ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಸಾಹಿತಿ ಮತ್ತು ಅಪ್ಪಟ ನೆಲದ ಸೊಗಡಿನ ನಿರ್ದೇಶಕ ಗೀತಪ್ರಿಯ. ನೂರಾರು ಮಧುರ ಗೀತೆಗಳ ಕತೃ. ನಿಜನಾಮಧೇಯ ಲಕ್ಷ್ಮಣರಾವ್ ಮೋಹಿತೆ. ಕವಿತೆ ಬರೆಯಲು ಪ್ರೇರಣೆಯಾಗಿದ್ದು ಕವಿ ಪು.ತಿ.ನ. ಮುಂದೆ ಚಿತ್ರಸಾಹಿತಿ ಬೆಳ್ಳಾವೆ ನರಹರಿಶಾಸ್ತ್ರಿಗಳ ಮಾರ್ಗದರ್ಶನ ಸಿಕ್ಕಿತು. `ತಾಯಿನಾಡು’ ಪತ್ರಿಕೆಗೆ ಕವಿತೆ ಬರೆಯತೊಡಗಿದ ಲಕ್ಷ್ಮಣರಾವ್ ನಾಟಕಗಳ ರಚನೆ, ನಟನೆಯಲ್ಲಿಯೂ ಅನುಭವ ಪಡೆದರು. `ಶ್ರೀರಾಮ ಪೂಜಾ’ (1955) ಚಿತ್ರಕ್ಕೆ ಎರಡು ಗೀತೆ ರಚಿಸುವ ಮೂಲಕ ಚಿತ್ರಸಾಹಿತ್ಯಕ್ಕೆ ಅಡಿಯಿಟ್ಟರು. ಅವರಿಗೆ `ಗೀತಪ್ರಿಯ’ ಎಂದು ನಾಮಕರಣ ಮಾಡಿದ್ದು ಸಂಗೀತ ಸಂಯೋಜಕ ವಿಜಯಭಾಸ್ಕರ್. ಮುಂದೆ ಗೀತರಚನೆಕಾರ, ಸಂಭಾಷಣೆಕಾರನಾಗಿ ಜನಪ್ರಿಯತೆ ಗಳಿಸಿದ ಅವರು ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ `ಮಣ್ಣಿನ ಮಗ’ (1968).

ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಕೇಂದ್ರ ಮತ್ತು ರಾಜ್ಯ ಪ್ರಶಸ್ತಿಯ ಗೌರವ ಪಡೆದ ಹೆಗ್ಗಳಿಕೆ ಅವರದು. ಮುಂದೆ ಭೂಪತಿರಂಗ, ಯಾವ ಜನ್ಮದ ಮೈತ್ರಿ, ಬೆಳುವಲದ ಮಡಿಲಲ್ಲಿ, ಬೆಸುಗೆ, ಹೊಂಬಿಸಿಲು, ಅನುರಾಗ ಬಂಧನ, ಮೌನಗೀತೆ, ಮಾನಸವೀಣೆ ಸೇರಿದಂತೆ ಮೂವತ್ತೈದಕ್ಕೂ ಚಿತ್ರಗಳನ್ನು ಗೀತಪ್ರಿಯ ನಿರ್ದೇಶಿಸಿದರು. ಈ ಪಟ್ಟಿಯಲ್ಲಿ ಮೂರು ತುಳು ಮತ್ತು ಒಂದು ಹಿಂದಿ ಚಿತ್ರವೂ ಸೇರಿದೆ. ದಟ್ಟ ಜೀವನಾನುಭವ, ಗ್ರಾಮೀಣ ಸೊಗಡು ಮತ್ತು ಪ್ರಕೃತಿ ಪ್ರೀತಿ… ಇವರ ಚಿತ್ರಸಾಹಿತ್ಯ ಮತ್ತು ನಿರ್ದೇಶನದ ಚಿತ್ರಗಳ ಅಂತರಾಳ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳ ಮಾದರಿಯನ್ನು ಪೋಷಿಸಿದ್ದಲ್ಲದೆ ನೂರಾರು ಸಾರ್ವಕಾಲಿಕ ಮಧುರ ಗೀತೆಗಳನ್ನು ಕೊಟ್ಟವರು ಗೀತಪ್ರಿಯ.
ಇವರು ನಿರ್ದೇಶಿಸಿದ `ಹೊಂಬಿಸಿಲು’, ನಟ ವಿಷ್ಣುವರ್ಧನ್ರಿಗೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ತಂದುಕೊಟ್ಟಿತು. `ಬೆಸುಗೆ’ಗಾಗಿ ಶ್ರೀನಾಥ್ ಫಿಲ್ಮ್ಫೇರ್ ಪುರಸ್ಕಾರಕ್ಕೆ ಭಾಜನರಾದರು. ಇವರ `ಯಾವ ಜನ್ಮದ ಮೈತ್ರಿ’ ತೃತೀಯ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಪಡೆದುಕೊಂಡರೆ `ಪುಟಾಣಿ ಏಜೆಂಟ್ 123′ ಪ್ರಾಣಿದಯಾ ಸಂಘದ ಪ್ರಶಸ್ತಿಗೆ ಪಾತ್ರವಾಯ್ತು. ಕಾನ್ಫಿಡಾದ ಕೆಸಿಎನ್ ಪುರಸ್ಕಾರ, ಚಿತ್ರರಸಿಕರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಗೀತಪ್ರಿಯ ಅವರನ್ನು ಅರಸಿಕೊಂಡು ಬಂದವು. ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ (1992-93) ಸಂದಿದೆ.
