ಪ್ರಾಣ್ ಸುವರ್ಣ ನಿರ್ದೇಶನದ ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿವೆ. ಭರತ್ ಕುಮಾರ್, ಮೋಕ್ಷಿತಾ ಪೈ ಮತ್ತು ರಿಯಾ ಸಚ್ದೇವ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಉಮೇಶ್ ಫಿಲಂಸ್ ಲಾಂಛನದಲ್ಲಿ ಎನ್. ಹನುಮಂತರಾಜು, ಎನ್.ಹೆಚ್.ಉಮೇಶ್ ನಿರ್ಮಿಸುತ್ತಿರುವ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ಪ್ರಾಣ್ ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ. ಸುನಾದ್ ಗೌತಂ ಅವರ ಸಂಗೀತ ನಿರ್ದೇಶನವಿರುವ ಎರಡು ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಕುಮಾರ್, ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ, ರಿಯಾ ಸಚ್ ದೇವ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಡಿಯೋ ರಿಲೀಸ್ ಮಾಡಿದ ಲಹರಿ ವೇಲು ಮಾತನಾಡುತ್ತ, ‘ಈ ಚಿತ್ರದಲ್ಲಿ ಐದು ಸುಂದರ ಹಾಡುಗಳಿದ್ದು, ಅವುಗಳನ್ನು ಅಷ್ಟೇ ಅದ್ಭುತವಾಗಿ ಪಿಚ್ಚರೈಸೇಷನ್ ಮಾಡಿದ್ದಾರೆ. ನಾನು ಕೂಡ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದರು.
ಸಾಹಿತಿ ಕೆ.ಕಲ್ಯಾಣ್ ಮಾತನಾಡಿ, ‘ನಿರ್ಮಾಪಕರಲ್ಲಿರುವ ಸಿದ್ದತೆ, ನಿರ್ದೇಶಕರಲ್ಲಿರುವ ಬದ್ದತೆ ಹಾಡುಗಳಲ್ಲಿ ಎದ್ದು ಕಾಣುತ್ತದೆ. ನಾಯಕಿ ಪಾತ್ರಕ್ಕೆ ತಮಿಳು ಹಿನ್ನೆಲೆ ಇರುತ್ತದೆ. ಹಾಗಾಗಿ ತಮಿಳು, ಕನ್ನಡ ಸೇರಿಸಿ ಒಂದು ಹಾಡನ್ನು ರಚಿಸಿದ್ದೇನೆ’ ಎಂದರು. ನಾಯಕ ಭರತ್ ಕುಮಾರ್ ಮಾತನಾಡುತ್ತ, ‘ಲಹರಿ ವೇಲು ಅವರ ಬಳಿ ಹೋದಾಗ ಬಹಳ ಅರ್ಥ ಪೂರ್ಣವಾದ ಸಾಲುಗಳನ್ನು ಹಾಕಿದ್ದೀರಿ ಎಂದು ಪ್ರಶಂಸಿಸಿದರು. ಅಲ್ಲದೆ ಒಳ್ಳೆಯ ಮೊತ್ತಕ್ಕೆ ಆಡಿಯೋ ಮಾಡಿಕೊಟ್ಟರು. 2 ಭಾಷೆಯ ಸಾಂಗ್ ಬೇಕು ಎಂದಾಗ ಕೆ.ಕಲ್ಯಾಣ್ ಅದಕ್ಕೆ ತಕ್ಕಂತೆ ಸಾಲುಗಳನ್ನು ಪೋಣಿಸಿದರು. ರಾಧಾ ಪಾತ್ರವನ್ನು ಪಾರು ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತೆ ಎಂದು ನಮ್ಮಮ್ಮ ಸಲಹೆ ಕೊಟ್ಟರು. ಇನ್ನು ಪ್ರೊಡ್ಯೂಸರ್ ಇಬ್ಬರೂ ನನ್ನ ಬ್ರದರ್ಸ್ ಇದ್ದಹಾಗೆ. ರುಕ್ಮಿಣಿಗೂ ಕೃಷ್ಣನಿಗೂ ಮಧ್ಯೆ ಇರುವ ಆತ್ಮವೇ ರಾಧಾ. ಈ ಹಾಡುಗಳು ಇಷ್ಟು ಚೆನ್ನಾಗಿ ಬರಲು ಸುನಾದ್ ಗೌತಂ ಅವರೇ ಕಾರಣ’ ಎಂದರು.
ನಾಯಕಿ ಮೋಕ್ಷಿತಾ ಪೈ ಮಾತನಾಡುತ್ತ, ‘ಕಥೆ ಹೇಳಲು ನಿರ್ಮಾಪಕರ ಜತೆ ಭರತ್ ಕೂಡ ಬಂದಿದ್ದರು. ನಿಮಗೆ ಯಾವ ಪಾತ್ರ ಬೇಕು ಎಂದಾಗ ನಾನು ರಾಧಾ ಪಾತ್ರವನ್ನೇ ಸೆಲೆಕ್ಟ್ ಮಾಡಿಕೊಂಡೆ, ಆ ಪಾತ್ರದ ಇನ್ಟೆನ್ಸ್ ನನಗೆ ತುಂಬಾ ಇಷ್ಟವಾಯ್ತು. ರುಕ್ಮಿಣಿ ಇಲ್ಲದೆ ರಾಧಾ ಇಲ್ಲ, ಕುಂಭ ಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ’ ಎಂದರು. ನಟಿ, ಮಾಡೆಲ್ ಕೂಡ ಆದ ರಿಯಾ ಸಚ್ ದೇವ್ ಮಾತನಾಡುತ್ತ, ‘ನಾನಿಲ್ಲಿ ರುಕ್ಮಿಣಿ ಪಾತ್ರ ಮಾಡಿದ್ದೇನೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರ ಕೊಟ್ಟಿದ್ದಾರೆ’ ಎಂದರು.
ಸಂಗೀತ ನಿರ್ದೇಶಕ ಸುನಾದ್ ಗೌತಂ ಮಾತನಾಡುತ್ತ, ‘ಕಥೆ ತುಂಬಾ ಯೂನಿಕ್ ಆಗಿದೆ. ದೊಡ್ಡದಾಗಿ ಪ್ರೊಜೆಕ್ಟ್ ಮಾಡಬೇಕು ಅಂತ ಕನಸಿಟ್ಟುಕೊಂಡಿದ್ದಾರೆ’ ಎಂದರು. ನಿರ್ದೇಶಕ ಪ್ರಾಣ್ ಸುವರ್ಣ ಮಾತನಾಡಿ, ‘ಕಲ್ಯಾಣ್ ಅವರು ಟ್ಯೂನ್ ಕೊಟ್ಟ ಮಾರನೇ ದಿನವೇ ಲಿರಿಕ್ ಕೊಟ್ಟರು. ಪಿನಾಕಾ ಸಮಯದಲ್ಲಿ ನನಗೆ ಭರತ್ ಪರಿಚಯವಾದರು. ನನ್ನ ಕೆಲಸ ಇಷ್ಟಪಟ್ಟು ಸಿನಿಮಾ ಮಾಡೋಣ ಅಂತ ಹೇಳಿ ನಿರ್ಮಾಪಕರ ಬಳಿ ಕರೆದುಕೊಂಡು ಹೋದರು. ಭರತ್ ಹೇಳಿದ ಒಂದು ಲೈನ್ ಇಟ್ಟುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ. ಕೃಷ್ಣನಿಗೆ ಆತ್ಮ ಅಂತ ಇರೋದು ರಾಧ, ರುಕ್ಮಿಣಿ ಕೃಷ್ಣನ ಸಂಗಾತಿಯಾಗಿ ಉಳಿದರೂ ರಾಧ ಆತನ ಆತ್ಮವಾಗಿ ಉಳಿದುಕೊಳ್ತಾಳೆ. ಕುಂಭಕೋಣಂನಲ್ಲಿ ಚಿತ್ರದ ಮೇಜರ್ ಪೋರ್ಷನ್ ನಡೆಯುತ್ತದೆ’ ಎಂದರು. ನಿರ್ಮಾಪಕ ಉಮೇಶ್ ಮಾತನಾಡಿ, ‘ಶೇ 90ರಷ್ಟು ಶೂಟಿಂಗ್ ಮುಕ್ತಾಯವಾಗಿದ್ದು ಒಂದು ಸಾಂಗ್ ಮಾತ್ರ ಬಾಕಿಯಿದೆ’ ಎಂದರು.








