ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಎಲ್.ವಿ.ಶಾರದಾ

ನಟಿ, ಸಾಕ್ಷ್ಯಚಿತ್ರ ನಿರ್ದೇಶಕಿ
ಪೋಸ್ಟ್ ಶೇರ್ ಮಾಡಿ
‘ವಂಶವೃಕ್ಷ’, ‘ಫಣಿಯಮ್ಮ’ ಸಿನಿಮಾಗಳ ಖ್ಯಾತಿಯ ನಟಿ ಎಲ್.ವಿ.ಶಾರದಾ ಅಗಲಿ ಇಂದಿಗೆ ಎರಡು ವರ್ಷ.

ರಂಗಭೂಮಿ ಬಗ್ಗೆ ಅಪಾರ ಒಲವಿದ್ದವರು ಎಲ್‌.ವಿ.ಶಾರದಾ. ನಾಟಕಗಳಲ್ಲಿ ಪಾತ್ರ ಮಾಡಬೇಕೆನ್ನುವ ತಮ್ಮ ಇರಾದೆಯನ್ನು ಅವರು ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರಲ್ಲಿ ಹೇಳಿಕೊಂಡಿದ್ದರು. ತಮ್ಮ ‘ವಂಶವೃಕ್ಷ’ (1972) ಚಿತ್ರದ ‘ಕಾತ್ಯಾಯಿನಿ’ ಪಾತ್ರಕ್ಕೆ ಶಾರದಾ ಅವರನ್ನು ಆಯ್ಕೆ ಮಾಡಿದ್ದರು ಕಾರಂತರು. ಹಾಗಾಗಿ ಮಹತ್ವದ ಚಿತ್ರದೊಂದಿಗೆ ಶಾರದಾ ಬೆಳ್ಳಿತೆರೆಗೆ ಪರಿಚಯವಾದರು. ನಟಿಸಿದ ಮೊದಲ ಚಿತ್ರಕ್ಕೇ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಪಡೆದ ಹೆಗ್ಗಳಿಕೆ ಅವರದಾಯಿತು.

‘ಮೊದಲ ಚಿತ್ರದ ಪಾತ್ರಕ್ಕೆ ಸಿಕ್ಕ ಮನ್ನಣೆ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟಿತು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಶಾರದಾ. ಡಾ.ರಾಜಕುಮಾರ್ ಅಭಿನಯದ ‘ಎರಡು ಕನಸು’ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿಬಂದಿತ್ತು. ಆದರೆ ವ್ಯಾಪಾರಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಆಗ ನಿರ್ಧರಿಸಿದ್ದರು ಶಾರದಾ. ಹಾಗಾಗಿ ಅದು ಕೈಗೂಡಲಿಲ್ಲ. ಮುಂದೆ ‘ವಾತ್ಸಲ್ಯ ಪಥ’ (1981) ಚಿತ್ರದ ನಟನೆಗೆ ಮತ್ತೊಮ್ಮೆ ಅವರಿಗೆ ರಾಜ್ಯಪ್ರಶಸ್ತಿ ಸಂದಿತು.

‘ವಂಶವೃಕ್ಷ’ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಜೊತೆ ಶಾರದಾ

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಅವರ ಮತ್ತೊಂದು ಪ್ರಮುಖ ಸಿನಿಮಾ. ‘ಒಂದು ಪ್ರೇಮದ ಕಥೆ’ ಚಿತ್ರದಲ್ಲಿ ರಜನೀಕಾಂತ್‌ರಿಗೆ ಜೋಡಿಯಾಗಿದ್ದರು. ಪ್ರೇಮಾ ಕಾರಂತ ನಿರ್ದೇಶನದ ‘ಫಣಿಯಮ್ಮ’ ಸಿನಿಮಾ ಶಾರದಾ ನಟನಾ ಬದುಕಿನ ಮತ್ತೊಂದು ಪ್ರಮುಖ ಚಿತ್ರವಾಯ್ತು. ಎಂ.ಕೆ.ಇಂದಿರಾ ಅವರ ಕಾದಂಬರಿ ಆಧರಿಸಿ ತಯಾರಾದ ಸಿನಿಮಾ ಶೀರ್ಷಿಕೆ ಪಾತ್ರದಲ್ಲಿ ಶಾರದಾ ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರರಾದರು. ‘ಫಣಿಯಮ್ಮ’ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ.

ಶಾರದಾ ಅಭಿನಯದ ‘ಬೂತಯ್ಯನ ಮಗ ಅಯ್ಯು’ ಚಿತ್ರದ ದೃಶ್ಯ

‘ಫಣಿಯಮ್ಮ’ ಪಾತ್ರಕ್ಕಾಗಿ ಶಾರದಾ ಅವರು ತಲೆಗೂದಲು ತೆಗೆಸಿದ್ದು ಆಗ ಚರ್ಚೆಗೆ ಗ್ರಾಸವಾಗಿತ್ತು. “ಪಾತ್ರಕ್ಕೆ ನ್ಯಾಯ ಸಲ್ಲಬೇಕೆಂದರೆ ಕಲಾವಿದರು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಬೇಕು” ಎಂದಿದ್ದರವರು. ಆದಿಶಂಕರಾಚಾರ್ಯ, ಮಧ್ವಾಚಾರ್ಯ, ನಕ್ಕಳಾ ರಾಜಕುಮಾರಿ, ಕಂಕಣ, ಮೈತ್ರಿ… ಅವರ ನಟನೆಯ ಕೆಲ ಪ್ರಮುಖ ಸಿನಿಮಾಗಳು. ಪಾತ್ರಗಳ ಆಯ್ಕೆಯಲ್ಲಿ ಅಪಾರ ಎಚ್ಚರಿಕೆ ವಹಿಸುತ್ತಿದ್ದ ಎಲ್‌.ವಿ.ಶಾರದಾ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಆದರೆ ಗಮನಾರ್ಹ ಪಾತ್ರಗಳ ಮೂಲಕ ನೆನಪಿನಲ್ಲಿಳಿದಿದ್ದಾರೆ. ನಟನೆ ಜೊತೆಗೆ ಅವರು ಸಾಕ್ಷ್ಯಚಿತ್ರಗಳ ನಿರ್ಮಾಣ – ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಕೆರೆಗಳ ಮಹತ್ವ, ಸಂರಕ್ಷಣೆ ಕುರಿತಾಗಿ ಅವರು ತಯಾರಿಸಿದ ‘ಕೆರೆ ಹಾಡು’ ಸಾಕ್ಷ್ಯಚಿತ್ರ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಎಲ್‌.ವಿ.ಶಾರದಾ | ಜನನ: 06/05/1939 | ನಿಧನ: 21/03/2019

ಎಲ್‌.ವಿ.ಶಾರದಾ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದ ‘ಫಣಿಯಮ್ಮ’ ಚಿತ್ರದ ಗೀತೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಗಜಾನನ ಜಾಗೀರ್‌ದಾರ

ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದ ಗಜಾನನ ಜಾಗೀರ್‌ದಾರ ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಮಹಾರಾಷ್ಟ್ರದ ವಿವಿಧ ನಗರದಲ್ಲಿ ನಾಟಕಗಳ ಪ್ರದರ್ಶನ ನೀಡಿದ

ಬಿ.ಎನ್.ಹರಿದಾಸ್

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ

ಜಾಗತಿಕ ಸಿನಿಮಾರಂಗ ಪ್ರಭಾವಿಸಿದ ನಿರ್ದೇಶಕ ಬರ್ಗ್‌ಮನ್‌

’ಮೆಟಾಫಿಸಿಕಲ್‌ ಪ್ರಶ್ನೆಗಳು ಇಂಗ್ಮರ್‌ ಬರ್ಗ್‌ಮನ್ ಸಿನಿಮಾಗಳ ಹಾಲ್‌ಮಾರ್ಕ್‌’ ಎಂದು ಗುರುತಿಸುತ್ತಾರೆ ಕನ್ನಡದ ಹಿರಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್‌. ಇಂದು (ಜುಲೈ 14)