ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಸಿನಿಮಾದ ಪ್ರೊಮೋಷನ್ಗೆ ಚಾಲನೆ ಸಿಕ್ಕಿದೆ. ನರಸಿಂಹಮೂರ್ತಿ ನಿರ್ಮಾಣದ ಸಿನಿಮಾ ಇದೇ ಸೆಪ್ಟೆಂಬರ್ 25ರಂದು ತೆರೆಕಾಣಲಿದೆ.
ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತೆ ಎನ್ನುವ ಎಳೆಯ ಕತೆ ‘ಕಾಮನ್ ಮ್ಯಾನ್’ ಚಿತ್ರದ್ದು. ಸುರಭಿ ಫಿಲಂಸ್ ಅಡಿ ಎನ್. ನರಸಿಂಹಮೂರ್ತಿ ಅವರು ನಿರ್ಮಿಸಿರುವ ಚಿತ್ರ ಇದೇ ಸೆಪ್ಟೆಂಬರ್ 25ರಂದು ತೆರೆಕಾಣುತ್ತಿದೆ. ಹಿರಿಯ ಚಿತ್ರನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ರಚಿಸಿ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರದಲ್ಲಿ ಗೌರೀಶಂಕರ್ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಮೋಷನ್ʼಗೆ ನಗರದ ಶ್ರೀ ಬಂಡೆ ಮಾಂಕಾಳಮ್ಮನ ಸನ್ನಿಧಿಯಲ್ಲಿ ಚಾಲನೆ ನೀಡಲಾಯಿತು. ದೇವಸ್ಥಾನದ ಮುಂದೆ ಸಿನಿಮಾ ಪ್ರಚಾರದ ಟ್ಯಾಬ್ಲೊ ವಾಹನಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ನಿರ್ಮಾಪಕ ನರಸಿಂಹಮೂರ್ತಿ, ‘ನಮ್ಮ ಚಿತ್ರ ಸೆಪ್ಟೆಂಬರ್ 25ರಂದು ಬಿಡುಗಡೆಯಾಗುತ್ತಿದೆ. ಇವತ್ತಿಂದ ಎರಡು ಪ್ರಚಾರ ವಾಹನಗಳು ಹೊರಡುತ್ತಿವೆ. ಒಂದು ಉತ್ತರ ಕರ್ನಾಟಕದಾದ್ಯಂತ, ಮತ್ತೊಂದು ಮೈಸೂರು, ಚಾಮರಾಜನಗರ ಭಾಗದಲ್ಲಿ ಸಂಚರಿಸಲಿದೆ. ಒಂದು ಚಿತ್ರಕ್ಕೆ ಪ್ರಚಾರ ತುಂಬಾ ಮುಖ್ಯವಾಗಿದೆ. ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಇದೆ. ಸಾಮಾನ್ಯ ಯುವಕನೊಬ್ಬ ಸರ್ಕಾರದ ಮೇಲೆ ಒತ್ತಡ ತಂದು ಹೇಗೆ ಸಿಎಂ ಆಗುತ್ತಾನೆ, ರಾಜಕಾರಣಿಗಳಿಂದಲೂ ಆಗದ ಕೆಲಸಗಳನ್ನು ಆತ ಹೇಗೆ ಮಾಡ್ತಾನೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿಬಂದಿದೆ, ಎಲ್ಲರೂ ಬಂದು ನೋಡಿ’ ಎಂದರು. ನಿರ್ದೇಶಕ ಸಾಯಿಪ್ರಕಾಶ್ ಚಿತ್ರದ ಬಗ್ಗೆ ಮಾತನಾಡಿದರು. ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ವಿನಯ್ ಚಂದ್ರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.







