ಈ ಫೋಟೋದಲ್ಲಿ ನಟ ಅಶ್ವತ್ಥ್ ಅವರೊಂದಿಗಿರುವವರು ಪತ್ರಕರ್ತ ಹಾ.ವೆಂ.ಸೀತಾರಾಮಯ್ಯನವರು. ವೃತ್ತಿಯ ಬಹುಪಾಲು ಅವಧಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಣೆ. ರಂಗಭೂಮಿ ಮತ್ತು ಸಿನಿಮಾ ರಂಗದ ಪೋಷಕ ಕಲಾವಿದರ ಬಗ್ಗೆ ಅವರಿಗೆ ವಿಶೇಷ ಆಸ್ಥೆ. ಎಲ್ಲೋ ದೂರದ ಹಳ್ಳಿಗಳಲ್ಲಿರುವ ಕಲಾವಿದರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಿ ವ್ಯಕ್ತಿಚಿತ್ರಗಳನ್ನು ದಾಖಲಿಸಿದ್ದಾರೆ. ಅವರ ಕಾಳಜಿಯಿಂದಾಗಿ ಅಜ್ಞಾತ ರಂಗಭೂಮಿ ಕಲಾವಿದರ ವ್ಯಕ್ತಿಚಿತ್ರಗಳು ದಾಖಲಾಗಿವೆ.
‘ಭಾನುವಾರ ಸ್ಟುಡಿಯೋ ರಜೆ ಇದ್ದಾಗ ಹಾ.ವೆಂ.ಸೀ ನನ್ನನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಇಬ್ಬರೂ ಬಸ್ನಲ್ಲಿ ನೂರಾರು ಕಿಲೋ ಮೀಟರ್ ದೂರದ ಕುಗ್ರಾಮಗಳಿಗೆ ಹೋಗುತ್ತಿದ್ದೆವು. ಅಲ್ಲಿ ಅವರು ನಾಟಕ ಕಲಾವಿದನನ್ನು ಮಾತನಾಡಿಸುತ್ತಿದ್ದರು. ನಾನು ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆ. ಅನುಕೂಲಗಳಿಲ್ಲದ ಆ ದಿನಗಳಲ್ಲಿ ಒಂದು ಫೋಟೋಗಾಗಿ ಇಡೀ ದಿನವನ್ನೇ ವ್ಯಯಿಸಬೇಕಾಗಿದ್ದ ಸಂದರ್ಭಗಳವು. ಹಾ.ವೆಂ.ಸೀ ಈಗ ನಮ್ಮೊಂದಿಗಿಲ್ಲ. ಆದರೆ ಕಲಾವಿದರ ಕುರಿತ ಅವರ ಪುಸ್ತಕಗಳು ದಾಖಲೆಗಳಾಗಿ ಉಳಿದಿವೆ’ ಎನ್ನುತ್ತಾರೆ ಪ್ರಗತಿ ಅಶ್ವತ್ಥ ನಾರಾಯಣ.
