ರಂಗಭೂಮಿ ಬಗ್ಗೆ ಅಪಾರ ಒಲವಿದ್ದವರು ಎಲ್.ವಿ.ಶಾರದಾ. ನಾಟಕಗಳಲ್ಲಿ ಪಾತ್ರ ಮಾಡಬೇಕೆನ್ನುವ ತಮ್ಮ ಇರಾದೆಯನ್ನು ಅವರು ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರಲ್ಲಿ ಹೇಳಿಕೊಂಡಿದ್ದರು. ತಮ್ಮ ‘ವಂಶವೃಕ್ಷ’ (1972) ಚಿತ್ರದ ‘ಕಾತ್ಯಾಯಿನಿ’ ಪಾತ್ರಕ್ಕೆ ಶಾರದಾ ಅವರನ್ನು ಆಯ್ಕೆ ಮಾಡಿದ್ದರು ಕಾರಂತರು. ಹಾಗಾಗಿ ಮಹತ್ವದ ಚಿತ್ರದೊಂದಿಗೆ ಶಾರದಾ ಬೆಳ್ಳಿತೆರೆಗೆ ಪರಿಚಯವಾದರು. ನಟಿಸಿದ ಮೊದಲ ಚಿತ್ರಕ್ಕೇ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಪಡೆದ ಹೆಗ್ಗಳಿಕೆ ಅವರದಾಯಿತು.
‘ಮೊದಲ ಚಿತ್ರದ ಪಾತ್ರಕ್ಕೆ ಸಿಕ್ಕ ಮನ್ನಣೆ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟಿತು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಶಾರದಾ. ಡಾ.ರಾಜಕುಮಾರ್ ಅಭಿನಯದ ‘ಎರಡು ಕನಸು’ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿಬಂದಿತ್ತು. ಆದರೆ ವ್ಯಾಪಾರಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಆಗ ನಿರ್ಧರಿಸಿದ್ದರು ಶಾರದಾ. ಹಾಗಾಗಿ ಅದು ಕೈಗೂಡಲಿಲ್ಲ. ಮುಂದೆ ‘ವಾತ್ಸಲ್ಯ ಪಥ’ (1981) ಚಿತ್ರದ ನಟನೆಗೆ ಮತ್ತೊಮ್ಮೆ ಅವರಿಗೆ ರಾಜ್ಯಪ್ರಶಸ್ತಿ ಸಂದಿತು.

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಅವರ ಮತ್ತೊಂದು ಪ್ರಮುಖ ಸಿನಿಮಾ. ‘ಒಂದು ಪ್ರೇಮದ ಕಥೆ’ ಚಿತ್ರದಲ್ಲಿ ರಜನೀಕಾಂತ್ರಿಗೆ ಜೋಡಿಯಾಗಿದ್ದರು. ಪ್ರೇಮಾ ಕಾರಂತ ನಿರ್ದೇಶನದ ‘ಫಣಿಯಮ್ಮ’ ಸಿನಿಮಾ ಶಾರದಾ ನಟನಾ ಬದುಕಿನ ಮತ್ತೊಂದು ಪ್ರಮುಖ ಚಿತ್ರವಾಯ್ತು. ಎಂ.ಕೆ.ಇಂದಿರಾ ಅವರ ಕಾದಂಬರಿ ಆಧರಿಸಿ ತಯಾರಾದ ಸಿನಿಮಾ ಶೀರ್ಷಿಕೆ ಪಾತ್ರದಲ್ಲಿ ಶಾರದಾ ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರರಾದರು. ‘ಫಣಿಯಮ್ಮ’ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ.
‘ಫಣಿಯಮ್ಮ’ ಪಾತ್ರಕ್ಕಾಗಿ ಶಾರದಾ ಅವರು ತಲೆಗೂದಲು ತೆಗೆಸಿದ್ದು ಆಗ ಚರ್ಚೆಗೆ ಗ್ರಾಸವಾಗಿತ್ತು. “ಪಾತ್ರಕ್ಕೆ ನ್ಯಾಯ ಸಲ್ಲಬೇಕೆಂದರೆ ಕಲಾವಿದರು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಬೇಕು” ಎಂದಿದ್ದರವರು. ಆದಿಶಂಕರಾಚಾರ್ಯ, ಮಧ್ವಾಚಾರ್ಯ, ನಕ್ಕಳಾ ರಾಜಕುಮಾರಿ, ಕಂಕಣ, ಮೈತ್ರಿ… ಅವರ ನಟನೆಯ ಕೆಲ ಪ್ರಮುಖ ಸಿನಿಮಾಗಳು. ಪಾತ್ರಗಳ ಆಯ್ಕೆಯಲ್ಲಿ ಅಪಾರ ಎಚ್ಚರಿಕೆ ವಹಿಸುತ್ತಿದ್ದ ಎಲ್.ವಿ.ಶಾರದಾ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಆದರೆ ಗಮನಾರ್ಹ ಪಾತ್ರಗಳ ಮೂಲಕ ನೆನಪಿನಲ್ಲಿಳಿದಿದ್ದಾರೆ. ನಟನೆ ಜೊತೆಗೆ ಅವರು ಸಾಕ್ಷ್ಯಚಿತ್ರಗಳ ನಿರ್ಮಾಣ – ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಕೆರೆಗಳ ಮಹತ್ವ, ಸಂರಕ್ಷಣೆ ಕುರಿತಾಗಿ ಅವರು ತಯಾರಿಸಿದ ‘ಕೆರೆ ಹಾಡು’ ಸಾಕ್ಷ್ಯಚಿತ್ರ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಎಲ್.ವಿ.ಶಾರದಾ | ಜನನ: 06/05/1939 | ನಿಧನ: 21/03/2019