ನಾಗಾಭರಣ ನಿರ್ದೇಶನದ `ಮೈಸೂರು ಮಲ್ಲಿಗೆ’ ಅಂದಾಕ್ಷಣ ಕವಿ ಕೆ.ಎಸ್.ನರಸಿಂಹಸ್ವಾಮಿ ನೆನಪಾಗುತ್ತಾರೆ. ಇದಕ್ಕೂ ಬಹು ಹಿಂದೆ, 1969ರಲ್ಲೇ `ಅನಿರೀಕ್ಷಿತ’ ಚಿತ್ರಕ್ಕೆ ಅವರು ಹಾಡು ಬರೆದಿದ್ದರು. ನಾಗೇಶ್ ಬಾಬ ನಿರ್ಮಿಸಿ – ನಿರ್ದೇಶಿಸಿದ ಚಿತ್ರವಿದು. ಕೆಎಸ್ಎನ್ ಮದರಾಸಿಗೆ ಬಂದು ಚಿತ್ರದ ಸಿಚ್ಯುಯೇಷನ್ಗೆ ಹಾಡುಗಳನ್ನು ಬರೆದುಕೊಟ್ಟಿದ್ದರಂತೆ. (ನಾಗೇಶ್ ಬಾಬ ಅವರು ಸ್ಥಿರ ಚಿತ್ರಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಹಿರಿಯ ಸಹೋದರ).
ಮದರಾಸಿನ ಹಳೆಯ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ನರಸಿಂಹಸ್ವಾಮಿ ಅವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮದರಾಸಿನಲ್ಲಿ ನಾಲ್ಕು ದಿನಗಳ ಕಾಲ ಕೆಎಸ್ನ ಅವರಿಗೆ ಸಂಗೀತ ಸಂಯೋಜಕ ವಿಜಯ ಭಾಸ್ಕರ್ ಮತ್ತು ಗಾಯಕ ಪಿ.ಬಿ.ಶ್ರೀನಿವಾಸ್ ಜೊತೆಯಾಗಿದ್ದರು. ವಿವಿಧ ಸನ್ನಿವೇಶಗಳಿಗೆಂದು ವಿಜಯಭಾಸ್ಕರ್ ರಾಗ ಸಂಯೋಜನೆಗೆ ಕೆಎಸ್ನ `ಬಂದರಮ್ಮ ಬಂದರು’, `ಒಂದು ಬಳ್ಳಿಯಲೊಂದು ಹೂ’ ಮತ್ತು `ಮೈತುಂಬಿದಾ ಈ ಚೆಲುವಿಗೆ..’ ಹಾಡುಗಳನ್ನು ಬರೆದುಕೊಟ್ಟರು.
ಎಲ್.ಆರ್.ಈಶ್ವರಿ ಹಾಡಿದ `ಮೈತುಂಬಿದಾ ಈ ಚೆಲುವಿಗೆ..’ ಆಗ ಜನಪ್ರಿಯವಾಗಿತ್ತು. ಇದಕ್ಕೂ ಮೊದಲು ನರಸಿಂಹಸ್ವಾಮಿ ಗೀತೆಗಳು ಬೇರೆ ಸಿನಿಮಾಗಳಲ್ಲಿ ಬಳಕೆಯಾಗಿದ್ದಿದೆ. ಆದರೆ ಚಿತ್ರದ ಸನ್ನಿವೇಶಗಳಿಗೆಂದೇ ಅವರು ಹಾಡು ಬರೆದುಕೊಟ್ಟದ್ದು ಅದೇ ಮೊದಲು ಎನ್ನಲಾಗುತ್ತದೆ. ಕೆಎಸ್ನ ಅವರ ಪ್ರತೀ ಹಾಡಿಗೆ ನೂರೈವತ್ತು ರೂಪಾಯಿ ಸಂಭಾವನೆ ಪಾವತಿಸಲಾಗಿತ್ತು ಎಂದು ಅಶ್ವತ್ಥರು ನೆನಪು ಮಾಡಿಕೊಳ್ಳುತ್ತಾರೆ.