‘ಚೋಮನದುಡಿ’ ಚಿತ್ರದಲ್ಲಿನ ‘ಚೋಮ’ನ ಪಾತ್ರದ ಅತ್ಯುತ್ತಮ ನಟನೆಗೆ ಕನ್ನಡಕ್ಕೆ ಮೊದಲ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿ ತಂದುಕೊಟ್ಟವರು ವಾಸುದೇವರಾವ್. ಬಾಲನಟನಾಗಿ ವೃತ್ತಿರಂಗಭೂಮಿಗೆ ಪರಿಚಯವಾದ ಅವರು ಗುಬ್ಬಿ ಕಂಪನಿಯ ದೊಡ್ಡ ಕಲಾವಿದರಾಗಿ ಗುರುತಿಸಿಕೊಂಡವರು. ಉತ್ತಮ ಕಂಠ ಮತ್ತು ಭಾವಾಭಿವ್ಯಕ್ತಿಯಿಂದಾಗಿ ವೈವಿಧ್ಯಮಯ ಪಾತ್ರಗಳ ಮೂಲಕ ಉತ್ತಮ ಕಲಾವಿದರಾಗಿ ಜನಪ್ರಿಯತೆ ಗಳಿಸಿದರು. ಗುಬ್ಬಿ ಕಂಪನಿಯಲ್ಲಿದ್ದಾಗ ಸಹಕಲಾವಿದರ ವಲಯದಲ್ಲಿ ಅವರು ‘ಬೇಬಿ’ ಎಂದೇ ಕರೆಸಿಕೊಳ್ಳುತ್ತಿದ್ದರು.

ಗುಬ್ಬಿ ಕಂಪನಿಯಲ್ಲಿ ನಟಿಸಿ ಮುಂದೆ ಕನ್ನಡ ಚಿತ್ರರಂಗದ ಪ್ರಮುಖ ತಾರೆಯರಾದ ರಾಜಕುಮಾರ್, ಬಾಲಕೃಷ್ಣ, ಜಿ.ವಿ.ಅಯ್ಯರ್, ನರಸಿಂಹರಾಜು ಮತ್ತಿತರರು ವಾಸುದೇವರಾವ್ ಅವರ ರಂಗಭೂಮಿ ಗೆಳೆಯರು. ‘ಚೋಮನ ದುಡಿ’ ನಿರ್ದೇಶಿಸಿದ ಬಿ.ವಿ.ಕಾರಂತರೊಂದಿಗಿನ ವಾಸುದೇವರಾವ್ ಅವರ ಒಡನಾಟ ಶುರುವಾಗಿದ್ದು ಕೂಡ ಗುಬ್ಬಿ ಕಂಪನಿಯಲ್ಲೇ. ಸಾಹಿತಿ ಶಿವರಾಮ ಕಾರಂತರ ಕೃತಿಯನ್ನು ಆಧರಿಸಿ ಬಿ.ವಿ.ಕಾರಂತರು ನಿರ್ದೇಶಿಸಿದ ‘ಚೋಮನ ದುಡಿ’ (1975) ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಈ ಚಿತ್ರದಲ್ಲಿ ‘ಚೋಮ’ನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ ವಾಸುದೇವರಾವ್ ರಾಷ್ಟ್ರಪ್ರಶಸ್ತಿಯ ಮನ್ನಣೆಗೆ ಪಾತ್ರರಾದರು.

ಹುಲಿ ಚಂದ್ರಶೇಖರ್ ನಿರ್ದೇಶನದ ‘ಹುಲಿ ಬಂತು ಹುಲಿ’ ಚಿತ್ರದಲ್ಲಿ ಬುಡಕಟ್ಟು ಜನರ ನಾಯಕನಾಗಿ ವಾಸುದೇವರಾವ್ ಅವರಿಗೆ ಗಮನಾರ್ಹ ಪಾತ್ರವಿತ್ತು. ಬರಗೂರು ರಾಮಚಂದ್ರಪ್ಪನವರ ಒಂದು ಊರಿನ ಕತೆ, ದಂಗೆ ಎದ್ದ ಮಕ್ಕಳು, ದೊಂಬರ ಕೃಷ್ಣ, ದೇವರೇ ದಿಕ್ಕು, ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ, ಕಳಸಾಪುರದ ಹುಡುಗರು… ಅವರು ನಟಿಸಿದ ಕೆಲವು ಪ್ರಮುಖ ಕನ್ನಡ ಚಿತ್ರಗಳು. ಭಾರತದ ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರ ‘ಒಕು ಊರಿ ಕಥಾ’, ಶ್ಯಾಂ ಬೆನಗಲ್ ನಿರ್ದೇಶನದ ‘ಕೊಂಡೂರ’, ಮಣಿರತ್ನಂ ಅವರ ‘ನಾಯಗನ್’, ‘ಬಾಂಬೆ’ ಚಿತ್ರಗಳಲ್ಲಿ ವಾಸುದೇವರಾವ್ ನಟಿಸಿದ್ದಾರೆ.

ನಟ ವಾಸುದೇವರಾವ್ ಅವರ ಕುರಿತಾಗಿ ಹಿರಿಯ ಸಿನಿಮಾ ವಿಶ್ಲೇಷಕ ಕೆ.ಫಣಿರಾಜ್ ಅವರ ಒಂದು ಟಿಪ್ಪಣಿ ಇಲ್ಲಿದೆ –
ಎಂವಿವಿ ಯಾನೆ ಬೇಬಿ, ವೃತ್ತಿ ರಂಗಭೂಮಿಯ ನಟರ ಬದುಕಿನ, ಕಾಲದ ಹರಿವಲ್ಲಿ ತನ್ನ ಬವಣೆಯ ಜೀವದ ಹಾಯಿ ನಡೆಸುವ ಬಗೆಗೆ ಒಂದು ಪ್ರತಿಮೆ. ಗುಬ್ಬಿ ಕಂಪೆನಿಯ ವೃತ್ತಿವಂತಿಕೆಯ ಹಲವು ನಂಬಿಕೆಗಳ ಪ್ರತೀಕದಂತಿದ್ದ ಬೇಬಿಯವರ ಇದ್ದಲ್ಲೇ ಇದ್ದು ಮಣ್ಣಾಗುವ ಗುಣವನ್ನು ಬಿ.ವಿ.ಕಾರಂತರು ತಮ್ಮ ಜೀವನಗಾಥೆ ‘ ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಯಲ್ಲಿ ನಿರೂಪಿಸಿದ್ದಾರೆ.
1960ರ ದಶಕದ ಮೊದಲು ಇರಬೇಕು; ಗುಬ್ಬಿ ಕಂಪೆನಿಯು ತಿಪಟೂರಲ್ಲಿ ಕ್ಯಾಂಪ್ ಹಾಕಿದೆ; ಕಂಪೆನಿಯ ಒಬ್ಬ ಮಾಂಸ ಕೊಳ್ಳಲು ಹೋಗಿ ಅಂಗಡಿಯವನ ಜೊತೆ ಚೌಕಾಶಿಯು ಹಿಂಸಾತ್ಮಕವಾಗಿ ತಿರುಗಿ, ಕೋಮು ಹಿಂಸೆ ಕಿಡಿ ಹತ್ತಿದೆ; ದೊಂಬಿಯ ಲಾಭ ಪಡೆದು, ಕಾರಂತರೂ ಸೇರಿದಂತೆ, ಕಂಪೆನಿಯ ಹಲವು ಕಲಾವಿದರು ಬಟ್ಟೆ ಅಂಗಡಿಗಳಿಂದ ಥಾನುಗಟ್ಟಲೆ ಸಿಲ್ಕ್ ಬಟ್ಟೆಯನ್ನು ಲೂಟಿ ಮಾಡಿ ತಂದಿದ್ದಾರೆ; ಇದರಲ್ಲಿ ಭಾಗಿಯಾಗದ ಬೇಬಿಗೆ ಕಾರಂತರು ‘ ತಗೊಳ್ಳಿ! ಸಿಲ್ಕ್ ಅಂಗಿ ಹೊಲಿಸಿಕೊಳ್ಳಿ’ ಎಂದು ಲೂಟಿಯ ಪಾಲು ಕೊಡಲು ಬಂದಾಗ ಬೇಬಿ “ಈ ಪಾಪದ ಬಟ್ಟೆ ನನಗೆ ಬೇಡ! ” ಎಂದಷ್ಟೇ ಹೇಳಿ, ಹೇವರಿಕೆಯ ಭಾವದಲ್ಲಿ ನಡೆದದ್ದು ಕಾರಂತರನ್ನು ದಂಗು ಬಡಿಸುತ್ತದೆ!. ಹೀಗೆ, ಬೇಬಿಯವರ ಕುರಿತು, ಹಲವು ನೆನಪಲ್ಲುಳಿಯುವ ಚಿತ್ರಗಳು, ಕಾರಂತರ ಜೀವನಗಾಥೆಯಲ್ಲಿದೆ.
ಎಸ್.ವಿ.ವಾಸುದೇವರಾವ್ | ಜನನ: 1921 | ನಿಧನ: 22/03/2002