
ಲೇಖಕ
ತೆಲುಗು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ 302 ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ ಎನ್ಟಿಆರ್. ಈ ಪಟ್ಟಿಯಲ್ಲಿ 48 ಪೌರಾಣಿಕ – ಭಕ್ತಿಪ್ರಧಾನ, 18 ಐತಿಹಾಸಿಕ, 32 ದ್ವಿಪಾತ್ರದ ಚಿತ್ರಗಳಿವೆ. ಆಂಧ್ರ ರಾಜಕಾರಣದಲ್ಲೂ ಅವರ ದಟ್ಟ ಹೆಜ್ಜೆ ಗುರುತುಗಳಿವೆ.
ಆಂಧ್ರದ ನಿಮ್ಮಕೂರಿನ ಸಾಧಾರಣ ಕುಟುಂಬದಲ್ಲಿ ಜನಿಸಿದ (28 ಮೇ 1923) ನಂದಮೂರಿ ತಾರಕರಾಮಾರಾವು ಎಂಬ ವ್ಯಕ್ತಿ ಮುಂದೆ ಇಡೀ ತೆಲುಗು ಚಿತ್ರರಂಗವನ್ನಷ್ಟೇ ಅಲ್ಲದೆ 3 ಬಾರಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಖ್ಯಾತಿ ಪಡೆಯುತ್ತಾರೆ. ಉಕ್ಕಿನ ಮಹಿಳೆ ಇಂದಿರಾಗಾಂಧಿಯವರನ್ನು ಎದುರು ಹಾಕಿಕೊಂಡು ತಮ್ಮ ತೆಲುಗು ಭಾಷೆಯ ಸ್ವಾಭಿಮಾನದ ಪ್ರತೀಕವಾಗಿ ‘ತೇಲುಗು ದೇಶ0’ ಪಕ್ಷ ಸ್ಥಾಪಿಸಿ ತೆಲುಗರ ಸಾರ್ವಭೌಮತ್ವವನ್ನು ಎತ್ತಿಹಿಡಿಯುತ್ತಾರೆ.
ತೆಲುಗು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ 302 ಚಿತ್ರಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವುಗಳಲ್ಲಿ 48 ಪೌರಾಣಿಕ ಹಾಗೂ ಭಕ್ತಿಪ್ರಧಾನ, 18 ಐತಿಹಾಸಿಕ, 32 ದ್ವಿಪಾತ್ರ, ಇನ್ನುಳಿದ ಚಿತ್ರಗಳಲ್ಲಿ ಸಾಮಾಜಿಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 95 ಮಂದಿ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರೆ, 18 ಚಿತ್ರಗಳನ್ನು ತಾವೇ ನಿರ್ದೇಶಿಸಿದ್ದಾರೆ. ತಮ್ಮ ನಿರ್ದೇಶನದ ಕೆಲವು ಚಿತ್ರಗಳಿಗೆ ಸಂಕಲನ ಮಾಡಿದ್ದಾರೆ.
ಹಲವು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ, ಫಿಲ್ಮ್ಫೇರ್ ಹಾಗೂ ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೇಂದ್ರದಿಂದ ಪದ್ಮಶ್ರೀ ಪ್ರಶಸ್ತಿ, ಆಂಧ್ರ ಯೂನಿವರ್ಸಿಟಿ ಯಿಂದ ಡಾಕ್ಟರೇಟ್, ಅಭಿಮಾನಿಗಳಿಂದ ನಂದಮೂರಿ ಅಂದಗಾಡು, ನಟಸಾರ್ವಬೌಮ, ನಟರತ್ನ ಇನ್ನು ಹಲವು ಬಿರುದುಗಳಿಗೆ ಪಾತ್ರರಾಗಿದ್ದಾರೆ. ತಾವೇ ನಿರ್ದೇಶನ ಮಾಡಿದ ಪ್ರಥಮ ಚಿತ್ರ ‘ದಾನವೀರ ಶೂರ ಕರ್ಣ’ ನಿರ್ಮಾಪಕರಾಗಿ, ಸಂಕಲನಕಾರರಾಗಿದ್ದು ಅಲ್ಲದೆ ತ್ರಿಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಇಂದಿಗೂ ಆ ಚಿತ್ರ, ಸಂಭಾಷಣೆಗಳನ್ನು ಸಿನಿಪ್ರೇಮಿಗಳು ಮೆಲುಕು ಹಾಕುತ್ತಾರೆ. ಚಿತ್ರದಲ್ಲಿ ಕೃಷ್ಣ, ದುರ್ಯೋಧನ ಹಾಗೂ ಕರ್ಣನ ಪಾತ್ರದಲ್ಲಿ ಎನ್ಟಿಆರ್ ಪರಕಾಯ ಪ್ರವೇಶ ಮಾಡಿದ್ದಾರೆ ಎಂದರೆ ಸುಳ್ಳಲ್ಲ.
ಎಂಥೆಂಥ ಪಾತ್ರಗಳು ಎಂಥೆಂಥ ಚಿತ್ರಗಳು, ಪಾತಾಳ ಭೈರವಿ, ಮಾಯಾ ಬಜಾರ್, ಗುಂಡಮ್ಮ ಕಥಾ, ಮಿಸ್ಸಮ್ಮ, ಜಗದೇಕವೀರುನಿ ಕಥಾ, ಪಾಂಡವ ವನವಾಸಮು, ಶ್ರೀಕೃಷ್ಣ ಪಾಂಡವೀಯ0, ಅಡವಿ ರಾಮುಡು, ವೇಟಗಾಡು, ಸರ್ದಾರ್ ಪಾಪಾರಾಯುಡು, ಬೊಬ್ಬಿಲಿ ಪುಲಿ, ಜಸ್ಟೀಸ್ ಚೌಧರಿ, ಕೊಂಡವೀಟಿ ಸಿಂಹಂ, ವೀರಬ್ರಹ್ಮೇಂದ್ರಗಾರಿಚರಿತ್ರ… ಒಂದೇ, ಎರಡೇ ಅದ್ಭುತ ಚಿತ್ರಗಳ ಪಟ್ಟಿಯೇ ಇದೆ.
‘ಮನದೇಶಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಾಮಾರಾವುರವರು ಕೊನೆಯದಾಗಿ ನಟಿಸಿದ್ದು ‘ಮೇಜರ್ ಚಂದ್ರಕಾಂತ್’ ಚಿತ್ರ. ಕರ್ನಾಟಕ ರತ್ನ ಡಾ.ರಾಜ್ ಕುಮಾರ್, ನಾಗೇಶ್ವರ ರಾವು, ಎಂ.ಜಿ.ಆರ್, ಶಿವಾಜಿ ಗಣೇಶನ್ ರವರನ್ನು ತುಂಬಾ ಇಷ್ಟಪಡುತ್ತಿದ್ದರು. ಅಣ್ಣಾವ್ರನ್ನು ರಾಜಕೀಯಕ್ಕೆ ತರಬೇಕೆಂದು ಬಹಳ ಪ್ರಯತ್ನ ಮಾಡಿದ್ದರು, ಆದರೆ ಅಣ್ಣಾವ್ರು ಅದರಿಂದ ಬಹುದೂರವೇ ಉಳಿದರು. 12 ಮಂದಿ ಮಕ್ಕಳು, ಅವರಲ್ಲಿ ಬಾಲಕೃಷ್ಣ ಖ್ಯಾತ ನಟರಾದರು. ಅಳಿಯ ಚಂದ್ರಬಾಬು ನಾಯ್ಡು ಮಾಜಿ ಮುಖ್ಯಮಂತ್ರಿ, ಮಗಳು ಪುರಂದರೇಶ್ವರಿ ಮಾಜಿ ಕೇಂದ್ರ ಸಚಿವೆ. ರಾಮಕೃಷ್ಣ ಸ್ಟುಡಿಯೋ ಸ್ಥಾಪಿಸಿದರು. ಹೀಗೆ ಆಂಧ್ರ, ತೆಲಂಗಾಣದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ದೈತ್ಯ ಪ್ರತಿಭೆ. ಎನ್.ಟಿ.ಆರ್ ಮತ್ತು ಎ.ಎನ್.ಆರ್ ತೆಲುಗು ಚಿತ್ರರಂಗದ ಎರಡು ಕಣ್ಣುಗಳು ಎಂದರೆ ತಪ್ಪಾಗಲಾರದು.
ಎನ್ಟಿಆರ್ | ಜನನ: 28/05/1923 | ನಿಧನ: 18/01/1996
