ಕನ್ನಡದ ಪ್ರಮುಖ ನಾಟಕಕಾರ ಗಿರೀಶ್ ಕಾರ್ನಾಡ್ ಭಾರತೀಯ ಸಿನಿಮಾ ಕಂಡ ಅಪರೂಪದ ನಟ, ಚಿತ್ರನಿರ್ದೇಶಕ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪೂರ್ವವಾದುದು. ಕನ್ನಡದಲ್ಲಿ ಹೊಸ ಅಲೆಯ ಸಿನಿಮಾಗಳಿಗೆ ಭದ್ರ ಬುನಾದಿ ಹಾಕಿದ ಸಿನಿಮಾ ‘ಸಂಸ್ಕಾರ’ (1970). ಈ ಸಿನಿಮಾ ತಯಾರಾಗುವಲ್ಲಿ ಗಿರೀಶ್ ಕಾರ್ನಾಡ್ ಕೊಡುಗೆ ಮಹತ್ವದ್ದು. ಸ್ವತಃ ತಾವೇ ಚಿತ್ರಕಥೆ ರಚಿಸಿ, ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರ ನಿರ್ವಹಿಸಿದರು. ವೈಚಾರಿಕ ಮನೋಭಾವ, ವಾಸ್ತವಕ್ಕೆ ಹತ್ತಿರವಾದ ಘಟನೆಗಳನ್ನು ನಿರೂಪಿಸಿದ ಈ ಸಿನಿಮಾ ಭಾರತೀಯ ಸಿನಿಮಾ ಸಂದರ್ಭದಲ್ಲೂ ಪ್ರಮುಖ ಪ್ರಯೋಗವಾಗಿ ದಾಖಲಾಯ್ತು.

ಮುಂದೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’ (1972) ಕೃತಿಯನ್ನು ಗಿರೀಶ್ ಕಾರ್ನಾಡ್ ತೆರೆಗೆ ಅಳವಡಿಸಿದರು. ಈ ಚಿತ್ರದ ನಿರ್ದೇಶನದಲ್ಲಿ ಕಾರ್ನಾಡರೊಂದಿಗೆ ಬಿ.ವಿ.ಕಾರಂತರು ಜೊತೆಯಾಗಿದ್ದರು. ಕಥೆಗಾರ ಆಲನಹಳ್ಳಿ ಕೃಷ್ಣ ಅವರ ಕೃತಿಯನ್ನಾಧಿರಿಸಿದ್ದ ‘ಕಾಡು’ (1974) ಗಿರೀಶ್ ಕಾರ್ನಾಡ್ ಸ್ವತಂತ್ರ ನಿರ್ದೇಶನದ ಚೊಚ್ಚಲ ಸಿನಿಮಾ. 1977ರಲ್ಲಿ ಬಿ.ವಿ. ಕಾರಂತರೊಡಗೂಡಿ ಕಾರ್ನಾಡರು ‘ತಬ್ಬಲಿಯು ನೀನಾದೆ ಮಗನೆ’ ಚಿತ್ರ ನಿರ್ದೇಶಿಸಿದರು. ಮರುವರ್ಷ ಅವರು ನಿರ್ದೇಶಿಸಿದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದೊಂದಿಗೆ ನಟ ಶಂಕರ್ನಾಗ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ರಾಷ್ಟ್ರಕವಿ ಕುವೆಂಪು ಅವರ ಕೃತಿಯನ್ನು ಆಧರಿಸಿದ ‘ಕಾನೂರು ಹೆಗ್ಗಡತಿ’ ಗಿರೀಶ್ ಕಾರ್ನಾಡರು ನಿರ್ದೇಶಿಸಿದ ಮತ್ತೊಂದು ಮಹತ್ವದ ಸಿನಿಮಾ.

ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡ್ ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಸಂತ ಶಿಶುನಾಳ ಷರೀಫ’, ‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರಗಳ ಅಭಿನಯಕ್ಕಾಗಿ ಅವರಿಗೆ ಎರಡು ಬಾರಿ ರಾಜ್ಯ ಪ್ರಶಸ್ತಿಗಳು ಸಂದಿವೆ. ಇವರು ನಿರ್ದೇಶಿಸಿದ ‘ವಂಶವೃಕ್ಷ’, ‘ಕಾಡು’ ಚಿತ್ರಗಳು ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಪಡೆದಿವೆ. ಕಾರ್ನಾಡ್ – ಬಿ.ವಿ.ಕಾರಂತರು ಜಂಟಿಯಾಗಿ ನಿರ್ದೇಶಿಸಿದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ಅವರು ಸ್ವತಂತ್ರವಾಗಿ ನಿರ್ದೇಶಿಸಿದ ‘ಕಾಡು’, ಒಂದಾನೊಂದು ಕಾಲದಲ್ಲಿ’, ‘ಕಾನೂರು ಹೆಗ್ಗಡತಿ’ ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದಿವೆ. ‘ನಿಶಾಂತ್’ (1975), ‘ಮಂಥನ್’ (1976), ‘ಸ್ವಾಮಿ’ (1977) ಹಿಂದಿ ಸಿನಿಮಾಗಳ ನಟನೆಯಿಂದ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ‘ತಸ್ವೀರ್’, ‘ಆಶಾಯೇನ್’, ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಅವರು ಕೊನೆಗಾಲದಲ್ಲಿ ಅಭಿನಯಿಸಿದ ಹಿಂದಿ ಸಿನಿಮಾಗಳು.