ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಸಾಕ್ಷಾತ್ಕಾರ’ ಚಿತ್ರಕ್ಕೆ ಎಂ.ಎಸ್.ಸುಬ್ಬಣ್ಣ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಎರಡು ಶೆಡ್ಯೂಲ್ ಚಿತ್ರೀಕರಣ ಆಗಿತ್ತು. ಮೂರನೇ ಶೆಡ್ಯೂಲ್ ಶುರುವಾಗುವ ಹೊತ್ತಿನಲ್ಲಿ ಸುಬ್ಬಣ್ಣನವರು ಅಗಲಿದರು. ಸುಬ್ಬಣ್ಣನವರಿಗೆ ಸಹಾಯಕರಾಗಿದ್ದ ರಾಜಗೋಪಾಲ್ ಅವರು ತೆಲುಗು ಚಿತ್ರವೊಂದಕ್ಕಾಗಿ ನಟಿ ಜಯಂತಿ ಅವರಿಗೆ ಮೇಕಪ್ ಸಹಾಯಕರಾಗಿ ತೆರಳಿದ್ದರು. ಮೇಕಪ್ ಕಲಾವಿದರಿಲ್ಲದ್ದರಿಂದ ಶೂಟಿಂಗ್ ಸ್ಥಗಿತಗೊಂಡಿತು. ಶಿಸ್ತಿನ ನಿರ್ದೇಶಕ ಪುಟ್ಟಣ್ಣನವರು ಬೇಸರಗೊಂಡರು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆರಂಭವಾಗಬೇಕಿದ್ದ ಮೂರನೇ ಶೆಡ್ಯೂಲ್ ಚಿತ್ರೀಕರಣದಲ್ಲಿ ನಟರಾದ ನರಸಿಂಹರಾಜು, ಬಾಲಕೃಷ್ಣ ಅವರು ಪಾಲ್ಗೊಳ್ಳಬೇಕಿತ್ತು. ಆಗ ನಟ ರಾಜಕುಮಾರ್ ‘ಕೃಷ್ಣ ರುಕ್ಮಿಣಿ ಸತ್ಯಭಾಮ’ ಸಿನಿಮಾ ಚಿತ್ರೀಕರಣದ ನಿಮಿತ್ತ ಮದರಾಸಿನ ವಾಹಿನಿ ಸ್ಟುಡಿಯೋದಲ್ಲಿದ್ದರು. ಅಲ್ಲಿ ಅವರೊಂದಿಗೆ ಮೇಕಪ್ ಕಲಾವಿದ ಎಂ.ಎಸ್.ಸುಬ್ಬಣ್ಣನವರ ಪುತ್ರ ಕೇಶವ ಇದ್ದರು.
‘ಸಾಕ್ಷಾತ್ಕಾರ’ ಚಿತ್ರೀಕರಣಕ್ಕೆ ತೊಂದರೆಯಾಗುತ್ತಿದೆ ಎಂದು ನಿರ್ಮಾಪಕ ಮಲಿಕ್ ರಾಜಕುಮಾರ್ ಅವರಿಗೆ ಸುದ್ದಿ ಮುಟ್ಟಿಸಿದರು. ಕೂಡಲೇ ರಾಜ್ ತಮ್ಮೊಂದಿಗಿದ್ದ ಕೇಶವ ಅವರಿಗೆ ಬೆಂಗಳೂರಿಗೆ ತೆರಳುವಂತೆ ಸೂಚಿಸಿದರು. ತಂದೆಗೆ ಸಹಾಯಕರಾಗಿದ್ದ ಕೇಶವ ಅವರಿಗೆ ಆಗಿನ್ನೂ 18 ವರ್ಷ. ಇಲ್ಲಿ ನೋಡಿದರೆ ದೊಡ್ಡ ನಿರ್ದೇಶಕ ಪುಟ್ಟಣ್ಣನವರ ಸಿನಿಮಾ! ಚಾಮುಂಡೇಶ್ವರಿ ಸ್ಟುಡಿಯೋಗೆ ಬಂದವರೇ ಕೇಶವ ಮೇಕಪ್ ರೂಂಗೆ ತೆರಳಿದರು. ಕುರ್ಚಿ ಮೇಲೆ ಕುಳಿತ ನರಸಿಂಹರಾಜು, “ಬಾರೋ ಸುಬ್ಬಣ್ಣನ ಮಗನೇ ಮೇಕಪ್ ಮಾಡು” ಎಂದರು. ಕೇಶವ ಮೇಕಪ್ಗೆ ಸಜ್ಜಾಗುತ್ತಿದ್ದಂತೆ ಹಿಂದೆ ನಟ ಬಾಲಣ್ಣ ನಿಂತು ಸಲಹೆ ನೀಡಿದರು. ಮೇಕಪ್ ಆದ ನಂತರ ನರಸಿಂಹರಾಜು ಕ್ಯಾಮೆರಾ ಎದುರು ಹೋಗಿ ನಿಂತರು. ನಿರ್ದೇಶಕ ಪುಟ್ಟಣ್ಣ, ಛಾಯಾಗ್ರಾಹಕ ಶ್ರೀಕಾಂತ್ ಅವರಿಗೆ ಮೇಕಪ್ ಇಷ್ಟವಾಯ್ತು. “ನೀನೇ ಮೇಕಪ್ ಕಂಟಿನ್ಯೂ ಮಾಡಯ್ಯಾ…” ಎಂದರು. “ಶ್ರದ್ಧೆಯಿಂದ ಕಲಿತ ಕೆಲಸ ಕೈಹಿಡಿಯಿತು. 18ರ ಹರೆಯದಲ್ಲೇ ಛೀಫ್ ಮೇಕಪ್ ಆರ್ಟಿಸ್ಟ್ ಆದೆ” ಎನ್ನುತ್ತಾರೆ ಎಂ.ಎಸ್.ಕೇಶವ.
