(ಫೋಟೊ-ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕ)
1978ರ ಸಂಕ್ರಾಂತಿ ಹಬ್ಬದ ದಿನ ಅಪರೂಪಕ್ಕೆ ನಾನು ಮನೆಯಲ್ಲೇ ಇದ್ದೆ. ಯಾವುದೇ ಶೂಟಿಂಗ್ ಇರಲಿಲ್ಲ. ಅಂದು ನಮ್ಮ ‘ಪ್ರಗತಿ’ ಸ್ಟುಡಿಯೋ ರಜೆ ಮಾಡಿದ್ದೆವು. ಮನೆಯಲ್ಲಿ ಕುಟುಂಬದವರೊಂದಿಗೆ ಹಬ್ಬದ ಸಂಭ್ರಮದಲ್ಲಿದ್ದೆ. ಆ ಸಮಯದಲ್ಲಿ ಶೂಟಿಂಗ್ಗಳಿಗೆ ಕಾರು ಓಡಿಸುವ ಕಾರ್ ಡೈವರ್ ಒಬ್ಬರು ಮನೆಗೆ ಬಂದು, “ಸಾರ್ ಅಂಬರೀಶ್ ಹೇಳಿಕಳುಹಿಸಿದ್ದಾರೆ. ಸ್ಟುಡಿಯೋ ಬೀಗದ ಕೀ ತೆಗೆದುಕೊಂಡು ಬರಬೇಕಂತೆ. ಅವರಿಗೆ ಅರ್ಜೆಂಟ್ ಪಾಸ್ಪೋರ್ಟ್ ಸೈಝ್ ಫೋಟೊ ಬೇಕಂತೆ. ನಿಮ್ಮನ್ನು ಕರೆದುಕೊಂಡು ಬರಲು ಹೇಳಿದ್ದಾರೆ” ಎಂದು ಹೇಳಿದರು. ನನಗೆ ಹೋಗಲು ಇಷ್ಟವಿರಲಿಲ್ಲ. ಹೋದರೆ ಮೂರು ನಾಲ್ಕು ಘಂಟೆ ವ್ಯರ್ಥವಾಗುತ್ತೆ ಎನಿಸಿ, “ಅವರು ಮನೆಯಲ್ಲಿ ಇರಲಿಲ್ಲ ಎಂದು ಹೇಳಿಬಿಡಿ” ಎಂದು ಹೇಳಿ ಡ್ರೈವರನ್ನು ಕಳುಹಿಸಿದೆ.
ಸ್ವಲ್ಪ ಸಮಯದ ನಂತರ “ರೀ… ಅಶ್ವತ್ಥ್“ ಎಂದು ಕೂಗುತ್ತಾ ಮನೆಗೆ ಬಂದರು ಅಂಬರೀಶ್! “ನಾನು ಸಹ ಈ ರೀತಿಯ ಆಟಗಳನ್ನೆಲ್ಲಾ ಆಡಿದೀನಿ. ಹತ್ತಿ ಕಾರು! ನನಗೆ ಅರ್ಜೆಂಟ್ ಫೋಟೋಸ್ ಬೇಕೇಬೇಕು” ಎಂದು ಹೇಳಿ ನನ್ನನ್ನು ಕರೆದುಕೊಂಡು ಸ್ಟುಡಿಯೋಗೆ ಹೊರಟರು. ದಾರಿ ಮಧ್ಯೆ ಕಾರಿನಲ್ಲಿ ನಾನು ಮನೆಯಿಂದ ಒಯ್ದಿದ್ದ ಎಳ್ಳು ಬೆಲ್ಲ ಸವಿದೆವು. ಆ ಸಮಯದಲ್ಲಿ ಮೈಸೂರು ನಿವಾಸಿಯಾಗಿದ್ದ ಅಂಬರೀಶ್ ಬೆಂಗಳೂರಿನಲ್ಲಿದ್ದಾಗ ಗಾಂಧಿನಗರದ ಮೋತಿ ಮಹಲ್ ಹೋಟೆಲ್ನಲ್ಲಿ ತಂಗುತ್ತಿದ್ದರು. ಸ್ಟುಡಿಯೋನಲ್ಲಿ ಅವರ ಎರಡು ಪೋಟೋ ತೆಗೆದು ಫಿಲಂನ ಎರಡು ಪ್ರೇಮ್ ಮಾತ್ರ ಕತ್ತರಿಸಿ ಡೆವಲಪ್ ಮಾಡಿ ಫ್ಯಾನ್ ಜೋರಾಗಿ ತಿರುಗಿಸಿ ಬಲವಂತವಾಗಿ ಫಿಲಂ ಒಣಗಿಸಿ ಪ್ರಿಂಟ್ ಮಾಡಿ ಕೊಟ್ಟೆ. ಆಗ ತೆಗೆದ ಪೋಟೋ ಇಲ್ಲಿದೆ ನೋಡಿ.
