(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ)
ವನ್ಯಜೀವಿಗಳು ಮತ್ತು ಮಾನವನ ಮಧ್ಯೆಯ ಸ್ನೇಹ, ಬಾಂಧವ್ಯದ ಕುರಿತ ಹಲವು ಕತೆಗಳು ಬೆಳ್ಳಿತೆರೆಯಲ್ಲಿ ಮೂಡಿಬಂದಿವೆ. ಕೆ.ಎಸ್.ಎಲ್.ಸ್ವಾಮಿ ನಿರ್ಮಿಸಿ, ನಿರ್ದೇಶಿಸಿದ ‘ಜಂಬೂಸವಾರಿ’ (1993) ಅಂತಹ ಚಿತ್ರಗಳಲ್ಲೊಂದು. ಈ ಸಿನಿಮಾಗೆ ಶ್ರೇಷ್ಠ ರಾಷ್ಟ್ರೀಯ ಮಕ್ಕಳ ಚಿತ್ರ ಪ್ರಶಸ್ತಿ ಸಂದಿದೆ. ಪುಟಾಣಿ ಆನೆ ಮರಿ ಚಿತ್ರದ ಪ್ರಮುಖ ಪಾತ್ರದಲ್ಲಿದೆ. ತರಬೇತಿ ನೀಡಿದ್ದ ಈ ಮರಿಯನ್ನು ಮದರಾಸಿನಿಂದ ತರಿಸಲಾಗಿತ್ತು. ಚಿತ್ರೀಕರಣದುದ್ದಕ್ಕೂ ಆನೆಯ ಜೊತೆಯಲ್ಲಿ ತರಬೇತುದಾರನೂ ಇದ್ದ. ಆನೆ ಮರಿ ನಮ್ಮೊಂದಿಗೆ ತುಂಬಾ ಹೊಂದಿಕೊಂಡಿತ್ತು.
ಸಾಮಾನ್ಯವಾಗಿ ಚಿತ್ರೀಕರಣದ ವೇಳೆ ತಂಡದ ಸದಸ್ಯರಿಗೆ ಆಗಾಗ್ಗೆ ಕಾಫಿ, ಟೀ ನೀಡುತ್ತಾರೆ. ಆ ರೀತಿ ನಾವು ಟೀ ಕುಡಿಯುತ್ತಿದ್ದರೆ, ಮರಿಯಾನೆ ನಮ್ಮ ತೋಳಿಗೆ ತನ್ನ ಸೊಂಡಿಲು ಹಾಕಿ ಎಳೆಯುತ್ತಿತ್ತು. “ಮೊದಲು ಆನೆಗೆ ಟೀ ಕೊಟ್ಟು ನಂತರ ನಮಗೆ ಟೀ ಕೊಡು” ಎಂದು ನಾವು ಕಾಫಿ, ಟೀ ಕೊಡುವ ಹುಡುಗರಿಗೆ ಹೇಳುತ್ತಿದ್ದೆವು. ಒಂದು ಬಕೆಟ್ನಲ್ಲಿ ಟೀ ಹಾಕಿ ಅದರ ಮುಂದಿಡುತ್ತಿದ್ದರು. ಅದು ಸಂತೃಪ್ತಿಯಿಂದ ಕುಡಿಯುತ್ತಿತ್ತು! ವನ್ಯಜೀವಿಗಳಿಗೆ ನಾವು ಪ್ರೀತಿ ತೋರಿಸಿದರೆ ಅವು ನಮ್ಮೊಂದಿಗೆ ಹೊಂದಿಕೊಂಡು ಬಾಳಲು ಇಷ್ಟಪಡುತ್ತವೆ. ತನ್ನ ನೈಜ ಪರಿಸರಕ್ಕೆ ಹೋಗಲು ಇಷ್ಟಪಡುವುದಿಲ್ಲ. ‘ಜಂಬೂಸವಾರಿ’ ಚಿತ್ರದ ಕಥೆ ಸಹ ಅದೇ ರೀತಿ ಇತ್ತು.