ಮೈಸೂರು ಮೂಲದ ಸುಬ್ಬಣ್ಣನವರು ಓದಿದ್ದು ಎರಡನೇ ತರಗತಿಯಷ್ಟೆ. ಹೊಟ್ಟೆಪಾಡಿಗೆ ವಿವಿಧ ವೃತ್ತಿ ಮಾಡುತ್ತಿದ್ದ ಅವರು ನಾಟಕಗಳತ್ತ ಆಕರ್ಷಿತರಾದರು. ಮೈಸೂರಿನಲ್ಲಿ ಕ್ಯಾಂಪ್ ಮಾಡಿದ್ದ ಗುಬ್ಬಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ‘ಮಹಾತ್ಮಾ ಪಕ್ಚರ್ಸ್’ ಸಂಸ್ಥೆಯಲ್ಲಿ ದುಡಿದರು. ಮುಂದೆ ಮದರಾಸಿಗೆ ತೆರಳಿದ ಸುಬ್ಬಣ್ಣ ಅಲ್ಲಿ ಪ್ರಸಾದನ ಕಲೆಯಲ್ಲಿ ಪರಿಣತಿ ಸಾಧಿಸಿದರು. ಡಾ.ರಾಜಕುಮಾರ್ ಅವರ ಆತ್ಮೀಯರಾಗಿದ್ದ ಸುಬ್ಬಣ್ಣ ರಾಜ್ ಅವರ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ಸುಮಾರು ಒಂದೂವರೆ ದಶಕಗಳ ಕಾಲ ರಾಜ್ರ 50ಕ್ಕೂ ಹೆಚ್ಚು ಚಿತ್ರಗಳಿಗೆ ಮೇಕಪ್ ಮಾಡಿದ್ದಾರೆ. 120ಕ್ಕೂ ಹೆಚ್ಚು ಚಿತ್ರಗಳಿಗೆ ಮೇಕಪ್ ಕಲಾವಿದ, ಸಹನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
`ಕೃಷ್ಣಲೀಲಾ’ (1947) ಚಿತ್ರದೊಂದಿಗೆ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರಿಗೆ `ದಲ್ಲಾಳಿ’ ಮತ್ತು `ಸತ್ಯ ಹರಿಶ್ಚಂದ್ರ’ (ಕಾಲಕೌಶಿಕ) ಚಿತ್ರಗಳಲ್ಲಿನ ಪಾತ್ರಗಳು ಹೆಸರು ತಂದುಕೊಟ್ಟಿದ್ದವು. ಹಲವು ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆ ಮತ್ತು ಪ್ರಸಾದನ ಕಲೆ ಎರಡೂ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದವರು ಸುಬ್ಬಣ್ಣ. ಸುಬ್ಬಣ್ಣನವರ ಪುತ್ರ ಎಂ.ಎಸ್.ಕೇಶವ ಚಲನಚಿತ್ರ ಪ್ರಸಾದನ ವಿಭಾಗದಲ್ಲಿ ಸಕ್ರಿಯರಾಗಿ ಇದೀಗ ನಿವೃತ್ತ ಜೀವನ ನಡೆಸಿದ್ದಾರೆ. ಮತ್ತೊಬ್ಬ ಪುತ್ರ ಎಂ.ಎಸ್.ರಾಜಶೇಖರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಸದಭಿರುಚಿಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದವರು. ನಟನೆ, ಪ್ರಸಾದನ, ಸಹಾಯಕ ನಿರ್ದೇಶನ ವಿಭಾಗಗಳಲ್ಲಿ 200ಕ್ಕೂಹೆಚ್ಚು ಸಿನಿಮಾಗಳಲ್ಲಿ ಸುಬ್ಬಣ್ಣ ಕಾರ್ಯನಿರ್ವಹಿಸಿದ್ದಾರೆ. 1970ರ ಜುಲೈ 22ರಂದು ಸುಬ್ಬಣ್ಣ ಅಗಲಿದರು.
