ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳ ಯುಗವು 1921ರಿಂದ ಆರಂಭವಾಗಿರುವುದನ್ನು ಚಲನಚಿತ್ರ ಇತಿಹಾಸಕಾರ ಗಂಗಾಧರ ಮೊದಲಿಯಾರ್ ಗುರುತಿಸಿದ್ದಾರೆ. ಅವರ ಪ್ರಕಾರ 1921ರಿಂದ 1933ರವರೆಗೆ ಸುಮಾರು 125 ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಿ ಲಭ್ಯವಿರುವ 54 ಚಿತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.
ಮೈಸೂರಿನ ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಅರಮನೆಯಲ್ಲಿ ಪ್ರದರ್ಶನವಾದ ಎ.ವಿ.ವರದಾಚಾರ್ಯರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟ ‘ನಿರುಪಮಾ’ (1921)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಹಾಗಾಗಿ ಎ.ವಿ.ವರದಾಚಾರ್ಯರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ನಿರ್ಮಾಪಕ.
1925ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿಯು ತರೀಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಮಹಾತ್ಮಾ ಕಬೀರ್’ ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರದಲ್ಲಿ ಅಭಿನಯ ಶಿರೋಮಣಿ ಸಿ.ಬಿ.ಮಲ್ಲಪ್ಪನವರು ನಟಿಸಿದ್ದರು. ಗುಬ್ಬಿ ವೀರಣ್ಣನವರು ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್ ಸಂಸ್ಥೆ ಹುಟ್ಟು ಹಾಕಿ ‘ಹಿಸ್ ಲವ್ ಅಫೇರ್’ (1936), ‘ಸಾಂಗ್ ಆಫ್ ಲೈಫ್’ (1931) ಮತ್ತು ‘ಹರಿಮಾಯ’ (1932) ಎಂಬ ಮೂರು ಚಿತ್ರಗಳನ್ನು ನಿರ್ಮಿಸಿದರು.
ಸಾಹಿತಿ ಶಿವರಾಮಕಾರಂತ ಅವರೂ ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು ಮತ್ತೊಂದು ಸಾಹಸ. ಹರಿಜನರ ಬದುಕನ್ನು ಆಧರಿಸಿದ್ದ ‘ಡೊಮಿಂಗೋ’ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ‘ಭೂತರಾಜ್ಯ’ (1931) ಚಿತ್ರವನ್ನು ಸಹ ನಿರ್ಮಿಸಿದರು.
(ಮಾಹಿತಿ ಕೃಪೆ: ಡಾ.ಕೆ.ಪುಟ್ಟಸ್ವಾಮಿ ಅವರ ‘ಸಿನಿಮಾಯಾನ’ ಕೃತಿ)