ಶಿರಸಿ ಮೂಲದ ನಜೀರ್ ಕಲಿತದ್ದು ಚಿತ್ರಕಲೆ. ನಂತರ ಮದರಾಸಿನ ಫಿಲ್ಮ್ ಸೆಂಟರ್ ಸ್ಟುಡಿಯೋದಲ್ಲಿ ಕೆಲಸ ಮಾಡಿದರು. ಇವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಿರ್ಮಾಪಕ ಆರ್.ಲಕ್ಷ್ಮಣ್. ಸಿದ್ದಲಿಂಗಯ್ಯ ನಿರ್ದೇಶನದ `ದೂರದ ಬೆಟ್ಟ’ ಚಿತ್ರದ ಕಲಾನಿರ್ದೇಶಕರಾಗಿ ನಜೀರ್ ಚಿತ್ರರಂಗ ಪ್ರವೇಶಿಸಿದರು. `ಬೂತಯ್ಯನ ಮಗ ಅಯ್ಯು’ ಸಿನಿಮಾದ ಅದ್ಭುತ ಕ್ಲೈಮ್ಯಾಕ್ಸ್ ರೂಪುಗೊಳ್ಳುವಲ್ಲಿ ನಜೀರ್ ಕೈಚಳಕವೂ ಇದೆ. `ಬಂಗಾರದ ಪಂಜರ’, `ಜೀವನ ಚಕ್ರ’, `ಬಂಧನ’, `ರಣಧೀರ’, `ಹೇಮಾವತಿ’, `ಜೀವನ ಚೈತ್ರ’ ಇವರ ಕಲಾ ನಿರ್ದೇಶನದ ಪ್ರಮುಖ ಸಿನಿಮಾಗಳು. `ಸಿಪಾಯಿ’ ಚಿತ್ರದಲ್ಲಿನ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಜೀರ್ ರಾಜ್ಯ ಪ್ರಶಸ್ತಿ (1995-96) ಪಡೆದಿದ್ದರು. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರಮುಖ ಕಲಾನಿರ್ದೇಶಕ ಇಸ್ಮಾಯಿಲ್ ಅವರೊಂದಿಗೆ ನಜೀರ್ ಈ ಪ್ರಶಸ್ತಿ ಹಂಚಿಕೊಂಡಿದ್ದರು.
