‘ಸೆಪ್ಟೆಂಬರ್ 21’ ಚಿತ್ರದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು ಫ್ರಾನ್ಸ್ನ ಕಾನ್ ನಗರದ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಜಾಗತಿಕ ವೇದಿಕೆಯಲ್ಲಿ ಅವರು ‘AI, Artistry & Activism’ ವಿಷಯದ ಕುರಿತು ಮಾತನಾಡಲಿದ್ದಾರೆ.
ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು 79ನೇ ಕಾನ್ ಚಿತ್ರೋತ್ಸವದ ಅಂಗವಾಗಿ ಮೇ 12-15ರವರೆಗೆ ಫ್ರಾನ್ಸ್ನ ಕಾನ್ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಇದರೊಂದಿಗೆ, ಕಾನ್ ಚಿತ್ರೋತ್ಸವದ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಕನ್ನಡದ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಕರೆನ್ ಪಾತ್ರರಾಗಿದ್ದಾರೆ. ವರ್ಲ್ಡ್ ವುಮನ್ ಫೌಂಡೇಶನ್ ಆಯೋಜಿಸಿರುವ ಈ ಜಾಗತಿಕ ವೇದಿಕೆಯು ‘AI, Artistry & Activism’ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ಕರ್ನಾಟಕದ ಸಿನಿಮಾ ಪ್ರತಿಭೆಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಸುವರ್ಣಾವಕಾಶವಾಗಿದೆ.
ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಸೆಪ್ಟೆಂಬರ್ 21’ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ಕರೆನ್, ಈ ವೇದಿಕೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕರ್ನಾಟಕದ ಸ್ವತಂತ್ರ ಸಿನಿಮಾ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ‘ಇದು ನನ್ನೊಬ್ಬಳ ಪಯಣವಲ್ಲ. ಇದು ಕನ್ನಡ ಸಿನಿಮಾ ಮತ್ತು ನಮ್ಮ ರಾಜ್ಯದ ಪ್ರತಿಯೊಬ್ಬ ಯುವ ಕಲಾವಿದೆಯ ಕನಸಿನ ಪಯಣ. ಈ ವೇದಿಕೆ ಕಲ್ಪಿಸಿದ ವರ್ಲ್ಡ್ ವುಮನ್ ಫೌಂಡೇಶನ್ಗೆ ನಾನು ಕನ್ನಡ ನಾಡಿನ ಪರವಾಗಿ ಆಭಾರಿ’ ಎಂದು ಕರೆನ್ ಹೇಳಿದ್ದಾರೆ. ಕನ್ನಡ ಚಿತ್ರರಂಗವು ಡಾ. ರಾಜ್ಕುಮಾರ್, ಗಿರೀಶ್ ಕಾಸರವಳ್ಳಿಯಿಂದ ಹಿಡಿದು ಇಂದಿನ ಯುವ ನಿರ್ದೇಶಕರವರೆಗೆ ವಿಶ್ವ ಸಿನಿಮಾಕ್ಕೆ ನೀಡಿದ ಕೊಡುಗೆ ಅಪಾರ. ಕರೆನ್ ಅವರ ಕಾನ್ ಪಯಣವು ಇದರ ಮುಂದುವರೆದ ಪಯಣವಾಗಿದೆ.







