ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸ್ಟಾರ್ ಕ್ಯಾಮರಾಮನ್ ಡಿ.ವಿ.ರಾಜಾರಾಂ

ಪೋಸ್ಟ್ ಶೇರ್ ಮಾಡಿ

ಬಂಗಾರದ ಮನುಷ್ಯ, ಶರಪಂಜರ, ಬೂತಯ್ಯನ ಮಗ ಅಯ್ಯು, ದೂರದ ಬೆಟ್ಟ, ಗಂಧದ ಗುಡಿ, ಮುತ್ತಿನ ಹಾರ, ಬಂಧನ… ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಎನಿಸಿದ ಹತ್ತಾರು ಸಿನಿಮಾಗಳ ಛಾಯಾಗ್ರಾಹಕ ಡಿ.ವಿ.ರಾಜಾರಾಂ. ಆಗ ಥಿಯೇಟರ್‌ಗಳಲ್ಲಿ ಸಿನಿಮಾಭಿಮಾನಿಗಳು ಟೈಟಲ್ ಕಾರ್ಡನಲ್ಲಿ ಇವರು ಹೆಸರು ಕಾಣಿಸಿದಾಕ್ಷಣ ತೆರೆಯ ಮೇಲೆ ನಾಣ್ಯ ತೂರುತ್ತಿದ್ದರು ಎಂದು ಸಿನಿಮಾರಂಗದ ಹಿರಿಯ ತಂತ್ರಜ್ಞರು ಸ್ಮರಿಸುತ್ತಾರೆ.

ರಾಜಾರಾಂ ಜನಿಸಿದ್ದು ತಮಿಳುನಾಡಿನ ಧರ್ಮಪುರಿ ಜಿಲ್ಲೆಗೆ ಸೇರಿದ ಡಂಕಣಿಕೋಟೆಯಲ್ಲಿ 1930, ಆಗಸ್ಟ್‌ 18ರಂದು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿ ಹಳೆಯದೊಂದು ಕ್ಯಾಮರಾದಲ್ಲಿ ಅವರು ತೆಗೆದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಛಾಯಾಗ್ರಾಹಕ ಆಗಬೇಕು ಎನ್ನುವ ಉಮೇದು ಅವರಿಗೆ ಶುರುವಾಗಿದ್ದು ಆಗಲೇ.

ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರ್ದೇಶಕ ಭಾರ್ಗವ, ಛಾಯಾಗ್ರಾಹಕ ಡಿ.ವಿ.ರಾಜಾರಾಂ, ನಟ – ನಿರ್ಮಾಪಕ ದ್ವಾರಕೀಶ್‌ (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಮುಂದೆ ಸಿನಿಮಾ ನಂಟಿದ್ದ ಸಂಬಂಧಿಯೊಬ್ಬರ ನೆರವಿನಿಂದ ಮದರಾಸಿನ ಸಿನಿಮಾ ಸ್ಟುಡಿಯೋ ಸೇರಿದರು (1952). ಸುಮಾರು ಹತ್ತು ವರ್ಷಗಳ ಕಾಲ ಫಿಲ್ಮ್‌ ಸೆಂಟರ್‌, ವಾಹಿನಿ ಸ್ಟುಡಿಯೋಗಳಲ್ಲಿ ದುಡಿದರು. ಭಾರತೀಯ ಸಿನಿಮಾ ಕಂಡ ಖ್ಯಾತ ಛಾಯಾಗ್ರಾಹಕ ಮಾರ್ಕಸ್‌ ಬಾರ್ಟ್ಲಿ, ಜೆ.ಜೆ.ವಿಜಯಂ, ಕೊಂಡಾರೆಡ್ಡಿ ಅವರ ಛಾಯಾಗ್ರಹಣ ಗುರುಗಳು. ರಾಜಾರಾಂ ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದ ಮೊದಲ ಸಿನಿಮಾ ಮಲಯಾಳಂನ ‘ಲೈಲಾ ಮಜ್ನು’. ಕನ್ನಡದಲ್ಲಿ ಅವರ ವೃತ್ತಿಜೀವನ ಆರಂಭವಾಗಿದ್ದು ರಾಜಕುಮಾರ್ ಅಭಿನಯದ ‘ಸಂತ ತುಕಾರಾಂ’ (1963) ಚಿತ್ರದೊಂದಿಗೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ 120ಕ್ಕೂ ಹೆಚ್ಚು ಸಿನಿಮಾಗಳಿಗೆ ಡಿವಿಆರ್ ಛಾಯಾಗ್ರಹಣ ಮಾಡಿದ್ದಾರೆ.

ನಿರ್ದೇಶಕ ಸಿದ್ದಲಿಂಗಯ್ಯನವರೊಂದಿಗೆ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಚಿತ್ರನಿರ್ದೇಶಕ ಭಾರ್ಗವ ಅವರೊಡಗೂಡಿ ‘ಕಲಾಕೃತಿ’ ಹೆಸರಿನ ಸಂಸ್ಥೆ ಆರಂಭಿಸಿ ಹತ್ತು ಚಿತ್ರಗಳನ್ನು ನಿರ್ಮಿಸಿದ್ದಾರೆ. ರಾಜಾರಾಂ ಛಾಯಾಗ್ರಹಣ ಮಾಡಿದ ಕೊನೆಯ ಸಿನಿಮಾ ‘ದೋಣಿ ಸಾಗಲಿ’. 1982ರಲ್ಲಿ ‘ಸೆನಿಟೆಕ್‌’ ಹೆಸರಿನಲ್ಲಿ ಔಟ್‌ಡೋರ್ ಯೂನಿಟ್ ಸ್ಥಾಪಿಸಿದರು. `ಬಂಗಾರದ ಮನುಷ್ಯ’, `ಮುತ್ತಿನ ಹಾರ’ ಮತ್ತು `ದೋಣಿ ಸಾಗಲಿ’ ಚಿತ್ರಗಳ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಜಾರಾಂಗೆ ಮೂರು ಬಾರಿ ರಾಜ್ಯ ಪ್ರಶಸ್ತಿ ಸಂದಿದೆ. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಇವರ ಪಟ್ಟ ಶಿಷ್ಯರಲ್ಲೊಬ್ಬರು. ರಾಜಾರಾಂ ಅವರ ಅಣ್ಣನ ಪುತ್ರ ಆರ್‌.ಮಂಜುನಾಥ್ ಅವರು ‘ಭಾಗ್ಯವಂತರು’ ಚಿತ್ರದೊಂದಿಗೆ ಛಾಯಾಗ್ರಹಣ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿ 25ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. (ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’)

‘ಗುರುಶಿಷ್ಯರು’ ಚಿತ್ರದ ಸೆಟ್‌ನಲ್ಲಿ ನಿರ್ದೇಶಕ ಭಾರ್ಗವ, ಖ್ಯಾತ ಹಿಂದಿ ತಾರೆ ದಿಲೀಪ್ ಕುಮಾರ್‌, ನಟ – ನಿರ್ಮಾಪಕ ದ್ವಾರಕೀಶ್‌, ಛಾಯಾಗ್ರಾಹಕ ಡಿ.ವಿ.ರಾಜಾರಾಂ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಾಮಾಜಿಕ ಕಳಕಳಿಯ ನಟ ವಿವೇಕ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ

ಟಿ.ಎಂ.ಸೌಂದರರಾಜನ್

ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್‌. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು