ದಕ್ಷಿಣ ಭಾರತ ಚಿತ್ರರಂಗದ ಆರಂಭದ ದಿನಗಳ ಪ್ರಮುಖ ನಾಯಕನಟಿ ಎಂ.ವಿ.ರಾಜಮ್ಮ. ಕನ್ನಡದ ಮೊದಲ ಚಿತ್ರನಿರ್ಮಾಪಕಿ (‘ರಾಧಾರಮಣ’ – 1943). ಬೆಂಗಳೂರು ಮೆಜಸ್ಟಿಕ್ನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯವರೆಗೆ ಓದಿದ ಅವರು ನಾಟಕಗಳತ್ತ ಆಸಕ್ತರಾಗಿ ರಂಗಭೂಮಿಯೆಡೆ ಹೊರಳಿದರು. ಮೊಹಮ್ಮದ್ ಪೀರ್ ಅವರ ‘ಶ್ರೀ ಚಂದ್ರಕಲಾ ನಾಟಕ ಮಂಡಳಿ’ಯಲ್ಲಿ ಬಣ್ಣ ಹಚ್ಚಿದ ಅವರು ಕೆಲವೇ ದಿನಗಳಲ್ಲಿ ಆ ಕಂಪನಿಯ ಜನಪ್ರಿಯ ನಟಿಯಾದರು. ಕಂಪನಿಯ ‘ಸಂಸಾರ ನೌಕ’ದ ಸರಳೆಯಾಗಿ, ‘ಗೌತಮ ಬುದ್ಧ’ ನಾಟಕದ ಯಶೋಧರೆಯಾಗಿ ಅವರು ಜನಮನ್ನಣೆ ಗಳಿಸಿದರು.

ಎಚ್.ಎಲ್.ಎನ್.ಸಿಂಹ ಅವರ ‘ಸಂಸಾರ ನೌಕ’ (1936) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರಿಗೆ ನಂತರ ತಮಿಳು, ತೆಲುಗು ಚಿತ್ರಗಳಲ್ಲಿ ಅವಕಾಶಗಳು ಹೆಚ್ಚಾದವು. ತಮಿಳು ಚಿತ್ರರಂಗದಲ್ಲಿ ಆಗ ಟಿ.ಆರ್.ಮಹಾಲಿಂಗಂ ಮತ್ತು ರಾಜಮ್ಮ ಅತ್ಯಂತ ಯಶಸ್ವೀ ಜೋಡಿ. ‘ರಾಧಾರಮಣ’ ಚಿತ್ರ ನಿರ್ಮಾಣದೊಂದಿಗೆ ರಾಜಮ್ಮನವರು ಕನ್ನಡದ ಮೊದಲ ಚಿತ್ರನಿರ್ಮಾಪಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ನಟ ಬಾಲಕೃಷ್ಣ ಮತ್ತು ನಟ – ನಿರ್ದೇಶಕ ಜಿ.ವಿ.ಅಯ್ಯರ್ ಅವರಿಗೆ ಇದು ಚೊಚ್ಚಲ ಸಿನಿಮಾ.

70, 80ರ ದಶಕಗಳಲ್ಲಿ ದಕ್ಷಿಣ ಭಾರತದ ಸಾಕಷ್ಟು ಚಿತ್ರಗಳಲ್ಲಿ ರಾಜಮ್ಮ ಪೋಷಕ ಕಲಾವಿದೆಯಾಗಿ ಅಭಿನಯಿಸಿದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಸತಿಶಕ್ತಿ, ತಾಯಿದೇವರು, ಬಂಗಾರದ ಪಂಜರ, ಸಂಪತ್ತಿಗೆ ಸವಾಲ್, ಜಗಮೆಚ್ಚಿದ ಮಗ, ದಾರಿ ತಪ್ಪಿದ ಮಗ, ತ್ರಿಮೂರ್ತಿ, ಬೆಸುಗೆ… ರಾಜಮ್ಮನವರು ನಟಿಸಿದ ಕೆಲವು ಪ್ರಮುಖ ಕನ್ನಡ ಚಿತ್ರಗಳು. 1998ರಲ್ಲಿ ಕರ್ನಾಟಕ ಸರ್ಕಾರ ಅವರಿಗೆ ‘ಡಾ.ರಾಜಕುಮಾರ್’ ಪ್ರಶಸ್ತಿ ನೀಡಿ ಗೌರವಿಸಿತು.
(ಎಂ.ವಿ.ರಾಜಮ್ಮ | ಜನನ – 10/03/1921 | ಮರಣ – 23/04/1999)
(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)