ಹನುಮಪ್ಪ ಮುನಿಯಪ್ಪ ರೆಡ್ಡಿ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಎಚ್.ಎಂ.ರೆಡ್ಡಿ ಎಂದೇ ಹೆಸರಾಗಿದ್ದಾರೆ. ದಕ್ಷಿಣ ಭಾರತದ ಮೊದಲ ತೆಲುಗು – ತಮಿಳು ದ್ವಿಭಾಷಾ ಟಾಕಿ ಸಿನಿಮಾ ‘ಕಾಳಿದಾಸ’ (1931) ನಿರ್ದೇಶಕರು ರೆಡ್ಡಿ. 1932ರಲ್ಲಿ ಅವರು ‘ಭಕ್ತ ಪ್ರಹ್ಲಾದ’ ಪೂರ್ಣ ಪ್ರಮಾಣದ ತೆಲುಗು ಟಾಕಿ ಸಿನಿಮಾ ನಿರ್ದೇಶಿಸಿದರು. ಆಂಧ್ರದಲ್ಲಿ ಹುಟ್ಟಿದ ರೆಡ್ಡಿ ಅವರ ವ್ಯಾಸಾಂಗ ನಡೆದದ್ದು ಬೆಂಗಳೂರಿನಲ್ಲಿ. ಓದು ಮುಗಿದ ನಂತರ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಬ್ರಿಟೀಷರ ಕೈಕೆಳಗೆ ಕೆಲಸ ಮಾಡಲು ಇಷ್ಟವಿಲ್ಲದೆ ಕೆಲಸ ತೊರೆದು ಸಿನಿಮಾ ಕುರಿತಂತೆ ತರಬೇತಿ ಪಡೆಯಲು ಮುಂಬಯಿಗೆ ತೆರಳಿದರು.
ಮುಂಬಯಿ ಸಿನಿಮಾ ಸ್ಟುಡಿಯೋದಲ್ಲಿ ಅವರು ‘ರಿಫ್ಲೆಕ್ಟರ್ ಬಾಯ್’ ಆಗಿ ಅವರು ಚಿತ್ರರಂಗ ಪ್ರವೇಶಿಸಿದರು. ಮುಂದೆ ಕೆಲ ಸಮಯ ಅವರಿಗೆ ಭಾರತದ ಮೊದಲ ಟಾಕಿ ಸಿನಿಮಾ ‘ಆಲಂ ಅರಾ’ (1931) ನಿರ್ದೇಶಕ ಅರ್ದೇಶಿರ್ ಇರಾನಿ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡುವ ಅವಕಾಶ ಲಭಿಸಿತು. ಹೀಗೆ ವಿವಿಧೆಡೆ ಅನುಭವ ಗಳಿಸಿದ ಅವರು ಸ್ವತಂತ್ರ್ಯ ನಿರ್ದೇಶಕ – ನಿರ್ಮಾಪಕರಾಗಿ ಗುರುತಿಸಿಕೊಂಡರು. ಇಬ್ಬರು ಸಮಾನಮನಸ್ಕ ಚಿತ್ರಕರ್ಮಿಗಳಾದ ಬಿ.ಎನ್.ರೆಡ್ಡಿ ಮತ್ತು ಕನ್ನಾಂಬ ಅವರೊಂದಿಗೆ ಎಚ್.ಎಂ.ರೆಡ್ಡಿಯವರು ‘ರೋಹಿಣಿ ಪಿಕ್ಚರ್ಸ್ ಲಿಮಿಟೆಡ್’ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿ ಚಿತ್ರಗಳನ್ನು ನಿರ್ಮಿಸಿದರು. ಈ ಮೂಲಕ ದಕ್ಷಿಣ ಭಾರತದಲ್ಲಿ ಆಗಷ್ಟೇ ಪರಿಚಯವಾಗುತ್ತಿದ್ದ ಸಿನಿಮಾ ಮಾಧ್ಯಮ ನೆಲೆ ಕಂಡುಕೊಳ್ಳಲು ನೆರವಾದರು.
ಎಚ್.ಎಂ.ರೆಡ್ಡಿ ನಿರ್ದೇಶನದ ಚಿತ್ರಗಳು | ಪ್ರಿನ್ಸ್ ವಿಜಯ್ಕುಮಾರ್ (1930), ಕಾಳಿದಾಸ, ಬರ್ ಕೆ ಪೋಬರ್, ಭಕ್ತ ಪ್ರಹ್ಲಾದ (ನಿರ್ಮಾಪಕರೂ ಹೌದು), ಜಝ್ ಆಫ್ ಲೈಫ್, ಸೀತಾ ಸ್ವಯಂವರ, ಗೃಹಲಕ್ಷ್ಮಿ (ನಿರ್ಮಾಪಕರೂ ಹೌದು), ಮಾತೃಭೂಮಿ, ಚಡುವುಕುನ್ನ ಭಾರ್ಯ, ಬೋಡಮ್ ಪೆಳ್ಳಿ, ಬ್ಯಾರಿಸ್ಟರ್ ಪಾರ್ವತೀಶಂ, ತೆನಾಲಿ ರಾಮಕೃಷ್ಣ (ನಿರ್ಮಾಪಕರೂ ಹೌದು), ಘರಾನಾ ದೊಂಗ, ಸತಿ ಸೀತಾ, ನಿರ್ದೋಷಿ, ನಿರಪರಾಧಿ, ಪ್ರತಿಜ್ಞಾ (ನಿರ್ಮಾಪಕರೂ ಹೌದು).
ಎಚ್.ಎಂ.ರೆಡ್ಡಿ | ಜನನ: 12/06/1892 | ನಿಧನ: 14/01/1960