ಉತ್ತರ ಕನ್ನಡದ ಭಟ್ಕಳ ಪಂಢರೀಬಾಯಿ ಅವರ ಹುಟ್ಟೂರು. ತಂದೆ ರಂಗವಿಠಲರು ಹರಿಕಥಾ ವಿದ್ವಾನ್ ಮತ್ತು ಕೀರ್ತನಕಾರರು. ತಾಯಿ ಕಾವೇರಮ್ಮ ಶಾಲಾ ಉಪಾಧ್ಯಾಯಿನಿ. ಸಹೋದರ ವಿಮಲಾನಂದದಾಸ್ ಸಹ ಕೀರ್ತನಕಾರ ಮತ್ತು ನಟ. ತಂದೆಯನ್ನು ನೋಡುತ್ತಾ ಬೆಳೆದ ಪಂಢರೀಬಾಯಿ ಆರರ ಬಾಲೆಯಾಗಿದ್ದಾಗಲೇ ಹರಿಕಥೆ ಮಾಡತೊಡಗಿದ್ದರು. ಬಾಲೆಯ ಹರಿಕಥೆಗೆ ಮಾರುಹೋದ ಮೈಸೂರು ಅರಸರು ಬಂಗಾರದ ಪದಕವನ್ನು ಉಡುಗೊರೆಯನ್ನಾಗಿ ಕೊಟ್ಟಿದ್ದರು. ತಂದೆಯವರ ‘ಆದರ್ಶ ನಾಟಕಸಭಾ’ ನಾಟಕ ಕಂಪನಿಯಲ್ಲಿ ಅವರು ಬಾಲ ನಟಿಯಾಗಿ ಅಭಿನಯ ಕ್ಷೇತ್ರಕ್ಕೆ ಪರಿಚಯವಾದರು.

ಟಿ.ಚೌಡಯ್ಯನವರ ‘ವಾಣಿ’ (1943) ಕನ್ನಡ ಚಿತ್ರದೊಂದಿಗೆ ಪಂಢರೀಬಾಯಿ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಆಗ ಅವರಿಗೆ ಒಂಬತ್ತು ವರ್ಷ. ಇದಾದ ನಂತರ ‘ಗೋರ ಕುಂಬಾರ’, ‘ಗುಣಸಾಗರಿ’ ಚಿತ್ರಗಳಲ್ಲಿ ಅಭಿನಯಿಸಿದರು. ‘ಬೇಡರ ಕಣ್ಣಪ್ಪ’ (1954) ಅವರ ವೃತ್ತಿ ಬದುಕಿಗೆ ತಿರುವಾಯ್ತು. ದಕ್ಷಿಣದ ಭಾರತದ ಪ್ರತಿಷ್ಠಿತ ಎ.ವಿ.ಎಂ. ಸಂಸ್ಥೆಯ ಕಲಾವಿದೆಯಾಗಿ ಕರಾರು ಮಾಡಿಕೊಂಡಿದ್ದರು. ಮುಂದೆ ದಕ್ಷಿಣದ ಪ್ರಮುಖ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದ ಅವರು ಮುಂಚೂಣಿ ನಾಯಕನಟರಿಗೆ ಜೋಡಿಯಾಗಿ ನಟಿಸಿದರು. ನಾಯಕನಟಿ, ಪೋಷಕ ಕಲಾವಿದೆಯಾಗಿ ಏಳು ಭಾಷೆಗಳ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಪಂಢರೀಬಾಯಿ ನಟಿಸಿದ್ದಾರೆ.

‘ಪಾಂಡುರಂಗ ಪ್ರೊಡಕ್ಷನ್ಸ್’ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿ ಸಂತ ಸಖು, ರಾಯರ ಸೊಸೆ, ಅನ್ನಪೂರ್ಣ, ಅನುರಾಧ, ಕೆರಳಿದ ಸಿಂಹ ಕನ್ನಡ ಚಿತ್ರಗಳಲ್ಲದೆ ಕೆಲವು ತೆಲುಗು ಚಿತ್ರಗಳನ್ನು ನಿರ್ಮಿಸಿದ್ದಾರೆ. 1994ರ ಡಿಸೆಂಬರ್ 13ರಂದು ಮದರಾಸಿನಿಂದ ಬೆಂಗಳೂರಿಗೆ ಬರುವಾಗ ಅಪಘೀತಕ್ಕೀಡಾಗಿ ಎಡಗೈ ಕಳೆದುಕೊಂಡರು. ನಂತರ ಚೇತರಿಸಿಕೊಂಡು ಕಿರುತೆರೆಯಲ್ಲೂ ಅಭಿನಯಿಸತೊಡಗಿದರು. ಕೊನೆಯ ದಿನಗಳವರೆಗೂ ಚಟುವಟಿಕೆಯಿಂದಿದ್ದ ಪಂಢರೀಬಾಯಿ ಅವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಗೌರವ, ಡಾ.ರಾಜಕುಮಾರ್ ಪ್ರಶಸ್ತಿ ಸೇರಿದಂತೆ ದಕ್ಷಿಣ ಭಾರತದ ಮಹತ್ವದ ಪುರಸ್ಕಾರಗಳು ಲಭಿಸಿವೆ. 2003ರ ಜನವರಿ 27ರಂದು ಪಂಢರೀಬಾಯಿ ನಮ್ಮನ್ನು ಅಗಲಿದರು. (ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)