ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಪ್ರತಿಮ ನಾಟಕಕಾರ ಬಿ.ಪುಟ್ಟಸ್ವಾಮಯ್ಯ

ಪೋಸ್ಟ್ ಶೇರ್ ಮಾಡಿ

ಪುಟ್ಟಸ್ವಾಮಿಯ್ಯನವರಿಗೂ ನಾಟಕರಂಗಕ್ಕೂ ನಿಕಟ ಬಾಂಧವ್ಯವಿತ್ತು. ಪತ್ರಿಕೋದ್ಯಮದಿಂದ ಬೇಸತ್ತ ಅವರು ನಾಟಕರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡರು. ನಾಟಕ ಕ್ಷೇತ್ರದಲ್ಲಿ ಅವರು ಬಳಸಿಕೊಂಡ ವಸ್ತು ರಾಮಾಯಣ, ಮಹಾಭಾರತದ ಕತೆಗಳೇ ಆದರೂ ಅವು ಜನಮನವನ್ನು ಸೂರೆಗೊಂಡವು. ಕುರುಕ್ಷೇತ್ರ, ದಶಾವತಾರ, ಸಂಪೂರ್ಣ ರಾಮಾಯಣ ಅಂದಿನ ನಾಟಕಪ್ರಿಯರಿಗೆ ಒಂದು ಹಬ್ಬವಾಗಿತ್ತು.

ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ನಾಟಕಗಳಿಗೆ ಬೇಡಿಕೆ ಇದ್ದೇ ಇದೆ. ಅವರು ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು. ಅದರಲ್ಲಿ ‘ಲೈಫ್‌ ಆಫ್‌ ಏಷ್ಯ’ದಿಂದ ಪ್ರೇರಿತರಾಗಿ ‘ಗೌತಮ ಬುದ್ಧ’ ನಾಟಕ ರಚಿಸಿದರು. ಮಹಮ್ಮದ್‌ ಪೀರ್ ಕಂಪನಿಯ ಅತ್ಯಂತ ಪ್ರಭಾವಿ ನಾಟಕ ಇದು. ಅದಲ್ಲದೆ ಅಕ್ಕಮಹಾದೇವಿ, ಷಹಜಹಾನ್‌ (1937), ಚಿರಕುಮಾರ ಸಭಾ, ಯಾಜ್ಞಸೇನಿ (1935), ಸತಿ ತುಳಸಿ, ಪ್ರಚಂಡ ಚಾಣಕ್ಯ, ಜಯದೇವ, ಅಭಿನೇತ್ರಿ, ಚಂಗುಲಿಯ ಬಲಿದಾನ, ಶ್ರೀದುರ್ಗ, ಬಬ್ರುವಾಹನ, ಬಿಡುಗಡೆಯ ಬಿಚ್ಚುಗತ್ತಿ, ತಾರಕ ವಧೆ, ರಾಣಿ, ಹಿಟ್ಟಿನ ಕೋಳಿ ಅವರ ರಚನೆಯ ಪ್ರಮುಖ ನಾಟಕಗಳು. ಷಹಜಹಾನ್‌ ಇವರ ಮೊದಲ ನಾಟಕ. ಬಂಗಾಲಿಯ ದ್ವಿಜೇಂದ್ರಲಾಲ್‌ ರಾಯ್‌ ಅವರ ನಾಟಕದ ಭಾಷಾಂತರ. ಈ ನಾಟಕ ಕೂಡ ಕಲ್ಯಾಣಮ್ಮನವರು ಪ್ರಕಟಿಸುತ್ತಿದ್ದ ‘ಸರಸ್ವತಿ’ ಮಾಸಪತ್ರಿಕೆಯಲ್ಲಿ 1926ರಿಂದ 27ರವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

ನಾಟಕರತ್ನ ಗುಬ್ಬಿ ವೀರಣ್ಣನವರ ಕಂಪನಿ, ಚನ್ನಬಸವೇಶ್ವರ ಕಂಪನಿ ಇವರಿಗೆ ತುಂಬಾ ಪ್ರೋತ್ಸಾಹ ನೀಡಿದವು. ಇದವರಿಂದ ನಾಟಕಗಳನ್ನು ಬರೆಸಿ ಯಶಸ್ವಿಯಾಗಿ ಪ್ರದರ್ಶಿಸಿದರು. ಪುಟ್ಟಸ್ವಾಮಯ್ಯನವರು ಸಂಗೀತಕ್ಕೆ ಪ್ರಧಾನ್ಯ ಕಡಿಮೆ ಮಾಡಿ ಸಾಮಾನ್ಯ ಭಾಷೆ (ಗದ್ಯ) ಬಳಸಿ ನಾಟಕ ರಚಿಸಿದರು. ಗುಬ್ಬಿ ಕಂಪನಿಯ ಉತ್ತಮ ರಂಗಸಜ್ಜಿಕೆಯಿಂದ ಈ ನಾಟಕಗಳಿಗೆ ಜೀವ ತುಂಬಿತು. ಗುಬ್ಬಿ ಕಂಪನಿಯ ಕುರುಕ್ಷೇತ್ರ ನೋಡಲು ಜನ ರೈಲು, ಬಸ್ಸು, ಗಾಡಿಗಳಲ್ಲಿ ಬರುತ್ತಿದ್ದುದು ಒಂದು ವಿಶೇಷ.

ಬಿ.ಪುಟ್ಟಸ್ವಾಮಯ್ಯ ಅವರು ಬರೆದ ಮೊದಲ ಕಾದಂಬರಿ ‘ರೂಪಲೇಖಾ’ (1953). ನಂತರ ಅಭಿಸಾರಿಕೆ, ಸುಧಾಮಯಿ, ಮಲ್ಲಮ್ಮನ ಪವಾಡ, ರತ್ನಹಾರ, ಚಾಲುಕ್ಯ ತೈಲಪ, ತೇಜಸ್ವಿನಿ, ನಾಟ್ಯ ಮೋಹಿನಿ, ಪ್ರಭುದೇವ ಮತ್ತು ಬಸವೇಶ್ವರರಿಗೆ ಸಂಬಂಧಿಸಿದಂತೆ ಆರು ಕಾದಂಬರಿಗಳು. ಅವರು ಬರೆದ ಕೊನೆಯ ಕಾದಂಬರಿ ‘ಹೂವು – ಕಾವು (1974). ಪುಟ್ಟಸ್ವಾಮಯ್ಯನವರ ಕೃತಿ ಮಲ್ಲಮ್ಮನ ಪವಾಡ ಚಿತ್ರವಾಗಿ ಅದನ್ನು ಇತರೆ ಭಾಷೆಗಳಲ್ಲೂ ಚಿತ್ರಿಸಲಾಗಿದೆ.

ಬಿ.ಪುಟ್ಟಸ್ವಾಮಯ್ಯ | ಜನನ: 27/05/1897 | ನಿಧನ: 25/01/1984

(ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಕಟಿಸಿದ ಕೃತಿಯಿಂದ)

(ಫೋಟೊ ಕೃಪೆ: ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ