ಮುಸುರಿ ಕೃಷ್ಣಮೂರ್ತಿ ಅವರ ತಂದೆ-ತಾಯಿ ಇಬ್ಬರೂ ಸಂಗೀತ ಪ್ರೇಮಿಗಳು. ಮನೆಯಲ್ಲಿ ಸಂಗೀತ ವಾತಾವರಣ ಇದ್ದುದರಿಂದ ಬಾಲ್ಯದಲ್ಲೇ ಕೃಷ್ಣಮೂರ್ತಿ ಅವರಿಗೆ ಹಾಡುಗಾರಿಕೆ ಒಲಿದಿತ್ತು. ಪ್ರೌಢಶಾಲೆ ಓದುವಾಗ ರಂಗಕರ್ಮಿ, ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ಕೃಷ್ಣಮೂರ್ತಿಗೆ ಚಾಮುಂಡೇಶ್ವರಿ ನಾಟಕ ಕಂಪನಿಯಲ್ಲಿ ನಟಿಸುವ ಅವಕಾಶ ನೀಡಿದರು. ಚೆನ್ನಾಗಿ ಹಾಡುತ್ತಿದ್ದ ಅವರನ್ನು ರಂಗಕರ್ಮಿ ಗುಬ್ಬಿ ವೀರಣ್ಣನವರು ತಮ್ಮ ನಾಟಕ ಕಂಪನಿಗೆ ಕರೆದೊಯ್ದರು. ನಾಟಕಗಳು ಕೃಷ್ಣಮೂರ್ತಿಯವರಿಗೆ ಸಿನಿಮಾದೆಡೆ ಕರೆದೊಯ್ದವು. ‘ವಾಣಿ’ (1943) ಚಿತ್ರದ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಅವರು ಮುಂದೆ ನಾಟಕಗಳ ಜೊತೆಜೊತೆಗೆ ಸಿನಿಮಾಗಳಲ್ಲೂ ಪಾತ್ರ ಮಾಡುತ್ತಾ ಬಂದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಪಡುವಾರಹಳ್ಳಿ ಪಾಂಡವರು’ ಚಿತ್ರದಲ್ಲಿನ ‘ಕನೆಕ್ಷನ್ ಕಾಳಪ್ಪ’ ಪಾತ್ರ ಅವರ ವೃತ್ತಿ ಬದುಕಿಗೆ ತಿರುವಾಯ್ತು. ಪುಟ್ಟಣ್ಣನವರ ‘ಉಪಾಸನೆ’, ಬಿಳಿಹೆಂಡ್ತಿ’, ‘ಶುಭಮಂಗಳ’ ಚಿತ್ರಗಳಲ್ಲೂ ಮುಸುರಿ ಕೃಷ್ಣಮೂರ್ತಿ ಅಭಿನಯಿಸಿದ್ದಾರೆ. ಸುಮಾರು ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ, ಖಳ, ಪೋಷಕ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ‘ನಂಬರ್ ಐದೂ ಎಕ್ಕ’ (1981) ಅವರ ನಿರ್ಮಾಣದ ಸಿನಿಮಾ. 1985ರ ಮಾರ್ಚ್ 16ರಂದು ಮುಸುರಿ ಕೃಷ್ಣಮೂರ್ತಿ ಅಗಲಿದರು.

ಹೆಸರಿನ ಹಿಂದೆ ಮುಸುರಿ ಸೇರಿಕೊಂಡಿದ್ದು ಹೇಗೆ? | ಕೆ ಹಿರಣ್ಣಯ್ಯ ಮತ್ತು ಗೋಪಾಲ್ ನಿರ್ದೇಶಿಸಿದ ‘ವಾಣಿ’ (1943) ಚಿತ್ರದಲ್ಲಿ ಮುಸುರಿ ಬಾಲನಟನಾಗಿ ಅಭಿನಯಿಸಿದ್ದರು. ಈ ಸಿನಿಮಾದ ಚಿತ್ರೀಕರಣಕ್ಕಾಗಿ ತಂಡ ಕೊಯಮತ್ತೂರಿಗೆ ಹೋಗಿತ್ತು. ಅಲ್ಲಿ ಆಗ ರಾಮೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ಮುಸುರಿ ಸುಬ್ರಹ್ಮಣ್ಯಂ ಸಂಗೀತ ಕಚೇರಿ ನಡೆಸಿದ್ದರಂತೆ. ಕೃಷ್ಣಮೂರ್ತಿ ತಾವೂ ವೇದಿಕೆಗೆ ಹೋಗಿ ಹಾಡಿದರು. ಆಗ ಸುಬ್ರಹ್ಮಣ್ಯಂ ಅವರು ಸಂತೋಷದಿಂದ ‘ಎರಡನೇ ಮುಸುರಿ’ ಎಂದೇ ಕೃಷ್ಣಮೂರ್ತಿಯವರನ್ನು ಕರೆದರಂತೆ. ಅಲ್ಲಿಂದ ಮುಂದೆ ಕೃಷ್ಣಮೂರ್ತಿಯವರ ಹೆಸರಿನ ಹಿಂದೆ ‘ಮುಸುರಿ’ ಸೇರಿಕೊಂಡಿತು.