ಕನ್ನಡ ವೃತ್ತಿರಂಗಭೂಮಿ ದಿಗ್ಗಜ ಗುಬ್ಬಿವೀರಣ್ಣ ಮತ್ತು ನಟಿ ಜಿ.ಸುಂದರಮ್ಮ ದಂಪತಿ ಪುತ್ರ ಶಿವಾನಂದ. ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಮೂರೂ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ರಂಗಭೂಮಿ ಕುಟುಂಬದ ಕುಡಿಯಾದ ಅವರು ಹಲವು ನಾಟಕಗಳಲ್ಲಿ ಬಾಲನಟನಾಗಿ ರಂಗದ ಮೇಲೆ ಕಾಣಿಸಿಕೊಂಡಿದ್ದರು. ಪದವಿ ನಂತರ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಏಷಿಯನ್ ಥಿಯೇಟರ್ ಇನ್ಸ್ಟಿಟ್ಯೂಟ್ನಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ತರಬೇತಿ ಪಡೆದರು.
ನಾಡಿಗೆ ಹಿಂತಿರುಗಿದ ನಂತರ ‘ಕಲಾಕುಂಜ’ ರಂಗತಂಡ ಕಟ್ಟಿ ನಾಟಕಗಳ ನಿರ್ದೇಶನ, ನಟನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಬೆಂಬಿಡದ ಭೂತ, ಯಾರ ಸಾಕ್ಷಿ?, ಲಕ್ಷ್ಮೀ ಕಟಾಕ್ಷ, ಮಂತ್ರದ ಅವರೇಕಾಳು, ಭ್ರಮೆ, ಕುಳ್ಳನ ಸಾಹಸ.. ಅವರ ರಚನೆಯ ಪ್ರಮುಖ ನಾಟಕಗಳು. ವಿಶೇಷವಾಗಿ ಮಕ್ಕಳ ರಂಗಭೂಮಿಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಶಿವಾನಂದರ ನಿರ್ದೇಶನದಲ್ಲಿ ತಯಾರಾದ ಯಯಾತಿ, ಸಾಕ್ರಟಿಸ್, ಬಹಿಷ್ಕಾರ, ವ್ಯೂಹ, ದೇವರಿಗೇ ದಿಕ್ಕು, ಬಲಿದಾನ ಮುಂತಾದ ನಾಟಕಗಳು ರಂಗಕ್ಕೆ ಬಂದಿವೆ. ಕುರುಡು ಕಾಂಚಾಣ, ಸದ್ದು! ವಿಚಾರಣೆ ನಡೆಯುತ್ತಿದೆ, ಕತ್ತಲೆ ಬೆಳಕು, ಜೋಕುಮಾರಸ್ವಾಮಿ, ತುಘಲಕ್, ಗಿಳಿಯು ಪಂಜರದೊಳಿಲ್ಲ, ಈಡಿಪಸ್ ಅವರು ಅಭಿನಯಿಸಿದ ಪ್ರಮುಖ ನಾಟಕಗಳು. ಮದರಾಸು ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಶಿವಾನಂದ ಎರಡು ವರ್ಷ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಸಿನಿಮಾ ತಾರೆಯರಾದ ರಜನೀಕಾಂತ್, ಅಶೋಕ್, ಹೇಮಾ ಚೌಧರಿ ಅಲ್ಲಿ ಅವರ ಶಿಷ್ಯರು.

ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಶಿವಾನಂದ್ ಸಿನಿಮಾ ಮತ್ತು ಕಿರುತೆರೆ ಪ್ರಯೋಗಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸುಬ್ಬಾಶಾಸ್ತ್ರಿ, ಮಾಡಿ ಮಡಿದವರು, ಸಂಸ್ಕಾರ, ಮಾನಸ ಸರೋವರ, ನಂಜುಂಡಿ ಕಲ್ಯಾಣ, ಓಂ, ಯಾರ ಸಾಕ್ಷಿ, ಆದಿ ಶಂಕರಾಚಾರ್ಯ, ಮಧ್ವಾಚಾರ್ಯ ಸೇರಿದಂತೆ ಹಲವು ಸಿನಿಮಾಗಳಲ್ಲದೆ ಕಿರುತೆರೆ ಸರಣಿಗಳಲ್ಲೂ ನಟಿಸಿದ್ದಾರೆ. ಖ್ಯಾತ ಚಿತ್ರನಿರ್ದೇಶಕರಾದ ಬಾಲು ಮಹೇಂದ್ರ, ಮಣಿರತ್ನಂ ಅವರ ಕನ್ನಡ ಚಿತ್ರಗಳಲ್ಲಿ ಶಿವಾನಂದ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಚಿತ್ರಕಥೆ ವಿಭಾಗದಲ್ಲೂ ಪರಿಣತಿ ಹೊಂದಿದ್ದರು. ಶಿವಾನಂದ್ ಅವರ ಪುತ್ರಿ ಸುಂದರಶ್ರೀ ಸಿನಿಮಾ ಮತ್ತು ಕಿರುತೆರೆ ನಟಿ. ಅವರ ಪುತ್ರ ನಟರಾಜ್ ‘ಕಾಡು’ ಚಿತ್ರದ ನಟನೆಗಾಗಿ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
ಜಿ.ವಿ.ಶಿವಾನಂದ್ | ಜನನ: 16/03/1935 | ನಿಧನ: 25/03/2002
(ಫೋಟೋಗಳು: ಪ್ರಗತಿ ಅಶ್ವತ್ಥ ನಾರಾಯಣ)