ಸಿನಿಮಾ ಕಲಾವಿದರು, ತಂತ್ರಜ್ಞರು, ವಿತರಕರು, ಪ್ರದರ್ಶಕರು… ಚಿತ್ರೋದ್ಯಮದ ಎಲ್ಲರೂ ಒಂದು ಕುಟುಂಬ ಎನ್ನುವ ಭಾವನೆಯಿದ್ದ ಕಾಲವದು. ಪರಸ್ಪರರು ಸಹಕಾರ – ವಿಶ್ವಾಸದಿಂದಿರುತ್ತಿದ್ದರು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ `ಭಕ್ತಕುಂಬಾರ’ ಸಿನಿಮಾದ ಶತದಿನೋತ್ಸವದ ಸಂಭ್ರಮವಿದು. ಈ ಚಿತ್ರ ಬೆಂಗಳೂರಿನ ಭಾರತ್ ಟಾಕೀಸ್ನಲ್ಲಿ ನೂರು ದಿನ ಪ್ರದರ್ಶನ ಕಂಡಿತ್ತು. ಭಾರತ್ ಟಾಕೀಸ್ನಲ್ಲಿ ನಡೆದ ಶತದಿನೋತ್ಸವದ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರು ಈ ಸಿನಿಮಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಿದ್ದರು.

ಷರೀಫ್ ಸಹೋದರರ ಒಡೆತನದ `ಭಾರತ್’ ಟಾಕೀಸ್ ಬೆಂಗಳೂರಿನ ಮಿನರ್ವ ಸರ್ಕಲ್ ಸಮೀಪವಿತ್ತು. ಆರ್.ಲಕ್ಷ್ಮಣ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರಮಂದಿರ ಕನ್ನಡ ಚಿತ್ರಗಳಿಗೆ ಮೀಸಲಾಗಿತ್ತು ಎನ್ನುವುದು ವಿಶೇಷ. ಶಿಸ್ತಿನ ವ್ಯಕ್ತಿ ಲಕ್ಷ್ಮಣ್ ಅವರ ನಿರ್ವಹಣೆಯಲ್ಲಿ ಚಿತ್ರಮಂದಿರ ಉತ್ತಮ ಹೆಸರು ಗಳಿಸಿತ್ತು ಎಂದು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಸ್ಮರಿಸಿಕೊಳ್ಳುತ್ತಾರೆ. ಕಾಲಕ್ರಮೇಣ ಭಾರತ್ ಸೇರಿದಂತೆ ಅದರ ಸಮೀಪವೇ ಇದ್ದ ಮಿನರ್ವ ಮತ್ತು ಶಿವಾಜಿ ಚಿತ್ರಮಂದಿರಗಳು ಮುಚ್ಚಿಹೋದವು.
(ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ)
