ಆಗ ಸಿನಿಮಾದಲ್ಲಿ ಸ್ಟಿಲ್ ಫೋಟೋಗ್ರಾಫರ್ ಮತ್ತು ಛಾಯಾಗ್ರಾಹಕ ಜೊತೆಜೊತೆಗೇ ಕೆಲಸ ಮಾಡಬೇಕಿತ್ತು. ತಂತ್ರಜ್ಞಾನದ ಇತಿಮಿತಿಗಳಲ್ಲೇ ಸಿನಿಮಾ ತಯಾರಾಗುತ್ತಿದ್ದ ಕಾಲವದು. ಸನ್ನಿವೇಶಗಳ ಕಂಟ್ಯೂನಿಟಿಗೆ ಸ್ಟಿಲ್ ಫೋಟೋಗ್ರಫಿಯನ್ನೇ ಅವಲಂಬಿಸಬೇಕಿತ್ತು. ಸನ್ನಿವೇಶವೊಂದರಲ್ಲಿನ ಲೈಟಿಂಗ್, ವಿನ್ಯಾಸ, ಪರಿಕರಗಳು, ಕಲಾವಿದರ ವಸ್ತ್ರವಿನ್ಯಾಸ… ಹೀಗೆ ಎಲ್ಲಾ ಸಂಗತಿಗಳು ಸ್ಥಿರಚಿತ್ರ ಛಾಯಾಗ್ರಾಹಕನ ಕ್ಯಾಮರದಲ್ಲೇ ದಾಖಲಾಗುತ್ತಿದ್ದವು. ಇಡೀ ಸಿನಿಮಾ ಯೂನಿಟ್ಗೆ ಸಪೋರ್ಟಿವ್ ಆಗಿ ಕೆಲಸ ಮಾಡುತ್ತಿದ್ದ ಸ್ಟಿಲ್ ಫೋಟೋಗ್ರಾಫರ್ಗೆ ಮಹತ್ವದ ಜವಾಬ್ದಾರಿಯೇ ಇರುತ್ತಿತ್ತು. ಉಳಿದಂತೆ ಸ್ಟಿಲ್ಗಳು ಪ್ರಮುಖವಾಗಿ ಸಿನಿಮಾ ಪ್ರಚಾರಕ್ಕೆ ಬಳಕೆಯಾಗುತ್ತಿದ್ದವು.
ಪುಟ್ಟಣ್ಣನವರ ‘ಅಮೃತ ಗಳಿಗೆ’ ಚಿತ್ರಕ್ಕೆ ಪ್ರಗತಿ ಅಶ್ವತ್ಥ ನಾರಾಯಣ ಅವರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಈ ಫೋಟೊ ಸಿನಿಮಾ ಚಿತ್ರೀಕರಣ ಸಂದರ್ಭದ್ದು. ಕ್ಯಾಮರಾ ಆಂಗಲ್, ಲೈಟಿಂಗ್ ಬಗ್ಗೆ ನಿರ್ದೇಶಕ ಪುಟ್ಟಣ್ಣ ಅಪಾರ ಕಾಳಜಿ ವಹಿಸುತ್ತಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜು ಲೈಟಿಂಗ್ ಮಾಡಿದ್ದಾರೆ. ಸನ್ನಿವೇಶ ಚಿತ್ರಿಸಿದ ನಂತರ ಪ್ರಗತಿ ಅಶ್ವತ್ಥರು ಕ್ಲಿಕ್ಕಿಸಿಕೊಂಡ ಫೋಟೊ ಇದು. ಕತೆಗೆ ತಿರುವು ನೀಡುವ ಮೊದಲ ರಾತ್ರಿಯ ಸನ್ನಿವೇಶವಿದು. ಪಾತ್ರಧಾರಿಗಳ ಮ್ಯಾನರಿಸಂ, ವಿಶೇಷ ಲೈಟಿಂಗ್ ಮತ್ತು ಸ್ಥಿರಚಿತ್ರ ಛಾಯಾಗ್ರಾಹಕರ ಕೌಶಲ್ಯದಿಂದಾಗಿ ಈ ಫೋಟೊ ಇಡೀ ಸನ್ನಿವೇಶಕ್ಕೆ ಕನ್ನಡಿ ಹಿಡಿಯುತ್ತದೆ.

ಸಿನಿಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜು ಅವರು ಈ ಸಿನಿಮಾಗೆ ಲೈಟಿಂಗ್ ಮಾಡಿದ ಸಂದರ್ಭವನ್ನು ನೆನಪು ಮಾಡಿಕೊಳ್ಳುತ್ತಾ, “ಬೆಳಗಿನ ಹೊತ್ತು ಚಿತ್ರಿಸಿದರೆ ಸನ್ಲೈಟ್ ಲೀಕ್ ಆದ್ರೆ ಕಲರ್ಸ್ ಡೈಲೂಟ್ ಆಗುತ್ತೆ. ಅಂದುಕೊಂಡಷ್ಟು ಬ್ಲಾಕ್ನೆಸ್ ಸಿಗಲ್ಲ. ಹಾಗಾಗಿ ಈ ಸನ್ನಿವೇಶವನ್ನು ರಾತ್ರಿಯಲ್ಲೇ ಚಿತ್ರಿಸಬೇಕೆಂದು ನಾನು ಪುಟ್ಟಣ್ಣನವರಿಗೆ ಹೇಳಿದ್ದೆ. ಒಳಗಡೆ ಕೋಣೆಯಲ್ಲಿ ಸೀಮೆ ಎಣ್ಣೆಯ ಲಾಟೀನು ಲ್ಯಾಂಪ್ ಬಳಕೆ ಮಾಡಿದೆ. ಜೊತೆಗೊಂದು ಕೀ ಲೈಟ್ ಇಟ್ಟಿದ್ದೆ. ಕಿಟಿಕಿಯಿಂದ ಹೊರಗಡೆ ಕಾಣುವ ಮರದ ಮೆಲೆ ಬ್ಲ್ಯೂ ಲೈಟ್ (ಸೌರ್ಸ್ ಲೈಟ್) ಹಾಕಿದ್ದರಿಂದ ಸನ್ನಿವೇಶಕ್ಕೆ ಹೊಸ ಅರ್ಥ ಬಂತು” ಎನ್ನುತ್ತಾರೆ. ಈ ಚಿತ್ರದ ಉತ್ತಮ ಛಾಯಾಗ್ರಹಣಕ್ಕಾಗಿ ಅವರಿಗೆ ರಾಜ್ಯಪ್ರಶಸ್ತಿ ಸಂದಿದೆ.
