ, ರೌಡಿ ರಂಗಣ್ಣ, ಒಂದೇ ಬಳ್ಳಿಯ ಹೂಗಳು, ಕಸ್ತೂರಿ ನಿವಾಸ, ಸಂಪತ್ತಿಗೆ ಸವಾಲ್‌, ಬಹದ್ದೂರ್ ಗಂಡು, ಭಕ್ತ ಕುಂಬಾರ… ರಾಜಾಶಂಕರ್ ನಟನೆಯ ಪ್ರಮುಖ ಚಿತ್ರಗಳು. 1987ರ ಜುಲೈ 22ರಂದು ತಮ್ಮ 56ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)

ತಮ್ಮ ‘ಪ್ರಗತಿ’ ಸ್ಟುಡಿಯೋದಲ್ಲಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ರಾಜಾಶಂಕರ್ ಅವರ ಫೋಟೊ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ

ಬಹುಭಾಷಾ ತಾರೆ ಚಂದ್ರಕಲಾ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು

ಬಿ.ಎನ್.ಹರಿದಾಸ್

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ

ಚಿನ್ನದ ಕಂಠದ ಗಾಯಕ ಮನ್ನಾಡೇ

ಭಾರತೀಯ ಸಿನಿಮಾರಂಗದ ಮೇರು ಗಾಯಕ ಮನ್ನಾಡೇ ಜನ್ಮದಿನವಿಂದು (ಮೇ 1). ಶ್ರೇಷ್ಠ ಹಿನ್ನೆಲೆ ಗಾಯನದ ಮೂಲಕ ಅವರು ಚಿತ್ರರಸಿಕರ ಮನಸ್ಸಿನಲ್ಲಿ

Exit mobile version