ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ತಮಿಳು ಚಿತ್ರಸಾಹಿತ್ಯದಲ್ಲಿ ತಾಜಾತನ ತಂದ ಕರುಣಾನಿಧಿ

ಪೋಸ್ಟ್ ಶೇರ್ ಮಾಡಿ
ಶಶಿಧರ ಚಿತ್ರದುರ್ಗ
ಪತ್ರಕರ್ತ

ಏಕತಾನತೆಯ ಕಥಾವಸ್ತುಗಳಿಗೆ ಒಗ್ಗಿದ್ದ ಪ್ರೇಕ್ಷಕರಿಗೆ ಕರುಣಾನಿಧಿ ರಚನೆಯ ಚಿತ್ರಕಥೆ, ಸಂಭಾಷಣೆ ಇಷ್ಟವಾಯ್ತು. ಅವರ ಚುರುಕು ಸಂಭಾಷಣೆಗಳು ಜನಸಾಮಾನ್ಯರನ್ನು ಆಕರ್ಷಿಸಿದವು. ರಂಗಭೂಮಿ ಹಿನ್ನೆಲೆಯ ಕರುಣಾನಿಧಿ ತಮ್ಮ ಬರವಣಿಗೆಯಲ್ಲಿ ದ್ರಾವಿಡ ನೆಲದ ಸತ್ವವನ್ನೆಲ್ಲೂ ಬಿಟ್ಟಿಕೊಡಲಿಲ್ಲ. ಇಂದು (ಜೂನ್‌ 3) ಅವರ ಜನ್ಮದಿನ.

“ಐವತ್ತರ ದಶಕದಲ್ಲಿ ತಮಿಳು ಸಿನಿಮಾ ಪ್ರೇಕ್ಷಕರು ಸಂಸ್ಕೃತ ಪ್ರಭಾವದ ಉದ್ದನೆಯ ಸಂಭಾಷಣೆಗಳಿಗೆ ಒಗ್ಗಿ ಹೋಗಿದ್ದರು. ಬಹುತೇಕ ಚಿತ್ರಗಳು ಭಕ್ತಿ ಪ್ರಧಾನ, ಪೌರಾಣಿಕ ಕಥೆಗಳನ್ನೇ ಹೊಂದಿರುತ್ತಿದ್ದವು. ಈ ಅವಧಿಯಲ್ಲಿ ಕರುಣಾನಿಧಿ ತಮಿಳು ಚಿತ್ರಸಾಹಿತ್ಯಕ್ಕೆ ಹೊಸತನ ತಂದರು. ಚಿಕ್ಕ, ಹರಿತ ಮತ್ತು ಸಾಮಾನ್ಯರಿಗೂ ತಕ್ಷಣಕ್ಕೆ ಅರ್ಥವಾಗುವಂತಹ ಸಂಭಾಷಣೆ ಬರೆದರು. ಅಲ್ಲೊಂದು ಮಾದರಿಯೇ ಸೃಷ್ಟಿಯಾಯ್ತು” ಎಂದು ತಮಿಳು ಸಿನಿಮಾ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗಕ್ಕೆ ಕರುಣಾನಿಧಿ ಅವರ ಕೊಡುಗೆಯ ಮಹತ್ವವನ್ನು ಅರಿಯಬಹುದಾಗಿದೆ.

ತಮಿಳು ಚಿತ್ರರಂಗದಲ್ಲಿ ಆ ವೇಳೆಗೆ ಇದೊಂದು ತಾಜಾ ಬೆಳವಣಿಗೆ. ಧರ್ಮ, ದೇವರ ಸುತ್ತ ಸುತ್ತುತ್ತಿದ್ದ ಕತೆಗಳಿಂದ ಪ್ರೇಕ್ಷಕರಿಗೂ ಬೇಸರವಾಗಿತ್ತು. ಕರುಣಾನಿಧಿ ರಚನೆಯ ಸ್ಕ್ರಿಪ್ಟ್‌ಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿದ್ದವು. ಭಾಷೆಯ ಮೇಲಿನ ಹಿಡಿತ, ರಂಗಭೂಮಿ ಹಿನ್ನೆಲೆಯ ಕರುಣಾನಿಧಿ ರಿಯಲಿಸ್ಟಿಕ್‌ ಚಿತ್ರಕಥೆಗಳೊಂದಿಗೆ ಸಾಮಾನ್ಯರ ನಾಡಿಮಿಡಿತಕ್ಕೆ ಕನ್ನಡಿ ಹಿಡಿದರು. ಉದ್ದನೆಯ ಮಾತುಗಳಿಗೆ ಕತ್ತರಿ ಹಾಕಿದ ಅವರು ತಮ್ಮದೇ ಒಂದು ಸಂಭಾಷಣಾ ಶೈಲಿ ರೂಢಿಸಿಕೊಂಡರು. ದ್ರಾವಿಡ ಸೊಗಡಿನ ಮಾತುಗಳಲ್ಲೊಂದು ರಾಜಕೀಯ ಸಂದೇಶವೂ ಇರುತ್ತಿತ್ತು. ಈ ಶೈಲಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಕ್ರಿಯಾಶೀಲತೆಯೇ ಮುಂದೆ ಅವರ ರಾಜಕೀಯ ಪ್ರವೇಶಕ್ಕೂ ಭೂಮಿಕೆಯಾಯ್ತು ಎನ್ನುವುದು ವಿಶೇಷ.

ರಂಗಭೂಮಿ ಹಿನ್ನೆಲೆ | ತಮಿಳು ಸಿನಿಮಾ ಸಾಹಿತ್ಯದಲ್ಲಿ ಬದಲಾವಣೆ ತರಲು ಕರುಣಾನಿಧಿ ಅವರಿಗೆ ಸಾಧ್ಯವಾಗಿದ್ದು ಅವರ ದಟ್ಟ ರಂಗಭೂಮಿ ಹಿನ್ನೆಲೆಯಿಂದಾಗಿ. ಹರೆಯದಲ್ಲೇ ಕತೆ, ಕವಿತೆ, ನಾಟಕಗಳೆಡೆ ಅವರು ಆಸಕ್ತರಾಗಿದ್ದರು. ‘ಕಲೆಗಾಗಿ ಕಲೆ’ ಎನ್ನುವ ಮೀಮಾಂಸೆ ಒಪ್ಪದ ಅವರು ‘ತತ್ವವಿಲ್ಲದ ಸಾಹಿತ್ಯ ಛಾವಣಿಯಿಲ್ಲದ ಮನೆ’ ಎಂದು ಪ್ರತಿಪಾದಿಸಿದವರು. ಸಾಹಿತ್ಯ ಜನರ ಬದುಕನ್ನು ಹಸನುಗೊಳಿಸಬೇಕು ಎನ್ನುವ ಆಶಯ ಅವರದು. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಅವರು 25 ನಾಟಕ, 150ಕ್ಕೂ ಹೆಚ್ಚು ಸಣ್ಣಕತೆ ಹಾಗೂ ನೂರಾರು ಕವಿತೆಗಳನ್ನು ರಚಿಸಿದ್ದಾರೆ. ಮುಂದೆ ಸಿನಿಮಾಗೆ ಚಿತ್ರಕಥೆ ರಚಿಸುವಲ್ಲಿಯೂ ಅವರು ಇದೇ ನೀತಿ ಅನುಸರಿಸಿದರು.

ರಾಜಕೀಯ ಪ್ರವೇಶದ ನಂತರ ಡಿಎಂಕೆ ಪಕ್ಷದ ಪ್ರಚಾರಕ್ಕಾಗಿ ‘ತೋಕು ಮೆಡೈ’ ನಾಟಕ ರಚಿಸಿದ್ದರು. ಅವರ ರಚನೆಯ ‘ಪರಬ್ರಹ್ಮಂ’ ನಾಟಕದಲ್ಲಿ ಶಿವಾಜಿ ಗಣೇಶನ್‌ ಮುಖ್ಯಪಾತ್ರದಲ್ಲಿ ನಟಿಸಿದ್ದರು. ‘ಮಣಿ ಮೊಹುದಮ್‌’ ನಾಟಕದಲ್ಲಿ ಎಸ್‌ ಎಸ್ ರಾಜೇಂದ್ರನ್ ನಟಿಸಿದರೆ, ‘ದಿ ಪೇಪರ್‌ ಫ್ಲವರ್‌’ನಲ್ಲಿ ಸ್ವತಃ ಅವರೇ ಬಣ್ಣ ಹಚ್ಚಿದ್ದರು. ಅವರು ರಚಿಸಿದ ‘ಮಂದ್ರಿ ಕುಮಾರಿ’, ‘ಪರಾಶಕ್ತಿ’ ನಾಟಕಗಳು ಚಲನಚಿತ್ರಗಳಾಗಿಯೂ ಯಶಸ್ವಿಯಾದವು. ‘ಫ್ರೈಡೇ’, ‘ಮನ್‌ಮೋಹನ್‌’, ‘ಮಲೈಕಳ್ಳನ್’‌, ‘ಪೂಮಾಲೈ’ ಕರುಣಾನಿಧಿ ರಚನೆಯ ಇತರೆ ಪ್ರಮುಖ ನಾಟಕಗಳೂ. ತೆಳು ಹಾಸ್ಯದೊಂದಿಗೆ ಚಿಂತನೆಗೆ ಒರುಹಚ್ಚುವುದು ಕರುಣಾನಿಧಿ ಬರವಣಿಗೆ ಶೈಲಿ.

ಚಿತ್ರಸಾಹಿತಿ | ಕರಣಾನಿಧಿ ಚಿತ್ರಕಥೆ ರಚನೆಯ ಮೊದಲ ಸಿನಿಮಾ ‘ರಾಜಕುಮಾರಿ’ (1947). ಮರುವರ್ಷ ಅವರು ಚಿತ್ರಕಥೆ ರಚಿಸಿದ್ದ ‘ಅಭಿಮನ್ಯು’ ಉದ್ಯಮದ ಗಮನ ಸೆಳೆಯಿತು. ಕರುಣಾನಿಧಿ ಅವರ ದೈತ್ಯ ಪ್ರತಿಭೆಯನ್ನು ಪರಿಚಯಿಸಿದ್ದು ‘ಪರಾಶಕ್ತಿ’ (1952). ಈ ಸಿನಿಮಾ ಕರುಣಾನಿಧಿ ಅವರನ್ನು ಸ್ಟಾರ್ ಚಿತ್ರಸಾಹಿತಿಯನ್ನಾಗಿಸಿತು. ಅಲ್ಲದೆ ತಮಿಳು ಚಿತ್ರರಂಗದ ದಂತೆಕತೆ ಎನಿಸಿಕೊಂಡ ಶಿವಾಜಿ ಗಣೇಶನ್‌ ಅವರ ವೃತ್ತಿಬದುಕಿಗೆ ಪ್ರಮುಖ ತಿರುವಾಯ್ತು. ಈ ಚಿತ್ರದಲ್ಲಿ ತೀಷ್ಣ ಸಂಭಾಷಣೆಗಳೊಂದಿಗೆ ಕರುಣಾನಿಧಿ ಕಟ್ಟಾ ಸಂಪ್ರದಾಯಸ್ಥರಿಗೆ ಚುರುಕು ಮುಟ್ಟಿಸಿದ್ದರು. ಇದೇ ವರ್ಷ ತೆರೆಕಂಡ ‘ಮನೋಹರ’ ಸಿನಿಮಾದಲ್ಲಿ ಅವರು ಹಾಸ್ಯ, ವಿಡಂಬನಾ ಶೈಲಿ ಸಂಭಾಷಣೆ ಬರೆದು ಗಮನ ಸೆಳೆದರು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡವು.

ಮುಂದೆ ರಾಜಕೀಯ ಪ್ರವೇಶಿಸಿದ ನಂತರ ರಾಜಕಾರಣದ ಜೊತೆಜೊತೆಗೆ ಅವರ ಚಿತ್ರಕಥೆ ರಚನೆಯೂ ನಡೆದಿತ್ತು. ಮೊದಲ ಕಂತಿನಲ್ಲಿ ಅವರು ಕೊನೆಯದಾಗಿ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದು ‘ಪುತಿಯಾ ಪರಾಶಕ್ತಿ’ (1996) ಚಿತ್ರಕ್ಕೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿತು. ಆದರೆ ಚಿತ್ರ ತೆರೆಕಂಡ ಕೆಲವು ತಿಂಗಳಿಗೆ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕರುಣಾನಿಧಿ ಮತ್ತೆ ಚಿತ್ರಕಥೆಗಾರನಾಗಿ ಸೆಕೆಂಡ್‌ ಇನಿಂಗ್ಸ್‌ ಆರಂಭಿಸಿದ್ದು ‘ಕಲೈನರಿನ್ ಕಣ್ಣಮ್ಮ’ (2005) ಚಿತ್ರದೊಂದಿಗೆ. ‘ಪನ್ನಾರ್ ಶಂಕರ್‌’ (2011) ಅವರು ಚಿತ್ರಕಥೆ ರಚಿಸಿದ ಕೊನೆಯ ಸಿನಿಮಾ. 2005-2011ರ ಅವಧಿಯಲ್ಲಿ ಏಳು ಸಿನಿಮಾಗಳಿಗೆ ಕರುಣಾನಿಧಿ ಚಿತ್ರಕಥೆ ರಚಿಸಿದ್ದಾರೆ. ಪ್ರಸ್ತುತ ಅವರ ಮೊಮ್ಮಗ ಉದಯನಿಧಿ (ಸ್ಟಾಲಿನ್ ಪುತ್ರ) ತಮಿಳುಚಿತ್ರರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡಿದ್ದಾರೆ. ತಾತನ ಸಿನಿಮಾನಂಟು ಉದಯನಿಧಿ ಅವರೊಂದಿಗೆ ಮುಂದುವರಿದಿದೆ.

ದ್ರಾವಿಡ ನೆಲದ ಸೊಗಡನ್ನು ಬಿಟ್ಟುಕೊಡದೆ  ಹೊಸ ತಲೆಮಾರಿಗೂ ಅವರು ಬರೆದು ಯಶಸ್ವಿಯಾದರು. ಶಿವಾಜಿ ಗಣೇಶನ್‌‌, ಎಂಜಿಆರ್‌ ಸೇರಿದಂತೆ ಹತ್ತಾರು ನಟ-ನಟಿಯರ ವೃತ್ತಿಬದುಕಿಗೆ ಅವರ ಚಿತ್ರಕಥೆಗಳು ತಿರುವು ನೀಡಿವೆ. ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಕರುಣಾನಿಧಿ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. “ತಮಿಳು ಚಿತ್ರರಂಗದ ಚಿತ್ರಸಾಹಿತ್ಯಕ್ಕೆ ಪ್ರಮುಖ ತಿರುವು ನೀಡಿದವರು ಕರುಣಾನಿಧಿ. ಅಗಾಧ ಓದು, ವೈಚಾರಿಕತೆ, ರಂಗಭೂಮಿ ಹಿನ್ನೆಲೆಯಿಂದಾಗಿ ಕರುಣಾನಿದಿ ಅವರಿಂದ ಇಂತಹ ಮಹತ್ವದ ಕೊಡುಗೆ ಸಾಧ್ಯವಾಗಿದೆ” ಎಂದು ತಮಿಳು ಸಿನಿಮಾ ವಿಶ್ಲೇ‍ಕಷಕರು ಅಭಿಪ್ರಾಯ ಪಡುತ್ತಾರೆ.

ನಟ ಶಿವಾಜಿ ಗಣೇಶನ್ ಅವರೊಂದಿಗೆ ಕರುಣಾನಿಧಿ

ಇರುವರ್‌ | ಮಣಿರತ್ನಂ ನಿರ್ಮಿಸಿ, ನಿರ್ದೇಶಿಸಿದ್ದ ‘ಇರುವರ್‌’ ತಮಿಳು ಸಿನಿಮಾದಲ್ಲಿ ಕರುಣಾನಿಧಿ ಚಿತ್ರಣವಿತ್ತು. ತಮಿಳು ನಾಡು ರಾಜಕೀಯ ಮತ್ತು ಸಿನಿಮಾರಂಗವನ್ನು ಪ್ರಭಾವಿಸಿದ ಎಂಜಿಆರ್ ಮತ್ತು ಕರುಣಾನಿಧಿ ಅವರ ಪಾತ್ರಗಳನ್ನು ಮಣಿರತ್ನಂ ತೆರೆಮೇಲೆ ತಂದಿದ್ದರು. ಒಂದೆಡೆ ಇವರಿಬ್ಬರ ಸಿನಿಮಾ-ಬದುಕಿನ ಕುರಿತು ಹೇಳುವ ಸಿನಿಮಾ ಮತ್ತೊಂದಡೆ ತಮಿಳುನಾಡಿನ ರಾಜಕೀಯ ಮತ್ತು ಸಿನಿಮಾ ನಂಟನ್ನು ಬಿಚ್ಚಿಟ್ಟಿತ್ತು. ಮೋಹನ್‌ ಲಾಲ್ ಅವರು ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕರುಣಾನಿಧಿ ಅವರನ್ನು ಹೋಲುವ ಪಾತ್ರವನ್ನು ಪ್ರಕಾಶ್ ರೈ ನಿರ್ವಹಿಸಿದ್ದರು. ಜಯಲಲಿತಾರನ್ನು ಹೋಲುವ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದರು. ಚಿತ್ರೀಕರಣಕ್ಕೆ ಮುನ್ನವೇ ಸಿನಿಮಾ ವಿವಾದಕ್ಕೀಡಾಗಿತ್ತು. ಇ

ದೊಂದು ರಾಜಕೀಯ ಚಿತ್ರವಾಗಿದ್ದು, ನಿರ್ಧಿಷ್ಟ ವ್ಯಕ್ತಿಗಳ ಬದುಕಿನ ಚಿತ್ರಣಕ್ಕೆ ಆಸ್ಪದವಿರುವುದಿಲ್ಲ ಎಂದಿದ್ದರು ಮಣಿರತ್ನಂ. ಆದರೆ ಚಿತ್ರದಲ್ಲಿ ಎಂಜಿಆರ್‌, ಕರುಣಾನಿಧಿ, ಐಶ್ವರ್ಯಾ ರೈ ಸೇರಿದಂತೆ ಹಲವಾರು ನೈಜ ಪಾತ್ರಗಳು ತೆರೆಯ ಮೇಲೆ ಅನಾವರಣಗೊಂಡಿದ್ದವು. ಚಿತ್ರದಲ್ಲಿ ಆನಂದನ್‌ (ಮೋಹನ್‌ಲಾಲ್‌) ಮತ್ತು ತಮಿಳ್‌ಸೆಲ್ವನ್‌ (ಪ್ರಕಾಶ್‌ ರೈ) ಪಾತ್ರಗಳೊಂದಿಗೆ ಎಂಜಿಆರ್‌, ಕರುಣಾನಿಧಿ ಬದುಕಿಗೆ ಮಣಿರತ್ನಂ ಕನ್ನಡಿ ಹಿಡಿದಿದ್ದರು. ಇಬ್ಬರ ಸ್ನೇಹ, ರಾಜಕೀಯ ಪ್ರವೇಶ, ತಾತ್ವಿಕ ಭಿನ್ನಾಭಿಪ್ರಾಯಗಳು, ಇಬ್ಬರ ಮಧ್ಯೆ ತಲೆದೋರುವ ವೈಮನಸ್ಸು ಸೇರಿದಂತೆ ಸೂಕ್ಷ್ಮ ಸಂಗತಿಗಳು ಚಿತ್ರದಲ್ಲಿ ಅನಾವರಣಗೊಂಡಿದ್ದವು. ರೇವತಿ, ಗೌತಮಿ, ತಬು, ನಾಜರ್‌, ಕಾಕ ರಾಧಾಕೃಷ್ಣನ್‌, ಮೇಜರ್ ಸುಂದರ್‌ರಾಜನ್‌, ದಿಲ್ಲಿ ಗಣೇಶ್‌ ಮತ್ತಿತರರು ಚಿತ್ರದಲ್ಲಿ ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ದೊಡ್ಡ ಗೆಲುವು ಸಿಗಲಿಲ್ಲ. ಆದರೆ ಸಿನಿಮಾ ವಿಶ್ಲೇಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯ್ತು. ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಈ ಹೊತ್ತಿಗೂ ಇದೊಂದು ಭಾರತದ ಅತ್ಯುತ್ತಮ ರಾಜಕೀಯ ಚಿತ್ರವಾಗಿ ಕಾಣಿಸುತ್ತದೆ.

ನಟ ಶಿವಾಜಿ ಗಣೇಶನ್‌, ಕರುಣಾನಿಧಿ, ನಟ ಎಂಜಿಆರ್, ನಟಿ ಜಯಲಲಿತಾ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಬಿ.ಎನ್.ಹರಿದಾಸ್

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ

ಫೈಟರ್ ಶಿವಯ್ಯ

ಕನ್ನಡ ಚಿತ್ರರಂಗದ ಅಗ್ರಪಂಕ್ತಿಯ ಸಾಹಸ ಸಂಯೋಜಕ ಶಿವಯ್ಯ. ಸಿನಿಮಾ ವಲಯದಲ್ಲಿ `ಫೈಟರ್ ಶಿವಯ್ಯ’ ಎಂದೇ ಹೆಸರಾಗಿದ್ದರು. ಮಂಡ್ಯ ಜಿಲ್ಲೆ ನಾಗಮಂಗಲ