ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಅಪ್ಪಟ ತಂತ್ರಜ್ಞ ಪುಟ್ಟಣ್ಣ

ಪೋಸ್ಟ್ ಶೇರ್ ಮಾಡಿ
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ದಕ್ಷಿಣ ಭಾರತದ ಇತರೆ ಚಿತ್ರರಂಗಗಳು ಮಾತ್ರವಲ್ಲ ಬಾಲಿವುಡ್‌ನವರೂ ಕನ್ನಡ ಸಿನಿಮಾದತ್ತ ಹೊರಳಿ ನೋಡುವಂಥ ಚಿತ್ರಗಳನ್ನು ರೂಪಿಸಿದವರು ಪುಟ್ಟಣ್ಣ ಕಣಗಾಲ್. ಅವರು ಅಗಲಿ ಇಂದಿಗೆ (ಜೂನ್ 5) ಮೂವತ್ತಾರು ವರ್ಷ. ಪುಟ್ಟಣ್ಣನವರ ಹತ್ತು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಪ್ರಗತಿ ಅಶ್ವತ್ಥ ನಾರಾಯಣ ಅವರು ಮೇರು ನಿರ್ದೇಶಕನನ್ನು ಸ್ಮರಿಸಿದ್ದಾರೆ.

ಪುಟ್ಟಣ್ಣನವರನ್ನು ಮೊದಲ ಬಾರಿ ನಾನು ಭೇಟಿ ಮಾಡಿದ್ದು ಮದರಾಸಿನ ವೀನಸ್ ಸ್ಟುಡಿಯೋದಲ್ಲಿ. ಅವರ `ಬೆಳ್ಳಿಮೋಡ’ (1965) ಸಿನಿಮಾ ಸ್ಟಿಲ್ ಫೋಟೋಗ್ರಫಿಗೆಂದು ಹೋಗಿದ್ದೆ. ಮುಂದೆ ಅವರ ನಿರ್ದೇಶನದ ಹತ್ತು ಸಿನಿಮಾಗಳಿಗೆ (ಒಂಬತ್ತು ಕನ್ನಡ ಮತ್ತು ಒಂದು ಮಲಯಾಳಂ) ಕೆಲಸ ಮಾಡಿದೆ. ಅವರೊಂದಿಗೆ ಕೆಲಸ ಮಾಡುವ ಮೂಲಕ ನನಗೂ ಕಲಿಯಲು ಸಾಧ್ಯವಾಯ್ತು ಎಂದು ಹೇಳಬಹುದು. ಈಗಲೂ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯನವರ ಹೆಸರು ಹೇಳಿ ನನ್ನನ್ನು ಗುರುತಿಸುವಾಗ ಹೆಮ್ಮೆ ಎನಿಸುತ್ತದೆ.

ನೀವು ಗಮನಿಸಿ, ಪುಟ್ಟಣ್ಣನವರ ಸಿನಿಮಾಗಳ ಪ್ರತೀ ಸೀನ್‌ಗಳಿಗೂ ಒಂದು ಕಲಾತ್ಮಕ ಫ್ರೇಮ್ ಇರುತ್ತದೆ. ಅವರಿಗೆ ಕ್ಯಾಮರಾ ಆಂಗಲ್‌ಗಳ ಬಗ್ಗೆ ಸ್ಪಷ್ಟ ಚಿತ್ರಣವಿತ್ತು. ಅಗ್ಗದ ಗಿಮಿಕ್‌ಗಳ ಬಗ್ಗೆ ಕಿಡಿಕಾರುತ್ತಿದ್ದ ಅವರು ಅನಗತ್ಯವಾಗಿ ಟೆಕ್ನಾಲಜಿ ಬಳಕೆ ಮಾಡುತ್ತಿರಲಿಲ್ಲ. ಕತೆ, ದೃಶ್ಯಕ್ಕೆ ಅಗತ್ಯವಿದ್ದರಷ್ಟೇ ಕ್ಯಾಮರಾ ತಂತ್ರಗಾರಿಕೆ ಬಳಕೆಯಾಗುತ್ತಿತ್ತು. `ನಾಗರಹಾವು’ ಚಿತ್ರದ ಹಾಡನ್ನು ಸ್ಲೋ ಮೋಷನ್‌ನಲ್ಲಿ ಚಿತ್ರಿಸಿದ ಪುಟ್ಟಣ್ಣ `ಋಣಮುಕ್ತಳು’ ಚಿತ್ರಕ್ಕೆ ಝೂಮ್ ಬಳಕೆ ಮಾಡಿರಲೇ ಇಲ್ಲ.

ತಂತ್ರಜ್ಞರನ್ನು ಅವರು ಅತ್ಯಂತ ಸಮರ್ಥವಾಗಿ ದುಡಿಸಿಕೊಂಡರು. ಸಾಧಾರಣ ಎನಿಸಿಕೊಂಡ ತಂತ್ರಜ್ಞರು ಕೂಡ ಪುಟ್ಟಣ್ಣನವರ ಸಂಗದಲ್ಲಿ ಅತ್ಯುತ್ತಮ ಕೆಲಸಗಾರರಾಗಿ ಹೊರಹೊಮ್ಮಿದರು. ಚಿತ್ರೀಕರಣವಾದ ನಂತರ ನಾನು ಸ್ಟಿಲ್ಸ್ ತೆಗೆದುಕೊಳ್ಳುವಾಗಲೂ ಅವರು ಅಲ್ಲಿರುತ್ತಿದ್ದರು. ಮೂವೀ ಕ್ಯಾಮರಾ ಪೊಸಿಷನ್‌ನಲ್ಲೇ ಫೋಟೋ ತೆಗೆಯಬೇಕಾಗಿತ್ತು. ಆಗ ಪುಟ್ಟಣ್ಣ ನನಗೂ ಸೂಕ್ತ ನಿರ್ದೇಶನ ನೀಡುತ್ತಿದ್ದರು. ಲೈಟಿಂಗ್ ಬಗ್ಗೆ ಅವರಿಗೆ ಅತಿಯಾದ ಕಾಳಜಿ. ಟೇಕ್‌ಗೆ ಮುನ್ನ ಕಲಾವಿದರಿಗೆ ಲೈಟಿಂಗ್ ರಿಹರ್ಸಲ್‌ ಕೊಡುತ್ತಿದ್ದುದು ಕಡ್ಡಾಯವಾಗಿತ್ತು.

ಪುಟ್ಟಣ್ಣನವರೊಂದಿಗೆ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ

ನಿರ್ದೇಶಕ ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ನಮಗೆ ಈಗಿನ ತಂತ್ರಜ್ಞರ ಕಾರ್ಯವೈಖರಿ ನೋಡಿದಾಗ ಕೆಲವು ಬಾರಿ ಸೋಜಿಗವೆನಿಸುತ್ತದೆ. ತೆರೆಯ ಮೇಲಿನ ಚಲಿಸುವ ಚಿತ್ರಗಳಿಗೂ, ಹಿನ್ನೆಲೆ ಸಂಗೀತಕ್ಕೂ ಸಂಬಂಧವಿಲ್ಲದಿದ್ದರೆ ಫ್ರೇಮ್‌ಗಳು ನೀರಸವೆನಿಸುತ್ತವೆ. ದೃಶ್ಯ ಮಾಧ್ಯಮವನ್ನು ದುಡಿಸಿಕೊಳ್ಳುವ ಕಲೆ ಗೊತ್ತಿರದಿದ್ದರೆ ಜನರನ್ನು ತಲುಪಲು ಸಾಧ್ಯವೇ ಇಲ್ಲ. ಪುಟ್ಟಣ್ಣನವರಿಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲಿಯೂ ಅಪಾರ ಜ್ಞಾನವಿತ್ತು ಮತ್ತು ಅವರು ಇದನ್ನು ಸಮರ್ಪಕವಾಗಿ ದುಡಿಸಿಕೊಳ್ಳುತ್ತಿದ್ದರು. ಹಾಗಾಗಿಯೇ ಅವರು ಚಿತ್ರಿಸಿರುವ ಪ್ರತೀ ಸನ್ನಿವೇಶಗಳಲ್ಲಿಯೂ ಜೀವಂತಿಕೆ ಕಾಣಿಸುವುದು.

ಸೆಟ್‌ನಲ್ಲಿ ಪುಟ್ಟಣ್ಣನವರೊಂದಿಗೆ ಚಿತ್ರಕ್ಕೆ ಸಂಭಾಷಣೆ, ಗೀತೆಗಳನ್ನು ಬರೆದವರು ಇರುತ್ತಿದ್ದರು. ಪ್ರತೀ ಶಾಟ್‌ಗೆ ಮುನ್ನ ಪರಸ್ಪರರಲ್ಲಿ ಚರ್ಚೆ ನಡೆಯುತ್ತಿತ್ತು. ಸೆಟ್‌ನಲ್ಲಿ ಜೊತೆಗಿರುವ ಬರಹಗಾರರ ಅಭಿಪ್ರಾಯಗಳನ್ನು ಪಡೆದ ನಂತರ ತಮ್ಮ ಹೇಳಿಕೆಯನ್ನೂ ಪುಟ್ಟಣ್ಣ ದಾಖಲಿಸುತ್ತಿದ್ದರು. ಇವುಗಳಲ್ಲಿ ಅತ್ಯಂತ ಸಮರ್ಪಕವೆನಿಸುವ ಅಭಿಪ್ರಾಯವೊಂದು ಸನ್ನಿವೇಶವಾಗಿ ಮೈದಾಳುತ್ತಿತ್ತು. ಪುಟ್ಟಣ್ಣ ಸನ್ನಿವೇಶವೊಂದನ್ನು ಕ್ಷಣಕ್ಷಣಕ್ಕೂ ಚೆಂದಗೊಳಿಸಲು ಶ್ರಮಿಸುತ್ತಿದ್ದರು. ಕಲಾವಿದರಿಗೆ ಸ್ವತಃ ತಾವೇ ಅಭಿನಯಿಸಿ ತೋರಿಸುವ ಪರಿಪಾಠ ರೂಢಿಸಿಕೊಂಡಿದ್ದ ನಿರ್ದೇಶಕ ಅವರು. ನಟ, ನಟಿಯರು ಇದನ್ನು ಶ್ರದ್ಧೆಯಿಂದ ಅನುಸರಿಸಿದರೆ ಸಾಕಿತ್ತು. ಹೀಗೆ ಪುಟ್ಟಣ್ಣನವರ ನಿರ್ದೇಶನದಲ್ಲಿ ತೀರಾ ಸಾಧಾರಣ ಎನ್ನುವವರು ಕೂಡ ಪಳಗಿದ ಕಲಾವಿದರಾಗಿ ಹೆಸರು ಮಾಡಿದರು.

ನಾನು ನೋಡಿದಂತೆ, ವೃತ್ತಿಪರತೆಗೆ ಒಳ್ಳೆಯ ಉದಾಹರಣೆ ಪುಟ್ಟಣ್ಣ. ಅವರ ಶೂಟಿಂಗ್ ಸೆಟ್‌ನಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ಶಿಸ್ತು ಮೈಗೂಡಿರುತ್ತಿತ್ತು. ಸೆಟ್‌ನಲ್ಲಿ ಕೆಲಸ ಮಾಡುವಾಗ ಅನುಚಿತ ವರ್ತನೆ, ಜೋರು ದನಿಯಲ್ಲಿ ಮಾತನಾಡುವುದನ್ನು ಪುಟ್ಟಣ್ಣ ಸಹಿಸುತ್ತಿರಲಿಲ್ಲ. ಯಾವುದೇ ಒತ್ತಡವಿಲ್ಲದೆ ಆರಾಮವಾಗಿ  ಚಿತ್ರಿಸುವುದು ಅವರ ಶೈಲಿ. ಸೆಟ್‌ನಲ್ಲಿ ಎಲ್ಲರಿಗೂ ಪುಟ್ಟಣ್ಣನವರ ರೀತಿ, ನೀತಿಯ ಅರಿವಿರುತ್ತಿತ್ತು. ಹಾಗಾಗಿ ಅವರ ಕೋಪಕ್ಕೆ ಆಸ್ಪದ ನೀಡದಂತೆ ನಡೆದುಕೊಳ್ಳುತ್ತಿದ್ದರು.

ಬೆಳಗ್ಗೆ ಒಂಬತ್ತೂವರೆಗೇ ಪ್ಯಾಕ್ ಅಪ್!

ಪುಟ್ಟಣ್ಣನವರು ತಾವು ಅಂದುಕೊಂಡಂತೆಯೇ ಶಾಟ್ ಮೂಡಿಬರಬೇಕೆಂದು ಪಟ್ಟು ಹಿಡಿಯುತ್ತಿದ್ದರು. ಇದಕ್ಕಾಗಿ ಅವರೆಷ್ಟು ಶ್ರಮ ಹಾಕುತ್ತಿದ್ದರು ಎನ್ನುವುದಕ್ಕೆ `ಪಡುವಾರಹಳ್ಳಿ ಪಾಂಡವರು’ ಚಿತ್ರದ ಸನ್ನಿವೇಶವೊಂದನ್ನು ಉದಾಹರಿಸಬಹುದು. ಚಿತ್ರದ ಕತೆಗೆ ತಿರುವು ನೀಡುವಂಥ ಸನ್ನಿವೇಶವೊಂದನ್ನು ಅಂದು ಚಿತ್ರಿಸಬೇಕಿತ್ತು. ನಟ ರಾಮಕೃಷ್ಣ ತನ್ನ ಮನೆ ತೊರೆದು ಹೋಗುವ ಸನ್ನಿವೇಶವದು. ಆತ ಗ್ರಾಮದ ಪ್ರತೀ ಮನೆ ಎದುರು ನಿಂತು ಡೈಲಾಗ್ ಹೇಳಿ ಊರಿನ ಹೆಬ್ಬಾಗಿಲಿನಿಂದ ತೆರಳುತ್ತಾನೆ. ಸುಮಾರು ಇನ್ನೂರೈವತ್ತು – ಮುನ್ನೂರು ಅಡಿಗಳ ಶಾಟ್ ಅದು. ಪುಟ್ಟಣ್ಣ ಇದನ್ನು ಒಂದೇ ಶಾಟ್‌ನಲ್ಲಿ ಚಿತ್ರಿಸಬೇಕೆಂದಿದ್ದರು.

ಅತಿ ಹೆಚ್ಚೆಂದರೆ ನೂರು ಅಡಿವರೆಗಷ್ಟೇ ಚಿತ್ರಿಸಲು ಸಾಧ್ಯವಾಗುತ್ತಿದ್ದುದು. ಮುನ್ನೂರು ಅಡಿಯಷ್ಟು ದೂರಕ್ಕೆ ಟ್ರ್ಯಾಲಿ, ಟ್ರ್ಯಾಕ್‌ ಹಾಕಲು ಸಾಧ್ಯವಿರಲಿಲ್ಲ. ಈ ಶಾಟ್‌ಗಾಗಿ ಎರಡು ದಿನ ಏನೇನೋ ಪ್ರಯೋಗಗಳನ್ನು ನಡೆಸಿದ್ದಾಯ್ತು. ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವಂತೆ ನಾಲ್ವರು ಕ್ಯಾಮರಾ ಹೊತ್ತೊಯ್ದರು. ಇದೇ ರೀತಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದಾಯ್ತು. ಜರ್ಕ್‌ ಬರುತ್ತಿದ್ದುದರಿಂದ ಈ ಐಡಿಯಾಗಳು ವರ್ಕ್‌ ಆಗಲಿಲ್ಲ. ಅಂದು ಸಂಜೆ ಪುಟ್ಟಣ್ಣ, ನಟಿ ಆರತಿ ಅಣ್ಣ ಮುಕುಂದ ಹಾಗೂ ಛಾಯಾಗ್ರಾಹಕ ಮಾರುತಿ ರಾವ್ ಮತ್ತೊಂದು ಪ್ರಯೋಗ ನಡೆಸುವುದೆಂದು ಮಾತನಾಡಿಕೊಂಡರು.

ಮರುದಿನ ಬೆಳಗ್ಗೆ ಆರೂವರೆ ಹೊತ್ತಿಗೆ ಶೂಟಿಂಗ್ ಶುರುವಾಯ್ತು. ನಟ ರಾಮಕೃಷ್ಣ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಹಿಂದಿನ ದಿನ ಮಾತನಾಡಿಕೊಂಡಂತೆ, ಸಹ ನಿರ್ದೇಶಕ ಮುಕುಂದ ನಿಧಾನವಾಗಿ ಸ್ಕೂಟರ್ ಓಡಿಸಬೇಕು. ಹಿಂದೆ ಕುಳಿತ ಮಾರುತಿರಾವ್ ತಮ್ಮ ಕ್ಯಾಮರಾದಲ್ಲಿ ದೃಶ್ಯ ಸೆರೆಹಿಡಿಯಬೇಕಾಗಿತ್ತು. ಪುಟ್ಟಣ್ಣ ಆ್ಯಕ್ಷನ್ ಹೇಳುತ್ತಿದ್ದಂತೆ ರಾಮಕೃಷ್ಣ ಸಂಭಾಷಣೆ ಹೇಳುತ್ತಾ ಪ್ರತೀ ಮನೆಯನ್ನು ಹಾದು ಊರಿನಿಂದ ಹೊರಗೆ ತೆರಳಿದರು. ಮುಕುಂದ, ಮಾರುತಿರಾವ್ ಸ್ಕೂಟರ್ ಮೇಲೆ ಅವರನ್ನು ಅನುಸರಿಸಿಕೊಂಡು ಹೋದರು. ಶಾಟ್ ಓಕೆ ಆಯ್ತು! ಪುಟ್ಟಣ್ಣನವರು ಅಂದುಕೊಂಡಂತೆಯೇ ಶಾಟ್ ಬಂತು. ಬೆಳಗ್ಗೆ ಏಳೂವರೆಗೆ ಶುರುವಾದ ಚಿತ್ರೀಕರಣ ಒಂಭತ್ತೂವರೆ ಹೊತ್ತಿಗೆ ಮುಗಿದಿತ್ತು. ಪುಟ್ಟಣ್ಣ, `ಪ್ಯಾಕ್ಅಪ್’ ಅಂದರು! ಎಲ್ಲರಿಗೂ ಆಶ್ಚರ್ಯ! `ನಾನು ಇಂದು ಏನು ಚಿತ್ರಿಸಬೇಕು ಅಂದುಕೊಂಡಿದ್ದೆನೋ ಅದು ಮುಗಿದಿದೆ. ಮುಂದಿನ ಶಾಟ್ ಏನೂಂತ ಯೋಚಿಸಿಲ್ಲ. ನಾಳೆ ನೋಡೋಣ. ಎಲ್ಲರೂ ಹೋಗಿ..!’ ಎಂದರು ಪುಟ್ಟಣ್ಣ. ಬೆಳ್ಳಂಬೆಳಗ್ಗೆ ಪ್ಯಾಕ್ಅಪ್ ಹೇಳಿದ್ದು ಆಗ ಗಾಂಧಿನಗರದಲ್ಲಿ ದೊಡ್ಡ ಸುದ್ದಿಯಾಗಿತ್ತು.

‘ಧರ್ಮಸೆರೆ’ ಸಿನಿಮಾ ಚಿತ್ರೀಕರಣದಲ್ಲಿ ಕಲಾವಿದರಿಗೆ ನಿರ್ದೇಶನ

ಪುಟ್ಟಣ್ಣರ ಅಭಿಮಾನಿ ಬಾಲಚಂದರ್

ಸೂಪರ್‌ `ಅವಳ್ ಒರು ತೊಡರ್ ಕಥೈ’ ತಮಿಳು ಚಿತ್ರವನ್ನು ಕನ್ನಡಕ್ಕೆ ತರಲು ನಿರ್ಮಾಪಕ ಚಂದೂಲಾಲ್ ಜೈನ್ ನಿರ್ಧರಿಸಿದ್ದರು. ತಮಿಳು ಸಿನಿಮಾ ನಿರ್ದೇಶಿಸಿದ್ದ ಕೆ.ಬಾಲಚಂದರ್ ಅವರೇ ಕನ್ನಡ ಅವತರಣಿಕೆಯನ್ನೂ (ಬೆಂಕಿಯಲ್ಲಿ ಅರಳಿದ ಹೂ) ನಿರ್ದೇಶಿಸುವುದೆಂದು ಗೊತ್ತಾಯಿತು. ಕನ್ನಡ ಅವತರಣಿಕೆಗೂ ತಮ್ಮೊಂದಿಗೆ ಮದರಾಸಿನ ತಂತ್ರಜ್ಞರೇ ಕೆಲಸ ಮಾಡಬೇಕೆಂದು ಬಾಲಚಂದರ್ ಹೇಳಿದ್ದರು. ಆದರೆ, ಸ್ಟಿಲ್ ಫೋಟೋಗ್ರಾಫರ್ ಆಗಿ ನಾನೇ ಕೆಲಸ ಮಾಡಬೇಕೆನ್ನುವುದು ನಿರ್ಮಾಪಕ ಚಂದೂಲಾಲ್ ಜೈನ್ ಆಶಯವಾಗಿತ್ತು. ಸ್ಟಿಲ್‌ಗಳಿಗೆಂದು ಪ್ರತೀ ಬಾರಿ ಮದ್ರಾಸ್‌ಗೆ ಹೋಗಿ ಬರುವ ತಾಪತ್ರಯ ತಪ್ಪುತ್ತದೆ ಎನ್ನುವ ಉದ್ದೇಶವೂ ಇದರ ಹಿಂದಿತ್ತು.

`ಇವರು ಪುಟ್ಟಣ್ಣ ಕಣಗಾಲ್ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ನಿಮ್ಮ ಚಿತ್ರಕ್ಕೂ ಇವರೇ ಇರಲಿ..’ ಎಂದು ಚಂದೂಲಾಲ್ ನಿರ್ದೇಶಕ ಬಾಲಚಂದರ್‌ಗೆ ನನ್ನನ್ನು ಪರಿಚಯಿಸಿದ್ದರು. ಪುಟ್ಟಣ್ಣನವರೊಂದಿಗೆ ಕೆಲಸ ಮಾಡಿದ ಫೋಟೋಗ್ರಾಫರ್ ಎನ್ನುವ ಒಂದೇ ಕಾರಣಕ್ಕೆ ಬಾಲಚಂದರ್ ನನ್ನನ್ನು ಒಪ್ಪಿಕೊಂಡರು. ಅವರು ಪುಟ್ಟಣ್ಣನವರ ಅಭಿಮಾನಿ ಎನ್ನುವುದು ಮುಂದಿನ ದಿನಗಳಲ್ಲಿ ನನಗೆ ಮನವರಿಕೆಯಾಯ್ತು. `ಬೆಂಕಿಯಲ್ಲಿ ಅರಳಿದ ಹೂ’ ಚಿತ್ರೀಕರಣದುದ್ದಕ್ಕೂ ಬಾಲಚಂದರ್, ಪುಟ್ಟಣ್ಣನವರ ವರ್ಕಿಂಗ್‌ ಸ್ಟೈಲ್ ಹಾಗೂ ಇತರೆ ಸಂಗತಿಗಳ ಬಗ್ಗೆ ನನ್ನನ್ನು ಕೇಳುತ್ತಿದ್ದರು. ಬಾಲಚಂದರ್ ಕೂಡ ದೊಡ್ಡ ನಿರ್ದೇಶಕರು. ಆದಾಗ್ಯೂ ಯಾವುದೇ ಹೆಚ್ಚುಗಾರಿಕೆ ಇಲ್ಲದೆ ಪುಟ್ಟಣ್ಣನವರ ಬಗ್ಗೆ ಅವರು ಕೇಳಿ ತಿಳಿದುಕೊಳ್ಳುತ್ತಿದ್ದರು. ಇದು ಬಾಲಚಂದರ್ ಸರಳತೆ, ಸಜ್ಜನಿಕೆಯನ್ನು ಎತ್ತಿ ಹಿಡಿದಿತ್ತು.

ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಅವರೊಂದಿಗೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಯಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಟಿ.ಜಿ.ಲಿಂಗಪ್ಪ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು

ಸ್ವರಮಾಂತ್ರಿಕ ಪಂಚಮ್

ಮೊಹಮ್ಮದ್ ರಫಿ – ಆಶಾ ಬೋಸ್ಲೆ ಹಾಡಿದ ‘ಚುರಾಲಿಯಾ  ಹೆ ತುಂನೆ ಜೋ ದಿಲ್’ ಹಾಡಿನ ಆರಂಭದ ರಿದಂಗೆ ಪಂಚಮ್‌

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ

ತಂದೆಯೇ ಗುರುವು

‘ವಿಜಯಚಿತ್ರ’ ಸಿನಿಪತ್ರಿಕೆಯ ಸುವರ್ಣ ಮಹೋತ್ಸವ ಸಂಚಿಕೆಗೆ (1984) ಚಿತ್ರಸಾಹಿತಿ ಆರ್‌.ಎನ್‌.ಜಯಗೋಪಾಲ್‌ ತಮ್ಮ ತಂದೆ, ಮೇರು ಚಿತ್ರಕರ್ಮಿ ಆರೆನ್ನಾರ್‌ ಅವರ ಬಗ್ಗೆ