
ನಟ, ನಿರ್ದೇಶಕ
ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಕಾಶನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ನಟಿ ಮಾನಸ ಅವರಿಗೆ ಇವನು ಅದು ಹೇಗೆ ಹೇಳಿಕೊಟ್ಟನೋ, ಒಮ್ಮೆಗೇ ಆಕೆ ಶಾಟ್ ಓಕೆ ಮಾಡಿದರು.
ನನ್ನ ನಿರ್ದೇಶನದ `ದೇವರ ನಾಡಲ್ಲಿ’ ಚಿತ್ರೀಕರಣದ ಸಂದರ್ಭ. ಕನ್ನಡ, ಮಲಯಾಳಂ, ತುಳು, ತಮಿಳು, ಮರಾಠಿ… ಹೀಗೆ ಹಲವು ಭಾಷೆಗಳನ್ನು ಮಾತನಾಡುವ ಪಾತ್ರಗಳು ಚಿತ್ರದಲ್ಲಿವೆ. ಧಾರವಾಡ ಮೂಲದ ರಂಗಭೂಮಿ ಹಿನ್ನೆಲೆಯ ಕಲಾವಿದೆ ಮಾನಸ ಜೋಷಿ ಮಲಯಾಳಂ ಮಾತನಾಡುವ ಪಾತ್ರವೊಂದರಲ್ಲಿ ನಟಿಸುತ್ತಿದ್ದರು. ಆಕೆಗೆ ಮಲಯಾಳಂನ ಗಂಧ-ಗಾಳಿಯೂ ಗೊತ್ತಿಲ್ಲ. ಪ್ರಕಾಶ್ ರೈ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಆಕೆ ಮಲಯಾಳಂನೊಂದಿಗೆ ಸಂಭಾಷಣೆ ನಡೆಸುವ ಸನ್ನಿವೇಶವೊಂದು ಚಿತ್ರದಲ್ಲಿದೆ. ನಾವು ಕನ್ನಡದಲ್ಲಿ ಬರೆದುಕೊಟ್ಟದ್ದನ್ನು ಆಕೆಗೆ ಮಲಯಾಳಂ ಧಾಟಿಯಲ್ಲಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಮೂರು ಟೇಕ್ಗಳಾದರೂ ಶಾಟ್ ಓಕೆಯಾಗಲಿಲ್ಲ. ಕೊನೆಗೆ ಗೆಳೆಯ ಪ್ರಕಾಶ್ ರೈ ಆಕೆಯ ಬಳಿಗೆ ಹೋಗಿ, ಮನವರಿಕೆ ಮಾಡಿಕೊಟ್ಟ.
ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಆತನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ಮಾನಸ ಅವರಿಗೆ ಇವನು ಅದು ಹೇಗೆ ಹೇಳಿಕೊಟ್ಟನೋ, ಒಮ್ಮೆಗೇ ಆಕೆ ಶಾಟ್ ಓಕೆ ಮಾಡಿದರು. ಅವನೇನು ಮಾನಸಗೆ ಮಲಯಾಳಂ ಭಾಷೆಯ ಪಾಠ ಹೇಳಿರಲಿಲ್ಲ. ತನಗಿರುವ ತಿಳಿವಳಿಕೆಯಲ್ಲೇ ಮನದಟ್ಟುಮಾಡಿ ಸಂಭಾಷಣೆ ಸೂಕ್ತ ರೀತಿಯಲ್ಲಿ ಹೇಳುವಂತೆ ಮ್ಯಾನೇಜ್ ಮಾಡಿದ್ದ. ಇಲ್ಲಿ ಹೇಳಿಕೊಡುವ ಕ್ರಮ ಮುಖ್ಯವಾಗುತ್ತದೆ ಎನ್ನುವುದು ಮುಖ್ಯ. ಹೀಗೆ, ಒಬ್ಬ ಒಳ್ಳೆಯ ಕಲಾವಿದ ಹೊಸ ಕಲಾವಿದರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವುದಕ್ಕೆ ಈ ಸಂದರ್ಭ ಉತ್ತಮ ಉದಾಹರಣೆಯಾಗಿ ನನಗೆ ಕಾಣಿಸಿತು.