ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸಿನಿ ಪತ್ರಿಕೆಗಳಿಗೂ ಕಾರ್ಯನಿರ್ವಹಿಸಿದ್ದಾರೆ. ವಿ.ಎನ್.ಸುಬ್ಬರಾವ್ ಸಂಪಾದಕತ್ವದ `ತಾರಾಲೋಕ’ ಪತ್ರಿಕೆಯ ಸಂದರ್ಭವೊಂದು ಅವರ ಮನಸ್ಸಿನಲ್ಲುಳಿದಿದೆ. ಅದು ಡಾ.ರಾಜಕುಮಾರ್ ಅವರಿಗೆ ಅರವತ್ತು ವರ್ಷ (1989) ತುಂಬಿದ ಸಂದರ್ಭ. ಪತ್ರಿಕೆಗಾಗಿ ಸಂದರ್ಶಿಸಲೆಂದು ಪತ್ರಿಕೆ ಸಂಪಾದಕರಾದ ವಿ.ಎನ್.ಸುಬ್ಬರಾವ್ ಜತೆ ಅಶ್ವತ್ಥರು ಸದಾಶಿವನಗರದ ಮನೆಗೆ ಹೋಗಿದ್ದರು. `ಈ ಬಾರಿ ರಾಜ್ರ ಡಿಫರೆಂಟ್ ಫೋಟೋಗಳೇ ಬೇಕು’ ಎಂದು ಸಂಪಾದಕರು ಖಡಾಖಂಡಿತವಾಗಿ ಹೇಳಿದ್ದರಂತೆ. ಸದಾ ಬಿಳಿ ಷರ್ಟ್, ಪಂಚೆಯಲ್ಲೇ ಇರುವ ರಾಜ್ರ ಡಿಫರೆಂಟ್ ಫೋಟೋಗಳನ್ನು ತೆಗೆಯುವುದು ಹೇಗೆಂದು ಇವರು ಚಿಂತೆಗೀಡಾಗಿದ್ದರು.
`ಸರ್, ಕಲರ್ ಷರ್ಟ್ ಹಾಕಿಕೊಳ್ಳಬಹುದಲ್ಲ..’ ಎಂದು ಸಂದರ್ಶನದ ವೇಳೆ ಅಶ್ವತ್ಥರು ಅಳುಕಿನಿಂದಲೇ ರಾಜ್ಗೆ ಮನವಿ ಮಾಡಿದ್ದಾರೆ. `ಶೂಟಿಂಗ್ ಹೊರತು ಬೇರೆ ವೇಳೆ ನಾನು ಯಾವತ್ತೂ ಕಲರ್ ಷರ್ಟ್ಗಳನ್ನು ಹಾಕಿಕೊಳ್ಳೋಲ್ಲ, ನಿಮಗೆ ಗೊತ್ತಲ್ಲ?’ ಎಂದಿದ್ದಾರೆ ರಾಜ್. `ಡಿಫರೆಂಟ್ ಆಗಿ ಇರ್ಲಿ ಅಂತ…’ ಎಂದು ಇವರು ವಿನಂತಿಸಿಕೊಂಡಿದ್ದಾರೆ. ಒಳಕೋಣೆಗೆ ಹೋದ ರಾಜ್ ಕೆಲ ನಿಮಿಷಗಳಲ್ಲೇ ಅಳಿಯ ಗೋವಿಂದರಾಜು ಅವರ ಕಲರ್ ಷರ್ಟ್ ಹಾಕಿಕೊಂಡು ಬಂದು ಕುಳಿತಿದ್ದಾರೆ! ರಾಜ್ರಲ್ಲಿ ಬಿಳಿ ಷರ್ಟ್ಗಳ ಹೊರತಾಗಿ ಬೇರೆ ಕಲರ್ನವು ಇರಲೇ ಇಲ್ಲ. ಗೋವಿಂದರಾಜು ಅವರ ಷರ್ಟ್ ರಾಜ್ ದೇಹಕ್ಕೆ ಹೊಂದಿಕೆಯಾಗದೆ ಟೈಟ್ ಆಗಿತ್ತಂತೆ. ಅದನ್ನು ಬದಲಿಸಿ ಬೇರೆ ಷರ್ಟ್ ಧರಿಸಬಹುದೇ ಎಂದು ಕೇಳಲು ಅಶ್ವತ್ಥ್ ಸರ್ಗೂ ಸರಿ ಎನಿಸಿಲ್ಲ. ಈ ಸಂದರ್ಭದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಸರಣಿ ಫೋಟೋಗಳಲ್ಲಿ ಇದೂ ಒಂದು.
