
ನಿರ್ದೇಶಕ – ನಿರ್ಮಾಪಕ
ಸಿದ್ದಲಿಂಗಯ್ಯ ನಿರ್ದೇಶನದ `ಭೂತಯ್ಯನ ಮಗ ಅಯ್ಯು’ ಚಿತ್ರಕ್ಕೆ ಚಿಕ್ಕಮಗಳೂರಿನ ಕಳಸಾಪುರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾನು ಈ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗಿನ್ನೂ ವಿಷ್ಣು ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದ ಹೀರೋ. ಒಂದು ಸೂಟ್ಕೇಸ್ನೊಂದಿಗೆ ಚಿತ್ರೀಕರಣಕ್ಕೆ ಬಂದಿದ್ದ. ಉಳಿದುಕೊಳ್ಳಲು ಊರಿನಲ್ಲಿ ನಮಗೊಂದು ಪುಟ್ಟ ಮನೆಯ ವ್ಯವಸ್ಥೆಯಾಗಿತ್ತು. ನಾನು, ವಿಷ್ಣು ಸೇರಿದಂತೆ ಚಿತ್ರತಂಡದ ಆರೇಳು ಜನರು ಆ ಮನೆಯಲ್ಲಿರುತ್ತಿದ್ದೆವು.
ಅಲ್ಲಿ ನಿತ್ಯ ಬೆಳಗ್ಗೆ ನಾವು ಹಾಲು ಕುಡಿಯುವ ಪರಿಯೇ ವಿಚಿತ್ರವಾಗಿರುತ್ತಿತ್ತು. ಅದೇಕೆ ಅಂಥ ರೂಢಿ ಬೆಳೆಸಿಕೊಂಡಿದ್ದೆವೋ ಈಗ ನೆನಪು ಮಾಡಿಕೊಂಡರೆ ನಗು ಬರುತ್ತದೆ. ಹೋಟೆಲ್ನಿಂದ ಥರ್ಮಾಫ್ಲಾಸ್ಕ್ನಲ್ಲಿ ಬಿಸಿ ಹಾಲು ತರುತ್ತಿದ್ದೆವು. ಅದಕ್ಕೆ ಹಾರ್ಲಿಕ್ಸ್, ಬೋರ್ನ್ವಿಟ, ವಿವಿಟ ಸೇರಿದಂತೆ ಇನ್ನೂ ಎರಡು ಬಗೆಯ ಪುಡಿಗಳನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದೆವು. ಹೀಗೆ ವಿಶೇಷ ಪಾನೀಯದೊಂದಿಗೆ ನಮ್ಮ ದಿನ ಆರಂಭವಾಗುತ್ತಿತ್ತು!