
ಚಿತ್ರನಿರ್ದೇಶಕ
ಉತ್ತಮ ನಟಿಯಾಗಿ ಮಾತ್ರವಲ್ಲದೆ ಸರಳ, ಸಜ್ಜನಿಕೆಯಿಂದಲೂ ಅವರು ಜನರಿಗೆ ಇಷ್ಟವಾಗಿದ್ದವರು ಸೌಂದರ್ಯ. ಅಕಾಲಿಕವಾಗಿ ಅಗಲಿದ ನಟಿ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸರಳ ನಡೆಯನ್ನು ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ತಮ್ಮ ‘ದ್ವೀಪ’ ಸಿನಿಮಾ ಚಿತ್ರೀಕರಣ ಸಂದರ್ಭವೊಂದರ ಮೂಲಕ ನೆನಪು ಮಾಡಿಕೊಂಡಿದ್ದಾರೆ.
`ದ್ವೀಪ’ (2002) ಚಿತ್ರೀಕರಣದ ಸಂದರ್ಭ. ಚಿತ್ರದಲ್ಲಿ ಹಿರಿಯ ನಟ ವಾಸುದೇವರಾವ್ ಅಪರೂಪದ ಪಾತ್ರ ನಿರ್ವಹಿಸಿದ್ದಾರೆ. ನಟಿ ಸೌಂದರ್ಯ ಅವರಿಗೆ ವಾಸುದೇವರಾವ್ ಅವರನ್ನು ಕಂಡರೆ ತುಂಬಾ ಪ್ರೀತಿ. `ಅಜ್ಜಯ್ಯ’ ಎನ್ನುತ್ತಾ ಅವರೊಂದಿಗೆ ಸೆಟ್ನಲ್ಲಿ ಓಡಾಡಿಕೊಂಡಿರುತ್ತಿದ್ದರು. ಅದೊಂದು ದಿನ ಗುಡ್ಡದ ಮೇಲೆ ಶೂಟಿಂಗ್ಗೆಂದು ನಾವು ತಂತ್ರಜ್ಞರು ಬೆಳಗ್ಗೆಯೇ ಹೊರಟಿದ್ದೆವು. `ನೀವು ಹನ್ನೊಂದು ಗಂಟೆಗೆ ಬಂದರೆ ಸಾಕು’ ಎಂದು ವಾಸುದೇವರಾವ್ ಮತ್ತು ಸೌಂದರ್ಯ ಅವರಿಗೆ ತಿಳಿಸಿದ್ದೆ. ಗಂಟೆ ಹನ್ನೊಂದಾಯ್ತು. ಹಿರಿಯರಾದ ವಾಸುದೇವರಾವ್ ಅವರಿಗೆ ಬೆಟ್ಟ ಹತ್ತಲು ಕಷ್ಟವಾಗುತ್ತಿತ್ತು.
ನಟಿ ಸೌಂದರ್ಯ ಇದಕ್ಕೆ ಸೂಕ್ತ ಪೂರ್ವತಯಾರಿ ಮಾಡಿಕೊಂಡಿದ್ದರು. ಸೌಂದರ್ಯ ಮತ್ತು ಅವರ ಅಣ್ಣ ಇಬ್ಬರೂ ವಾಸುದೇವರಾವ್ ಕೈಹಿಡಿದು ಬೆಟ್ಟ ಹತ್ತಿಸುತ್ತಿದ್ದರು. ಅವರ ಜೊತೆಗಿದ್ದ ಅಸಿಸ್ಟೆಂಟ್ ಛತ್ರಿ, ಫೋಲ್ಡಿಂಗ್ ಚೇರ್, ಬೀಸಣಿಕೆ ಹಿಡಿದಿದ್ದ. ಹತ್ತು ಹೆಜ್ಜೆ ಹತ್ತುತ್ತಿದ್ದಂತೆ ಇವರಿಬ್ಬರು ವಾಸುದೇವರಾವ್ ಅವರನ್ನು ಚೇರ್ ಹಾಕಿ ಕೂರಿಸುತ್ತಿದ್ದರು. ಅಣ್ಣ ಛತ್ರಿ ಹಿಡಿದರೆ, ಸೌಂದರ್ಯ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದರು! ಪ್ರತೀ ಹತ್ತಿಪ್ಪತ್ತು ಹೆಜ್ಜೆಗೂ ಈ ಪ್ರಕ್ರಿಯೆ ನಡೆಯುತ್ತಿತ್ತು. ನಾನು ಮೇಲಿನಿಂದ ಈ ದೃಶ್ಯ ನೋಡುತ್ತಿದ್ದೆ. ಇವರು ವಾಸುದೇವರಾವ್ಗೆ ಯಾವುದೇ ಶ್ರಮವಾಗದಂತೆ ಮೇಲೆ ಕರೆದುಕೊಂಡುಬಂದಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಇವರೇನಾ? ಎಂದು ನನಗೆ ಅಚ್ಚರಿಯಾಗಿತ್ತು.
ಸೌಂದರ್ಯ | ಜನನ: 18/07/1972 | ನಿಧನ: 17/04/2004