ಖಾರಾಪುರ ಕಾಡಿನಲ್ಲಿ ಹುಲಿ ಚಂದ್ರಶೇಖರ್ ಚೊಚ್ಚಲ ನಿರ್ದೇಶನದ ‘ಹುಲಿ ಬಂತು ಹುಲಿ’ ಸಿನಿಮಾ ಮುಹೂರ್ತದ ಸಂದರ್ಭ. 1975ರ ಅಕ್ಟೋಬರ್ ತಿಂಗಳು. ಸಾಹಿತಿ ಅನಂತಮೂರ್ತಿ ಅವರು ಕ್ಯಾಮರಾಗೆ ಚಾಲನೆ ನೀಡಿದ್ದರು. ಹೊಸ ಅಲೆಯ ‘ಸಂಸ್ಕಾರ’ ಚಿತ್ರದೊಂದಿಗೆ ಸಂಚಲನ ಸೃಷ್ಟಿಸಿದ ನಿರ್ದೇಶಕ ಪಟ್ಟಾಭಿರಾಮರೆಡ್ಡಿ, ಹುಲಿ ಚಂದ್ರಶೇಖರ್, ಛಾಯಾಗ್ರಾಹಕ ಬಿ.ಸಿ.ಗೌರೀಶಂಕರ್, ಕಿಕ್ಕೇರಿ ನಾರಾಯಣ ಇತರರು ಈ ಫೋಟೋದಲ್ಲಿದ್ದಾರೆ.
ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣಗೊಂಡಿದ್ದು ಖಾರಾಪುರ ಅರಣ್ಯ ಮತ್ತು ಕಬಿನಿ ಹಿನ್ನೀರಿನ ಪ್ರದೇಶದಲ್ಲಿ. ನರಭಕ್ಷಕ ಹುಲಿಯೊಂದು ಕಾಡಿನಲ್ಲಿ ವಾಸವಿರುವ ಬುಡಕಟ್ಟು ಕುಟುಂಬಗಳಿಗೆ ಆತಂಕ ತಂದೊಡ್ಡುತ್ತದೆ. ಈ ಹುಲಿ ಹಿಡಿಯುವ ಮತ್ತು ಬುಡಕಟ್ಟು ಜನರ ಬದುಕಿನ ಹಿನ್ನೆಲೆಯಲ್ಲಿ ಚಿತ್ರಿತವಾಗಿರುವ ಸಿನಿಮಾದಲ್ಲಿ ಬಹುಪಾಲು ಅಲ್ಲಿನ ನಿವಾಸಿಗಳೇ ಪಾತ್ರಧಾರಿಗಳು ಎನ್ನುವುದು ವಿಶೇಷ. ಅಲ್ಲಿನ ಜನರು ಹಾಡಿದ ಹಾಡಿಯ ಹಾಡುಗಳನ್ನೇ ನಿರ್ದೇಶಕ ಹುಲಿ ಚಂದ್ರಶೇಖರ್ ಚಿತ್ರದಲ್ಲಿ ಬಳಕೆ ಮಾಡಿದ್ದಾರೆ. ಹಿನ್ನೆಲೆ ಸಂಗೀತ ರಾಜೀವ್ ತಾರಾನಾಥ್ ಅವರದ್ದು.

ಕತೆ, ಚಿತ್ರಕಥೆ ಬರೆದ ಹುಲಿ ಚಂದ್ರಶೇಖರ್ ಸಂಭಾಷಣೆಯನ್ನು ಕಿಕ್ಕೇರಿ ನಾರಾಯಣ ಅವರಿಂದ ಬರೆಸಿದ್ದರು. ಚಿತ್ರಕ್ಕೆ ಬುಡಕಟ್ಟು ಭಾಷೆ ಬೇಕಿತ್ತು. ಆಗ ಭಾರತೀಯ ಭಾಷಾ ಸಂಸ್ಥಾನದಲ್ಲಿ ಬುಡಕಟ್ಟು ಭಾಷೆ ಅಧ್ಯಯನ ಮಾಡುತ್ತಿದ್ದ ಕಿಕ್ಕೇರಿ ನಾರಾಯಣ ಅವರಿಂದ ಸಂಭಾಷಣೆ ಬರೆಸುವಂತೆ ಸಾಹಿತಿ ಯು.ಆರ್.ಅನಂತಮೂರ್ತಿಯವರು ನಿರ್ದೇಶಕರಿಗೆ ಸಲಹೆ ಮಾಡಿದ್ದರು. ಬುಡಕಟ್ಟು ಜನಾಂಗದ ಪ್ರಮುಖನಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ವಾಸುದೇವರಾವ್ ನಟಿಸಿದ್ದಾರೆ. ಹುಲಿ ಹಿಡಿಯಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪಾತ್ರದಲ್ಲಿ ರಾಮಕೃಷ್ಣ ಇದ್ದಾರೆ. ಉಳಿದಂತೆ ಅಲ್ಲಿನ ಬುಡಕಟ್ಟು ನಿವಾಸಿಗಳಿಗೆ ಸೂಕ್ತ ನಟನಾ ತರಬೇತಿ ನೀಡಿ ಅವರಿಂದ ಪಾತ್ರಗಳನ್ನು ಮಾಡಿಸಲಾಗಿತ್ತು.

ನಿರ್ದೇಶಕ ಸಿ.ಚಂದ್ರಶೇಖರ್ ಹೆಸರಿನ ಹಿಂದೆ ‘ಹುಲಿ’ ಹೆಸರು ಸೇರಿಕೊಂಡಿದ್ದು ಹೇಗೆ?: ನರಭಕ್ಷಕ ಹುಲಿಯ ಕತೆಯ ಚಿತ್ರವಾದ್ದರಿಂದ ಹುಲಿಗೆ ಪ್ರಮುಖ ಪಾತ್ರ. ತಮಿಳುನಾಡಿನ ದಿಂಡಿಗಲ್ನಿಂದ ಸರ್ಕಸ್ ಹುಲಿಯೊಂದನ್ನು ತರಿಸಲಾಗಿತ್ತು. ಹುಲಿಯನ್ನು ನಿಭಾಯಿಸಲು ಹತ್ತು ಜನ ಸಿಬ್ಬಂದಿಯೂ ಬಂದಿದ್ದರು. ಕ್ಲೈಮ್ಯಾಕ್ಸ್ ಚಿತ್ರಿಸುವಾಗ ಒಂದು ಆಕಸ್ಮಿಕ ನಡೆಯಿತು. ದಟ್ಟ ಹುಲ್ಲುಗಾವಲಿನಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ ಸಿಬ್ಬಂದಿಯ ಅಜಾಗರೂಕತೆಯಿಂದ ಹುಲಿ ಕಾಡಿನಲ್ಲಿ ತಪ್ಪಿಸಿಕೊಂಡಿತು! ನಿಜವಾದ ಆತಂಕ ಶುರುವಾಗಿದ್ದು ಆಗಲೇ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನಿಂದ ವಾರದೊಳಗೆ ಹುಲಿಯನ್ನು ಪತ್ತೆ ಮಾಡಿ ಪಳಗಿಸಿ ಚಿತ್ರೀಕರಣ ಪೂರ್ಣಗೊಳಿಸಿದರು. ಕಾಣೆಯಾಗಿದ್ದ ಹುಲಿಯನ್ನು ಪತ್ತೆ ಹಚ್ಚಿ ಚಿತ್ರೀಕರಣ ನಡೆಸಿದ ನಿರ್ದೇಶಕ ಚಂದ್ರಶೇಖರ್ ಹೆಸರಿನ ಹಿಂದೆ ‘ಹುಲಿ’ ಸೇರಿಕೊಂಡಿತು.

ಮಲ್ನಾಡ್ ಮೂವಿ ಮೇಕರ್ಸ್ ಬ್ಯಾನರ್ನಡಿ ಈರೇಗೌಡ ಮತ್ತು ಸ್ನೇಹಿತರು ನಿರ್ಮಿಸಿದ ಚಿತ್ರವಿದು. 1975ರ ಅಕ್ಟೋಬರ್ನಲ್ಲಿ ಶುರುವಾದರೂ ಸಿನಿಮಾ ತೆರೆಕಂಡದ್ದು 1978ರಲ್ಲಿ. ಮದರಾಸಿನಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಚೊಚ್ಚಲ ನಿರ್ದೇಶಕರ ಸಿನಿಮಾ ವಿಭಾಗದಲ್ಲಿ ‘ಹುಲಿ ಬಂತು ಹುಲಿ’ ಪ್ರದರ್ಶನಗೊಂಡಿತು.
