
ಚಿತ್ರಸಾಹಿತಿ, ನಿರ್ದೇಶಕ
`ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ.
`ಕನ್ಯಾದಾನ’ ಚಿತ್ರದಲ್ಲಿ ಬಾಲಣ್ಣ, `ಬ್ರೋಕರ್ ಸೀತಾರಾಮಯ್ಯ’ ಪಾತ್ರ ಮಾಡಿದ್ದರು. ಸೂಕ್ತ ವಧು – ವರರನ್ನು ಹುಡುಕಿ ಮದುವೆ ಮಾಡಿಸುವ ಬ್ರೋಕರ್ ಪಾತ್ರ ಜನಪ್ರಿಯವಾಗಿತ್ತು. ಇದೇ ಸಮಯದಲ್ಲಿ ಬಾಲಣ್ಣನವರು ತಮ್ಮೂರು ಅರಸೀಕೆರೆಗೊಮ್ಮೆ ಭೇಟಿ ನೀಡಿದ್ದರು. ಊರಿನ ಹಿರಿಯರೊಬ್ಬರು ಬಾಲಣ್ಣನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಒಳ್ಳೆಯ ಊಟ ಹಾಕಿ ತಟ್ಟೆಯೊಂದರಲ್ಲಿ ಹಣ್ಣು-ಕಾಯಿ, ಐವತ್ತು ರೂಪಾಯಿ ದಕ್ಷಿಣೆ ಇಟ್ಟು ಬಾಲಣ್ಣನವರಿಗೆ ಕೊಟ್ಟು ಹೇಳಿದರು – `ನಮ್ಮ ಮನೆಯಲ್ಲಿ ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಯಮಾಡಿ ತಾವು ಅವರಿಗೆ ಒಳ್ಳೆಯ ಹುಡುಗರನ್ನು ಹುಡುಕಿಕೊಡಬೇಕು!’
ಶ್ರವಣದೋಷವಿದ್ದ ಬಾಲಣ್ಣನವರಿಗೆ ಹಿರಿಯರು ಹೇಳಿದ್ದೇನೆಂದು ಸರಿಯಾಗಿ ಗೊತ್ತಾಗಲಿಲ್ಲ. `ಕನ್ಯಾರತ್ನ’ ಚಿತ್ರದ ತಮ್ಮ ಅಭಿನಯ ಮೆಚ್ಚಿ ಮಾತನಾಡುತ್ತಿದ್ದಾರೆಂದು ಭಾವಿಸಿ, `ಸರಿ ಸರಿ’ ಎನ್ನುತ್ತಾ ಹೊರನಡೆದರು. ಅವರ ಹಿಂದೆಯೇ ಬಂದ ಹಿರಿಯರು ತಮ್ಮ ಹೆಣ್ಣುಮಕ್ಕಳ ಜಾತಕಗಳನ್ನು ಬಾಲಣ್ಣನವರ ಕೈಗಿತ್ತರು. `ಇದೇನಿದು’ ಎಂದು ಬಾಲಣ್ಣ ನನ್ನ ಮುಖ ನೋಡಿದರು! ನಾನು ಸನ್ನಿವೇಶ ವಿವರಿಸಿದೆ. `ಅಯ್ಯೋ, ನಾನು ಸಿನಿಮಾದಲ್ಲಷ್ಟೇ ಬ್ರೋಕರ್ ಎಂದು ಅವರಿಗೆ ಹೇಳಿಬಿಡಪ್ಪ. ಅವರು ನನ್ನ ನಂಬಿಕೊಂಡು ಹಾಳಾಗೋದು ಬೇಡ!’ ಎಂದು ನೊಂದುಕೊಂಡರು ಬಾಲಣ್ಣ.