ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಸಾಹಿತಿ ಕೆ.ಎನ್.ಗಣೇಶಯ್ಯ ಅವರ ‘ಪುಣ್ಯಕೋಟಿ ಶತಕರುಣಿ’ ದೃಶ್ಯಕಾವ್ಯ ಲೋಕಾರ್ಪಣೆ

ಪೋಸ್ಟ್ ಶೇರ್ ಮಾಡಿ
ಸಾಹಿತಿ ಕೆ.ಎನ್.ಗಣೇಶಯ್ಯ ಅವರ 'ಪುಣ್ಯಕೋಟಿ ಶತಕರುಣಿ' ದೃಶ್ಯಕಾವ್ಯ ಲೋಕಾರ್ಪಣೆ

ಜನಪ್ರಿಯ ಪುಣ್ಯಕೋಟಿ ಹಾಡಿನ ಹೊಸ ರೂಪಾಂತರ ‘ಪುಣ್ಯಕೋಟಿ ಶತಕರುಣಿ’. ಕಾದಂಬರಿಕಾರ ಕೆ.ಎನ್‌.ಗಣೇಶಯ್ಯ ಅವರ ಈ ಕಲ್ಪನೆ ದೃಶ್ಯಕಾವ್ಯವಾಗಿ ರೂಪುಗೊಂಡಿದೆ. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಈ ದೃಶ್ಯಕಾವ್ಯ ನಿರ್ಮಾಣವಾಗಿದೆ. ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ನಟ ರಮೇಶ್‌ ಅರವಿಂದ್‌ ನಿನ್ನೆ (ಜುಲೈ 16) ಈ ದೃಶ್ಯಕಾವ್ಯವನ್ನು ಲೋಕಾರ್ಪಣೆಗೊಳಿಸಿದರು.

‘ಪುಣ್ಯಕೋಟಿ’ ಹಾಡನ್ನು ಕೇಳದ ಕಿವಿಗಳೇ ಇಲ್ಲ ಎನ್ನಬಹುದು. ಅಂತಹ ‘ಪುಣ್ಯಕೋಟಿ’ ಹಾಡನ್ನು ಖ್ಯಾತ ಕಾದಂಬರಿಕಾರ, ಬರಹಗಾರ, ಕೃಷಿ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಕೆ.ಎನ್. ಗಣೇಶಯ್ಯ ಪುನಃರಚಿಸಿದ್ದಾರೆ. ಇದಕ್ಕೆ ‘ಪುಣ್ಯಕೋಟಿ ಶತಕರುಣಿ’ ಎಂದು ಹೆಸರಿಟ್ಟಿದ್ದಾರೆ. ಲಾಫ್ಟಿಲ್ಯಾನ್ಡ್ ಸಂಸ್ಥೆ, ದಿನಿ ಸಿನಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ಈ ಹಾಡನ್ನು ದೃಶ್ಯಕಾವ್ಯವಾಗಿ ನಿರ್ಮಾಣ ಮಾಡಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ಅಜಯ್ ಶ್ರೀನಿವಾಸಮೂರ್ತಿ ಸಂಗೀತ ನೀಡಿರುವ ಈ ದೃಶ್ಯಕಾವ್ಯದ ಹಾಡನ್ನು ಮೇಘನ ಹಳಿಯಾಳ್, ಚಿಂತನ್ ವಿಕಾಸ್ ಹಾಗೂ ಆರವ್ ಜೋಶಿ ಹಾಡಿದ್ದಾರೆ. ಇತ್ತೀಚೆಗೆ ಈ ದೃಶ್ಯಕಾವ್ಯದ ಲೋಕಾರ್ಪಣೆ ಸಮಾರಂಭ ಜಯನಗರದ ಯಡಿಯೂರಿನಲ್ಲಿರುವ ಅ.ನ.ಕೃ ಸಮುದಾಯ ಭವನದ ಪುನೀತ್ ರಾಜಕುಮಾರ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ ಹಾಗೂ ಹೆಸರಾಂತ ನಟರಾದ ರಮೇಶ್ ಅರವಿಂದ್ ಈ ದೃಶ್ಯಕಾವ್ಯವನ್ನು ಲೋಕಾರ್ಪಣೆ ಮಾಡಿದರು. ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಈ ದೃಶ್ಯಕಾವ್ಯ ಮೂಡಿಬಂದಿರುವುದು ವಿಶೇಷ. ಇಂಗ್ಲೀಷ್ ನ‌ ದೃಶ್ಯಕಾವ್ಯಕ್ಕೆ ರಮೇಶ್ ಅರವಿಂದ್ ಅವರೇ ಧ್ವನಿ ನೀಡಿದ್ದಾರೆ.

‘ಗಣೇಶಯ್ಯ ಅವರಿಗೆ ಪುಣ್ಯಕೋಟಿ ಎಂದರೆ ಬಹಳ ಇಷ್ಟ. ಏಕೆಂದರೆ ಅವರ ಮಗಳಿಗೂ ಅದೇ ಹೆಸರಿಟ್ಟಿದ್ದಾರೆ’ ಎಂದು ಮಾತನಾಡಿದ ಸುಧಾಮೂರ್ತಿ, ‘ಪುಣ್ಯಕೋಟಿ ಹಾಡನ್ನು ನಾವೆಲ್ಲಾ ಕೇಳಿ ಬೆಳೆದಿದ್ದೇವೆ. ನಾವು ಪುಣ್ಯಕೋಟಿಯ ತ್ಯಾಗವನ್ನಷ್ಟೇ ನೋಡಿದ್ದೇವೆ. ಆದರೆ ಗಣೇಶಯ್ಯ ಅವರು ಇಲ್ಲಿ ಶತಕರುಣಿಯ (ಹುಲಿ) ತ್ಯಾಗವನ್ನು ಹೇಳಿದ್ದಾರೆ. ಕೊನೆಗೆ‌ ಅವರು ಹೇಳಿರುವ ‘ಲೋಕವೆಲ್ಲವು ಏಕವಾಗಿ ನಾಕವಾಗುವುದಿ ಧರೆ’ ಎಂಬ ಸಾಲು ನನ್ನ ಮನಮುಟ್ಟಿತ್ತು. ಈ ದೃಶ್ಯಕಾವ್ಯ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಕಡೆಗೂ ತಲುಪುವಂತಾಗಲಿ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು’ ಎಂದರು.

‘ನಾನು ಓದಿದ್ದ ಶಾಲೆಯ ಪ್ರಿನ್ಸಿಪಲ್ ರೂಮ್’ನಲ್ಲಿ ಒಂದು ಪೇಂಟಿಂಗ್. ಆ ಪೇಂಟಿಂಗ್ ನಲ್ಲಿ ಪಿಂಕ್ ಸೀರೆ ಉಟ್ಟು ಹಣತೆ ಹಿಡಿದು ನಗುತ್ತಿರುವ ಹೆಣ್ಣಮಗಳ ಫೋಟೊ. ಅದರ ಕೆಳಗೆ ಲೇಡಿ ವಿತ್ ದ ಲ್ಯಾಂಪ್ ಎಂದು ಬರೆದಿತ್ತು. ಆ ಫೋಟೊ ನೋಡಿದಾಗಲೆಲ್ಲ ನನಗೆ ಸುಧಾಮೂರ್ತಿ ಅವರು ನೆನಪಾಗುತ್ತಾರೆ. ಅವರ ಬರವಣಿಗೆ ಮೂಲಕ, ಚಾರಿಟಿಯ ಮೂಲಕ‌ ಸುಧಾಮೂರ್ತಿ ಅವರು ಬೆಳಕನ್ನು ಚೆಲ್ಲುತ್ತಿದ್ದಾರೆ. ಅಂತಹ ಸುಧಾಮೂರ್ತಿ ಅವರು ಈ ದೃಶ್ಯಕಾವ್ಯವನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ ಅವರಿಗೆ ಧನ್ಯವಾದ. ಕೆ.ಎನ್‌. ಗಣೇಶಯ್ಯ ಅವರು ವಿಜ್ಞಾನವನ್ನು ಹಿಸ್ಟರಿ ಜೊತೆಗೆ ಸೇರಿಸಿ,‌‌ ಫಿಲಾಸಫಿಯನ್ನೂ ಸೇರಿಸಿ ನಮಗೆ ಮೂರು ದಶಕಗಳಿಂದ ಕುತೂಹಲವಾದ ಕಥೆಗಳನ್ನು ಕೊಡುತ್ತಿದ್ದಾರೆ. ನಾನು ಅವರ ‘ಕನಕ ಮುಸುಕು’ ಹಾಗೂ ‘ಕರಿಸಿರಿಯಾನ’ ಎರಡನ್ನು ಸೇರಿಸಿ ಚಿತ್ರಕಥೆ ಮಾಡಿ ಒಂದು ಚಿತ್ರ‌ಮಾಡಬೇಕೆಂದು ಕಾಯುತ್ತಿದ್ದೇನೆ. ಈ ದೃಶ್ಯಕಾವ್ಯವನ್ನು ಗಣೇಶಯ್ಯ ಅವರು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನೂ ಈ ದೃಶ್ಯಕಾವ್ಯದ ಅನಿಮೇಶನ್ ಅಂತೂ ಅದ್ಭುತ. ಒಂದು ಹಸುವಿನ ಮೇಲೆ ಹುಲಿ ಕುಳಿತು ಬರುವುದನ್ನು ನಾನು ಇಲ್ಲಿವರೆಗೂ ನೋಡೆ ಇಲ್ಲ. ನಿರ್ದೇಶಕ ಬಾಲು ಅವರ ಕಲ್ಪನೆಗೆ ಧನ್ಯವಾದ. ಸಾಮೂಹಿಕವಾಗಿ ನೆನಪಲ್ಲಿರುವ ಒಂದು ಕಥೆಯನ್ನು ತೆಗೆದುಕೊಂಡು ಇದು ಅಷ್ಟೇ ಅಲ್ಲ. ಅದರ ಹಿಂದೆ ಇನ್ನೊಂದು ಕಥೆ ಇದೆ ಎಂದು ಈ ದೃಶ್ಯಕಾವ್ಯದ ಮೂಲಕ ಹೇಳಿರುವ ಗಣೇಶಯ್ಯ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಕಡೆಯಿಂದ ಮತ್ತೊಮ್ಮೆ ಧನ್ಯವಾದ’ ಎಂದರು‌ ನಟ ರಮೇಶ್ ಅರವಿಂದ್.

‘ನನ್ನ ಮಗಳಿಗೆ ಪುಣ್ಯಕೋಟಿ ಎಂದು ಹೆಸರಿಟ್ಟಿದ್ದೇವೆ. ನಾನು ಹಾಗೂ ನನ್ನ ಹೆಂಡತಿ ನನ್ನ ಮಗಳಿಗೆ ಒಂದೂವರೆ ವರ್ಷ ಇರಬೇಕಾದರೆ, ಅವಳನ್ನು ಕಾಡಿಗೆ ಕರೆದುಕೊಂಡು ಹೋಗಿ ಬರುತ್ತಿದ್ದೆವು. ಅವಳಿಗೆ ಅಲ್ಲಿ ತರಚಿದ ಗಾಯಗಳಾಗಿರುತ್ತಿತ್ತು. ಅದನ್ನು ನೋಡಿ, ನಮ್ಮ ಅಪ್ಪ ಬಯ್ಯುತ್ತಿದ್ದರು. ಅದರ ಮೇಲೆ ಒಂದು ಹಾಡನ್ನು ಕೂಡ ಬರೆದಿದ್ದರು. ಈ ಹಾಡಿನಲ್ಲಿ ಪುಣ್ಯಕೋಟಿ ನನ್ನ ಮಗಳಾಗಿದ್ದಳು. ನಾನು, ನನ್ನ ಹೆಂಡತಿ ವಿಲನ್ ಆಗಿದ್ದೆವು. ಈಗ ನಮ್ಮಪ್ಪ ಇಲ್ಲ. ನಾನು ಈ ಹಾಡಿನಲ್ಲಿ ಪುಣ್ಯಕೋಟಿಯನ್ನು ಸಾಯಿಸಿದ್ದೇನೆ.‌ ಇದನ್ನು ನೋಡಿದ್ದರೆ, ನಮ್ಮಪ್ಪನ ಪಾಲಿಗೆ ನಾನು ಪರ್ಮನೆಂಟ್ ವಿಲನ್ ಆಗುತ್ತಿದೆ. ಅಪ್ಪ ಬರೆದ ಹಾಡಿನಲ್ಲಿ ನನ್ನನ್ನು ಅವರು ವ್ಯಾಘ್ರ ಮಾಡಿದಾಗ, ಆ ವ್ಯಾಘ್ರವನ್ನು ಕೂಡ ಒಳ್ಳೆಯವನೆ ಎಂದು ನಾನು ವಾದ ಮಾಡಬೇಕಿತ್ತು. ಅದೇ ಈ ಕಥೆಯ ಮೂಲ. ನನ್ನ ಕಥೆ ಪುಣ್ಯಕೋಟಿ ಸತ್ತ ನಂತರ ಮುಗಿದು ಹೋಗುತ್ತಿತ್ತು. ಅಪರ್ಣ ಎಂಬ ಹುಡುಗಿ ಕಥೆ ಬಹಳ ಚೆನ್ನಾಗಿದೆ. ಇಲ್ಲಿ ನಿಲಿಸಬೇಡಿ. ನೀವು ಪರಿಸರ ವಿಜ್ಞಾನಿ. ಪುಣ್ಯಕೋಟಿ ಹಾಗೂ ಶತಕರುಣಿ ವಂಶ ಬೆಳೆಯಿತು ಎಂಬುದನ್ನು ಸೇರಿಸಿ ಎಂದರು. ಆ ಹುಡುಗಿಯಿಂದ ಕಥಾ ವಿಸ್ತರಣೆ ಆಯಿತು. ನಂತರ ಬಾಲು ಚಂದ್ರಶೇಖರ್ ಅವರು ಇದನ್ನು ಸಿನಿಮಾ ಮಾಡುತ್ತೇನೆ ಎಂದರು. ಈ ದೃಶ್ಯಕಾವ್ಯದ ಇಂಗ್ಲಿಷ್ ಅವತರಣಿಕೆಗೆ ರಮೇಶ್ ಅರವಿಂದ್ ಅವರು ಧ್ವನಿ ನೀಡಿ, ಅವರು ಇದರ ಕುರಿತು ಆಡಿದ ಮಾತುಗಳು ಹಾಗೂ ಸುಧಾಮೂರ್ತಿ ಅವರ ಆಫೀಸ್ ಗೆ ಹೋಗಿ ಈ ದೃಶ್ಯಕಾವ್ಯ ತೋರಿಸಿದಾಗ ಅವರ ಕಣ್ಣಿನಿಂದ ನೀರು ಬಂತು. ಇವೆಲ್ಲವು ನನ್ನ ಮನ ಮುಟ್ಟಿತ್ತು’ ಎಂದು ದೃಶ್ಯಕಾವ್ಯದ ಸೂತ್ರಧಾರಿ ಕೆ.ಎನ್ ಗಣೇಶಯ್ಯ ಹೇಳಿದರು.

ಮೂಲತಃ ಎಂಜಿನಿಯರ್ ಆಗಿರುವ ನಿರ್ದೇಶಕ ಬಾಲು ಚಂದ್ರಶೇಖರ್ ಅವರು ಸಹ ಈ ಅನಿಮೇಶನ್ ಸಿನಿಮಾ ಸಾಗಿ ಬಂದ ಕುರಿತು ಮಾಹಿತಿ ನೀಡಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂಗೀತ ನಿರ್ದೇಶಕ ಅಜಯ್ ಶ್ರೀನಿವಾಸಮೂರ್ತಿ ಹೊಸಬರಾದರೂ ತುಂಬಾ ಒಳ್ಳೆಯ ಸಂಗೀತ ನೀಡಿದ್ದಾರೆ. ಒಂದು ಅಪ್ಪಟ ಕನ್ನಡದ ತಂಡ ಜಗತ್ತು ನೋಡುವಂತೆ ಈ ಹಾಡನ್ನು ಕಟ್ಟಿಕೊಟ್ಟಿದ್ದಾರೆ.

ಈ ಬರಹಗಳನ್ನೂ ಓದಿ