
ನಟ
ನಾನು ರೂಂಗೆ ಹೋಗಿ, “ಬಾಲಣ್ಣ.. ಬಾಲಣ್ಣ..” ಎಂದು ಅವರ ಮೈಮುಟ್ಟಿ ಎಬ್ಬಿಸತೊಡಗಿದೆ. ಅರೆನಿದ್ದೆಯಲ್ಲಿದ್ದ ಬಾಲಣ್ಣ ರಪ್ ಅಂತ ಕೆನ್ನೆಗೆ ಹೊಡೆದುಬಿಟ್ರು! ನಾನು ಮುಖ ಊದಿಸಿಕೊಂಡು ಹೊರಗೆ ಬಂದು ಕುಳಿತೆ.
ಶಂಕರನಾಗ್ ನಿರ್ದೇಶನದ ‘ಒಂದು ಮುತ್ತಿನ ಕತೆ’ ಚಿತ್ರದ ಸಂದರ್ಭ. ಉಡುಪಿಯ ಲಾಡ್ಜ್ವೊಂದರಲ್ಲಿ ನಾವೆಲ್ಲಾ ಉಳಿದುಕೊಂಡಿದ್ದೆವು. ಎಂದಿನಂತೆ ಬೆಳಗ್ಗೆ ಆರು ಗಂಟೆ ಹೊತ್ತಿಗೆ ಚಿತ್ರೀಕರಣಕ್ಕೆ ರೆಡಿಯಾಗಿ ಕುಳಿತಿದ್ದೆ. ಅಲ್ಲಿಗೆ ಬಂದ ಪ್ರೊಡಕ್ಷನ್ ಮ್ಯಾನೇಜರ್ ಕುಮಾರ್, “ನೀನು ರೆಡಿಯಾದ್ರೆ ಆಯ್ತಾ? ಬಾಲಣ್ಣನ್ನ ಎಬ್ಬಿಸೋದು ಬೇಡ್ವಾ?” ಅಂದ. ಕೂಡಲೇ ನಾನು ರೂಂಗೆ ಹೋಗಿ, “ಬಾಲಣ್ಣ.. ಬಾಲಣ್ಣ..” ಎಂದು ಅವರ ಮೈಮುಟ್ಟಿ ಎಬ್ಬಿಸತೊಡಗಿದೆ. ಅರೆನಿದ್ದೆಯಲ್ಲಿದ್ದ ಬಾಲಣ್ಣ ರಪ್ ಅಂತ ಕೆನ್ನೆಗೆ ಹೊಡೆದುಬಿಟ್ರು!
ನಾನು ಮುಖ ಊದಿಸಿಕೊಂಡು ಹೊರಗೆ ಬಂದು ಕುಳಿತೆ. ಅಲ್ಲಿಗೆ ನಗುತ್ತಾ ಬಂದ ಪ್ರೊಡಕ್ಷನ್ ಮ್ಯಾನೇಜರ್, “ಹೊಡೆದ್ರಾ? ನಿದ್ರೆಯಲ್ಲಿ ಎಬ್ಬಿಸಿದರೆ ಬಾಲಣ್ಣನಿಗೆ ಕೆಟ್ಟ ಕೋಪ ಬರುತ್ತೆ. ನನಗೂ ನಾಲ್ಕೈದು ಬಾರಿ ಇದೇ ಅನುಭವವಾಗಿದೆ. ಆದರೆ ನಾನು ಏಟು ತಪ್ಪಿಸಿಕೊಂಡಿದೀನಿ..” ಎಂದು ಏನೋ ದೊಡ್ಡ ವಿದ್ಯೆ ಕಲಿತವನಂತೆ ಹೇಳಿಕೊಂಡು ಬೀಗಿದ. ಒದೆ ತಿಂದಿದ್ದ ನನಗೆ ಹುಸಿ ಕೋಪ. ಶೂಟಿಂಗ್ ಲೊಕೇಶನ್ನಲ್ಲಿ ಬಾಲಣ್ಣನನ್ನು ಮಾತನಾಡಿಸಲೇ ಇಲ್ಲ. ಸಂಜೆ ವಾಪಸು ಬರುವ ಹೊತ್ತಿಗೆ, “ಈಗ ಲಾಡ್ಜ್ಗೆ ಹೋಗೋಕೆ ಯಾವ ಗಾಡಿನಪ್ಪಾ ದೊಡ್ಡಣ್ಣ..” ಅಂತ ಕೇಳಿದರು ಬಾಲಣ್ಣ. ನಾನು ಮಾತನಾಡಲಿಲ್ಲ. “ಯಾವ ಗಾಡಿ ಅಂತ ಹೇಳೋ, ಸಿಟ್ಕೋಬೇಡ” ಅಂದ್ರು.
ಆಗ ಅಲ್ಲಿದ್ದ ಅಣ್ಣಾವ್ರು (ರಾಜ್), “ದೊಡ್ಡಣ್ಣ ಯಾಕೆ ನಿಮ್ ಮೇಲೆ ಸಿಟ್ಟು ಮಾಡಿಕೊಂಡಿರೋದು?” ಎಂದು ವಿಚಾರಿಸಿದರು. ನಾನು ಬೆಳಗಿನ ಘಟನೆ ವಿವರಿಸಿದೆ. ಆಗ ಅಣ್ಣಾವ್ರು, “ಅವರು ಹೊಡೆದವ್ರೆ ಅಂತ ಬೇಜಾರಾಗ್ಬೇಡ, ಅವರ ಕೈಲಿ ಒದೆ ತಿಂದೋರೆಲ್ಲ ಉದ್ಧಾರ ಆಗಿದಾರೆ!” ಎಂದರು. (ಅಣ್ಣಾವ್ರು ಕೂಡ ರಂಗಭೂಮಿ ದಿನಗಳಲ್ಲಿ ಬಾಲಣ್ಣನಿಂದ ಒದೆ ತಿಂದಿದ್ರಂತೆ). ರೂಂಗೆ ಹಿಂತಿರುಗಿದ ನಂತರ ನಾನು ಬಾಲಣ್ಣನ ಬಳಿ ಹೋಗಿ, “ಬೆಳಗ್ಗೆಯಿಂದ ನಿಮ್ಮನ್ನು ಮಾತನಾಡಿಸದೇ ಇದ್ದುದು ತುಂಬಾ ತಪ್ಪಾಯ್ತು..” ಎಂದು ಕ್ಷಮೆಯಾಚಿಸಿದೆ. ಆಗ ಬಾಲಣ್ಣ, “ಬಹಳ ಅನುಭವಿಸಿಬಿಟ್ಟಿದೀನಿ, ನಿದ್ದೇಲಿ ಎಬ್ಬಿಸಿಬಿಟ್ರೆ ನನಗೆ ಕೋಪ ತಡ್ಕೋಳಾಕೆ ಆಗೋಲ್ಲ.. ಹೊಡೆದು ಬಿಡ್ತೀನಿ” ಎಂದು ಪಶ್ಚಾತ್ತಾಪ ಪಟ್ಟರು.
(ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)