ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ತಾರೆಗಳ ತೋಟದಿಂದ ಚಂದಿರ ಬಂದ

ಪೋಸ್ಟ್ ಶೇರ್ ಮಾಡಿ
ಬಿ.ಶ್ರೀಪಾದ್ ಭಟ್‌‌
ಲೇಖಕ

ಸಿನಿಮಾರಂಗಗಳಲ್ಲಿ ಹೊಸ ಹೊಸ ಪ್ರಯೋಗಗಳು ಶುರುವಾದಂತೆ ಬೆಳ್ಳಿಪರದೆಯು ರಂಗಮಂಚದ ಕಲಾವಂತಿಕೆಯ ಒಂದು ಮೆಟಫರ್ ಎಂದು ವಿಶ್ಲೇಷಿಸಲಾಯಿತು. ಇದು ಮುಂದುವರೆದು ಸಿನಿಮಾ ಒಂದು ಸ್ವಾಯತ್ತತೆಯುಳ್ಳ ಉದ್ಯಮ ಎಂದು ಕರೆದುಕೊಂಡು ರಂಗಭೂಮಿಯ ಸಹವಾಸದಿಂದ ಕಳಚಿಕೊಳ್ಳತೊಡಗಿತು.

ಚಾರಿತ್ರಿಕವಾಗಿ ರಂಗಭೂಮಿ ಮತ್ತು ಸಿನಿಮಾ ಪರಸ್ಪರ ಬೆಸೆದುಕೊಂಡಿವೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ರಂಗಭೂಮಿಯ ಈಸ್ತಟಿಕ್ ಪ್ರಜ್ಞೆ ಮತ್ತು ನಾಟಕೀಯತೆ ಸಿನಿಮಾ ಮೇಲೆ ಆಳವಾದ ಪ್ರಭಾವ ಬೀರಿದೆ. 19ನೇ ಶತಮಾನದ ರಂಗಭೂಮಿಯ ಮೆಲೋಡ್ರಾಮ ಮತ್ತು ವಿಡಂಬನೆಯ ಕಥನ ಮತ್ತು ಅಭಿನಯವು 20ನೇ ಶತಮಾನದ ಸಿನಿಮಾರಂಗದ ಮೇಲೆ ತನ್ನ ಅಚ್ಚಳಿಯದ ಛಾಪು ಮೂಡಿಸಿದೆ. ಹೀಗಾಗಿಯೇ 20ನೇ ಶತಮಾನದ 60ರ ದಶಕದವರೆಗೂ ರಂಗಭೂಮಿಯ ದಿಗ್ಗಜರು ಸಿನಿಮಾ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲದೆ ರಂಗಭೂಮಿಯಿಂದ ಸಿನಿಮಾ ಕಡೆಗೆ ಮತ್ತು ಸಿನಿಮಾದಿಂದ ರಂಗಭೂಮಿ ಕಡೆಗಿನ ಪಯಣವು 70ರ ದಶಕದವರೆಗೂ ಸಹಜ ಪ್ರಕ್ರಿಯೆಯಾಗಿತ್ತು. ಇದನ್ನು ಗುಬ್ಬಿ ವೀರಣ್ಣ, ಡಾ.ರಾಜ್ ಕುಮಾರ್, ಬಾಲಣ್ಣ, ಸುಬ್ಬಯ್ಯ ನಾಯ್ಡು, ಬಿ.ವಿ.ಕಾರಂತ ಮುಂತಾದವರಿಂದ ಮೊದಲುಗೊಂಡು ಎನ್‍ಎಸ್‍ಡಿಯ ಪದವೀದರರಾದ ಬಿ. ಜಯಶ್ರೀ, ನಾಸಿರುದ್ದೀನ್ ಶಾ, ಓಂಪುರಿ, ಫರೂಕ್ ಶೇಖ್ ಮತ್ತು ಕನ್ನಡದ ಲೋಕೇಶ್, ಗಿರಿಜಾ ಲೋಕೇಶ್, ಉಮಾಶ್ರೀವರೆಗೂ ಇದರ ತೂಗುಯ್ಯಾಲೆಯನ್ನು, ಓಡಾಟವನ್ನು ಕಾಣಬಹುದು.

ಆದರೆ ಸಿನಿಮಾರಂಗಗಳಲ್ಲಿ ಹೊಸ ಹೊಸ ಪ್ರಯೋಗಗಳು ಶುರುವಾದಂತೆ ಬೆಳ್ಳಿಪರದೆಯು ರಂಗಮಂಚದ ಕಲಾವಂತಿಕೆಯ ಒಂದು ಮೆಟಫರ್ ಎಂದು ವಿಶ್ಲೇಷಿಸಲಾಯಿತು. ಇದು ಮುಂದುವರೆದು ಸಿನಿಮಾ ಒಂದು ಸ್ವಾಯತ್ತತೆಯುಳ್ಳ ಉದ್ಯಮ ಎಂದು ಕರೆದುಕೊಂಡು ರಂಗಭೂಮಿಯ ಸಹವಾಸದಿಂದ ಕಳಚಿಕೊಳ್ಳತೊಡಗಿತು. ತಂತ್ರಜ್ಞಾನ ಆದರಿತ 21ನೆ ಶತಮಾನದ ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ರಂಗಭೂಮಿಯನ್ನು ಕ್ರಿಯಾಶೀಲ, ಸೃಜನಶೀಲ ಚಳುವಳಿ ಎಂಬುದನ್ನು ಅಪನಂಬಿಕೆಯಿಂದಲೇ ಕಾಣತೊಡಗಿರುವುದು ವಾಸ್ತವ. ಇವರಿಗೆ ನಾಟಕ ಎನ್ನುವುದು ನಾಟಕೀಯತೆಯ, ಮೆಲೋಡ್ರಾಮಾದ ಅಬಿವ್ಯಕ್ತಿಯಾಗಿ ಕಂಡಿತು ಮತ್ತು ಅದು ಕಳೆದು ಹೊದ, ಮುಗಿದ ಕಾಲಘಟ್ಟ ಎಂದೇ ನಂಬಿದರು. ವಿಶಾಲ್ ಭಾರದ್ವಜ್‍ರಂತಹ ನಿರ್ದೇಶಕನಿಗೆ ಶೇಕ್ಸ್‍ಪಿಯರ್‍ನ ನಾಟಕಗಳನ್ನು ಸಿನಿಮಾ ಮಾದ್ಯಮಕ್ಕೆ ಅಳವಡಿಸಿಕೊಳ್ಳುವುದೆಂದರೆ ಅದು ಅಲ್ಲಿನ ಸಾಹಿತ್ಯವನ್ನು ಬಸಿದುಕೊಳ್ಳುವುದಷ್ಟೆ ಆಗಿತ್ತು. ಮ್ಯಾಕ್‍ಬೆತ್, ಒಥೆಲೋ, ಹ್ಯಾಮ್ಲೆಟ್ ನಾಟಕಗಳ ರಂಗಭೂಮಿಯಲ್ಲಿನ ವಿಶಿಷ್ಟ ಪ್ರಯೋಗಗಳು, ಅದರ ವಿವಿದ ಸಾದ್ಯತೆಗಳು ಮತ್ತು ಆ ಮೂಲಕ ಕಂಡುಕೊಂಡ ಹೊಸ ನಿರೂಪಣೆಗಳು ವಿಶಾಲ್ ಭಾರದ್ವಜ್‍ಗೆ ಎಂದಿಗೂ ಮುಖ್ಯವೆನಿಸಲಿಲ್ಲ. ಇದು ಇತರ ನಿರ್ದೇಶಕರಿಗೂ ಅನ್ವಯಿಸುತ್ತದೆ. 1920, 30 ರಲ್ಲಿ Münsterberg ಮತ್ತು Nicoll   ರಂಗಭೂಮಿ ಮತ್ತು ಸಿನಿಮಾ ಎರಡೂ ಪ್ರತ್ಯೇಕವಾಗಿರುತ್ತವೆ ಇವೆರೆಡೂ ಸ್ವತಂತ್ರ ಹಾದಿಗಳ ಪಯಣ ಎಂದು ವಾದಿಸಿದರು.

ಭಾರತದ ಮೊದಲ ಸಿನಿಮಾ (ಮೂಕಿ) ‘ರಾಜಾ ಹರಿಶ್ಚಂದ್ರ’

ಜಗಮಗಿಸುವ,  ಬಣ್ಣದ ಲೋಕ ಎಂದು ಕರಯಲ್ಪಡುವ ಸಿನಿಮಾ ಎರಡರಿಂದ ಮೂರು ತಾಸುಗಳ ಅವಧಿಯಲ್ಲಿ ಪ್ರೇಕ್ಷಕನಲ್ಲಿ ಭ್ರಮೆಗಳನ್ನು ಅರಳಿಸುತ್ತ ಅದೇ ಸಂದರ್ಭದಲ್ಲಿ ವಾಸ್ತವ-ಅವಾಸ್ತವದ ನಡುವೆ ಚಿಮ್ಮುತ್ತಾ, ಮರಳುತ್ತಾ ರೋಮಾಂಚನವನ್ನೂ ಹುಟ್ಟಿಸುತ್ತಿರುತ್ತದೆ. ಪ್ರೇಕ್ಷಕನ ಮನಸ್ಸಿಗೆ ಲಗ್ಗೆ ಹಾಕುತ್ತಾ ತನ್ನೊಳಗೆ ಸೆಳೆದುಕೊಳ್ಳುತ್ತದೆ, ಕೆಡವಿಕೊಳ್ಳುತ್ತದೆ. ಲಂಕೇಶ್ ಒಂದು ಕಡೆ “ ಕೆಟ್ಟ ನಾಟಕಕಾರ ಒಂದು ನಗರವನ್ನೇ ಸುಟ್ಟು ದುರಂತವನ್ನು ತೋರಿದರೆ, ಶೇಕ್ಸಪಿಯರ್ ರಂಗದ ಮೇಲೆ ಒಂದು ಕರ್ಚೀಫ್ ಬೀಳಿಸಿ ಅದರಿಂದಾದ ತಪ್ಪು ಕಲ್ಪನೆಯಿಂದ ಭೀಕರ ದುರಂತ ಮಂಡಿಸುತ್ತಾನೆ… ಕಾಗದ ಹೂವು ಸುಗಂಧ ಬೀರುವುದಿಲ್ಲ ಎಂಬುದು ನಿಜವಾದರೂ ನಿಜವಾದ ಚಿತ್ರದ ಹೂವು ಘಮಘಮಿಸುತ್ತಿರುತ್ತದೆ” ಎಂದು ಬರೆಯುತ್ತಾರೆ.

19ನೇ ಶತಮಾನದ ಕಡೆಯ ವರ್ಷಗಳಲ್ಲಿ ಮತ್ತು 20ನೇ ಶತಮಾನದ ಆರಂಬದಲ್ಲಿ ಚಲಿಸುವ ಸಿನಿಮಾ ಎನ್ನುವ ಹೆಸರಿನಲ್ಲಿ ಹೊಸ ಕಲ್ಪನೆಗಳನ್ನು ತುಂಬಿಕೊಂಡು ಜನರ ಮುಂದೆ ನಡೆದಾಡುವ, ಆಳುವ, ನಗುವ ಕಲಾವಿದರ ನಟನೆ ಬಿಳಿ ಪರದೆಯ ಮೇಲೆ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳತೊಡಗಿದಾಗ ಆಗ 120 ವರ್ಷಗಳ ಹಿಂದೆ ಜನ ಹೇಗೆ ಪ್ರತಿಕ್ರಯಿಸಿದ್ದರು? ಇಂದಿಗೂ ಕುತೂಹಲವಾಗುತ್ತದೆ. ಯಾವುದೇ ಬಗೆಯ ಹೊಸ ಅವಿಷ್ಕಾರವು ತನ್ನ ಆರಂಬದ ದಶಕಗಳಲ್ಲಿ ಹೇಗೆ ಬಳಸಲ್ಪಡುತ್ತದೆ, ಪ್ರತಿಕ್ರಿಯಿಸಲ್ಪಡುತ್ತದೆ ಎನ್ನುವುದನ್ನು ಇಂದಿಗೂ ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಸಿನಿಮಾದ ವಿಷಯದಲ್ಲೂ ಇದು ನಿಜ. ಸಣ್ಣ ಸಣ್ಣ ತುಣುಕುಗಳನ್ನು ಜೋಡಿಸಿದಂತಿದ್ದ ಆರಂಬದ ಕಪ್ಪು ಬಿಳುಪು ಮೂಕಿ ಸಿನಿಮಾಗಳು ನಾಟಕದ ನಾಟಕೀಯತೆಯನ್ನು ಉಳಿಸಿಕೊಂಡೇ, ಮೆಲೋಡ್ರಾಮವನ್ನು ಧಾರಾಳವಾಗಿ ಬಳಸಿಕೊಂಡೇ ಜನಸಾಮಾನ್ಯರನ್ನು ಅದುವರೆಗೂ ರೂಢಿಯಾಗಿದ್ದ ನಾಟಕದ ವಾಸ್ತವದ ಪರಿಸರದಿಂದ ಹೊರಕ್ಕೆಳೆದು ಸಿನಿಮಾ ಎನ್ನುವ ಭ್ರಮಾಲೋಕಕ್ಕೆ ಕರೆದೊಯ್ದು ಅವರನ್ನು ರೋಮಾಂಚನಗೊಳಿಸಿದ್ದು, ಥ್ರಿಲ್‍ಗೊಳಿಸಿದ್ದು, ಬೆರಗುಗೊಳಿಸಿದ್ದನ್ನು ಕಂಡಾಗ ಇದು ಸಾಧ್ಯವಾಯಿತಾದರೂ ಹೇಗೆ ಎನ್ನುವಷ್ಟು ಪ್ರಶ್ನೆಗಳು ಈಗಲೂ ನಮಗೆ ಕಾಡುತ್ತಲೇ ಇವೆ.

ಭಾರತದ ಮೊದಲ ಟಾಕಿ ಸಿನಿಮಾ ‘ಆಲಂ ಅರಾ’

ಯಾವುದು ಆ ರಂಜನೆಯ, ಪ್ರಚೋದನೆಯ ಗುಣ ಜನರನ್ನು ಸಿನಿಮಾ ಎನ್ನುವ ಮಾಂತ್ರಿಕದೆಡೆಗೆ ಸೆಳೆದಿತ್ತು? ತಮ್ಮ ದಿನನಿತ್ಯದ ಬದುಕಿನ ಆತಂಕ, ಬಿಕ್ಕಟ್ಟು, ತಲ್ಲಣ, ಬೇಸರಗಳನ್ನು ಕಳಚಿಟ್ಟು ಮೂರು ತಾಸು ತದೇಕಚಿತ್ತದಿಂದ ಪರದೆಯೆಡೆಗೆ ಮುಖ ಮಾಡಿ ಅಲ್ಲಿನ ಪಾತ್ರಗಳು ಮೌನವಾಗಿ ನಕ್ಕರೆ ತಾವೂ ನಕ್ಕು, ಅಲ್ಲಿನ ಪಾತ್ರಗಳು ಅತ್ತರೆ ತಾವೂ ಮೌನವಾಗಿ ದುಖಿಸಿದ ಈ ಪ್ರೇಕ್ಷಕ ವರ್ಗವು ನಿಜ-ಭ್ರಮೆಗಳ ನಡುವೆ ಜಿಗಿದಾಡುತ್ತಾ ಖುಷಿ ಪಟ್ಟಿದ್ದು ಮಾತ್ರ ಅಂದಿಗೂ ನಿಜ ಇಂದಿಗೂ ನಿಜ. ನಾಟಕದ ಸಂದರ್ಭದಲ್ಲಿ ತನ್ನ ಮೆಚ್ಚಿನ ಕಲಾವಿದರನ್ನು ಆ ಕ್ಷಣದಲ್ಲಿ ಭೇಟಿ ಮಾಡಿ ಮುಟ್ಟಿ, ಮೈದಡವುತ್ತಿದ್ದ ಪ್ರೇಕ್ಷಕ ಈ ಸಿನಿಮಾ ಸೆಲ್ಯುಲಾಯ್ಡ್‍ನಲ್ಲಿ ಮಿಂಚಿ ಮರೆಯಾಗುವ, ನಕ್ಷತ್ರದಂತೆ ಕಣ್ಣಿಗೆ ಕಂಡೂ ಕೈಗೆ ಸಿಗದಂತೆ ಕಾಡುತ್ತಿದ್ದ ನಟ/ನಟಿಯರನ್ನು ಹೇಗೆ ಸ್ವೀಕರಿಸುತ್ತಿದ್ದ? ಕಪ್ಪು-ಬಿಳುಪು ಕಾಲದ ಮೂಕಿಯುಗದ ನಾಯಕ, ನಾಯಕಿಯರನ್ನು ಆಗಲೂ ಜನರು ಆರಾಧಿಸುತ್ತಿದ್ದರೇ? ಪ್ರೀತಿಸುತ್ತಿದ್ದರೇ?

1913ರಲ್ಲಿ ತೆರೆಕಂಡ ಮೊದಲ ಭಾರತೀಯ ಮೂಕಿ ಸಿನಿಮಾ ‘ರಾಜಾ ಹರಿಶ್ಚಂದ್ರ’ದಿಂದ ಮೊದಲುಗೊಂಡು ಆಗಿನ ಕಪ್ಪು-ಬಿಳುಪು ಮೂಕಿ ಸಿನಿಮಾಗಳಲ್ಲಿ ಪರದೆಯ ಮೇಲೆ ಪಾತ್ರಗಳು ಜೀವ ಪಡೆದುಕೊಂಡು ಮುಗ್ಧತೆಯಿಂದ, ಸರಳತೆಯಿಂದ, ಭಾವುಕತೆಯಿಂದ ಮಾತುಗಳ ಬೆಂಬಲವಿಲ್ಲದೆ ಕೇವಲ ತಮ್ಮ ಅಂಗಿಕ ಅಭಿನಯದ ಮೂಲಕ ಜನರ ಮನಸ್ಸಿನಲ್ಲಿ ಪುಲಕದ ಅಲೆಗಳನ್ನೇ ಸೃಷ್ಟಿಸುತ್ತಾ, ರಂಜಿಸುತ್ತಾ ಸುಮಾರು 1930ರ ದಶಕದವರೆಗೂ ಪೊರೆದಿದ್ದು 100 ವರ್ಷಗಳ ನಂತರವೂ ನಮ್ಮಲ್ಲಿ ಆಚ್ಚರಿಯನ್ನು ಹುಟ್ಟಿಸುತ್ತದೆ. ಅದೇ ಕಾಲದಲ್ಲಿ ಜನಪ್ರಿಯವಾಗಿದ್ದ ನಾಟಕದ ನಾಟಕೀಯ ಸಂಭಾಷಣೆಗಳ, ಹತ್ತಾರು ಹಾಡು, ಕುಣಿತಗಳ ಜೊತೆ ಜೊತೆಗೆ ಬೆಳೆದಂತಹ ಈ ಮೂಕಿ ಸಿನಿಮಾವನ್ನು ಹಲವು ತಿರುವುಗಳ ಪ್ರವಾಹವೆಂದೇ ಕರೆಯಬಹುದು.  ಅದೂ ಮೊದಲನೇ ಮಹಾಯುದ್ಧವನ್ನು ದಾಟಿಕೊಂಡು, ಆ ಜಾಗತಿಕ ಯುದ್ಧದ ಸಾವುನೋವುಗಳು ಉಂಟು ಮಾಡಿದ ಗಾಯಗಳನ್ನು, ಅದರ ಕಲೆಗಳನ್ನು ಆಗಿನ ಮೂಕಿ ಯುಗದ ಕಪ್ಪುಬಿಳುಪು ಸಿನಿಮಾಗಳಲ್ಲಿ ನಾವು ಕಾಣುತ್ತೇವೆ. ಅಂದರೆ ತನ್ನನ್ನು ಸ್ವತಃ ಪ್ರಸ್ತುತಗೊಳಿಸಿಕೊಂಡಿದ್ದ ಆ ಕಾಲದ ಕಪ್ಪುಬಿಳಿಪು ಸಿನಿಮಾ ಪ್ರೇಕ್ಷಕನಲ್ಲಿ ಅಪಾರ ಆಸೆಗಳನ್ನು, ತುಮುಲಗಳನ್ನು ಹುಟ್ಟಿಹಾಕಿದ್ದು ಮಾತ್ರ ಸತ್ಯ.

ವರ್ಣಲೇಪಿತ ‘ಕಸ್ತೂರಿ ನಿವಾಸ’

ನಂತರ 1931ರಲ್ಲಿ ತೆರೆಕಂಡ ‘ಅಲಂ ಆರಾ’ ಮೊದಲ ಟಾಕಿ ಸಿನಿಮಾ. ಆ ಮೂಲಕ  ಆರಂಬವಾದ  ಟಾಕಿ ಯುಗದ ಕಾಲದಲ್ಲಿಯೂ ಸಿನಿಮಾ ನಿರ್ಮಾಣದಲ್ಲಿ ಯಾವುದೇ ಗುರುತರ ಬದಲಾವಣೆ ಇಲ್ಲದೆ ಅದು ಕುಣಿತ ಮತ್ತು ಹಾಡುಗಳ ಮುಂದುವರೆದ ಭಾಗದಂತಿತ್ತು. ಆದರೆ ಕ್ರಮೇಣ ಮೂಕಿ ಯುಗದ ಪೌರಾಣಿಕ ಕಥಾವಸ್ತುವಿನಿಂದ ಕಳಚಿಕೊಂಡು ಜನಪದ, ಸಾಮಾಜಿಕ ವಿಷಯಗಳತ್ತ ಹೊರಳಿಕೊಂಡಿದ್ದು ಟಾಕಿ ಸಿನಿಮಾದ ಹೆಗ್ಗಳಿಕೆ. ಆದರೆ ಅಚಾನಕ್ ಆಗಿ ನಟ/ನಟಿಯರು ಮಾತನಾಡತೊಡಗಿದಾಗ  ಮತ್ತೊಂದು ಬಗೆಯ ಷಾಕ್‍ಗೆ ಒಳಗಾಗಿದ್ದ ಪ್ರೇಕ್ಷಕ ತನ್ನ ಕನಸುಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳತೊಡಗಿದ. ನಟ/ನಟಿಯರು ಸಂಭಾಷಣೆ ಒಪ್ಪಿಸತೊಡಗಿದಾಗ, ಹಾಡತೊಡಗಿದಾಗ ಪ್ರೇಕ್ಷಕನ ಮನಸ್ಸಿನಲ್ಲಿ ಹೊಚ್ಚ ಹೊಸದಾದ, ವಿಭಿನ್ನವಾದ ಬಯಕೆಯ, ಕಾತುರದ ಗರಿಗಳು ಎಳೆ ಎಳೆಯಾಗಿ ಹರಡಿಕೊಳ್ಳತೊಡಗಿದವು. ನಿಜ-ಭ್ರಮೆಗಳ ಹೊಸ ಜಗತ್ತನ್ನು ಪರಿಚಯಿಸಿದ ಮೂಕಿ ಸಿನಿಮಾ ನಂತರ ಮಾತು ಎನ್ನುವ ಹೊಸ ಅವಿಷ್ಕಾರ, ಬದಲಾಗುತ್ತಿದ್ದ ಪ್ರೇಕ್ಷಕನ ಆಶಯಗಳ, ಆಕಾಂಕ್ಷೆಗಳ ಎದಿರು ಹಠಾತ್ತನೆ ನಿರ್ಜೀವಗೊಂಡಿತೇ? ಬಲು ಬೇಗನೆ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅನುವಾಗುವಂತೆ ತನ್ನನ್ನು ರೂಪಿಕೊಳ್ಳತೊಡಗಿದ ಪ್ರೇಕ್ಷಕ ಈ ಟಾಕಿ ಯುಗದ ಕಪ್ಪುಬಿಳುಪು ಸಿನಿಮಾಗಳನ್ನು ಅದೇ ಸಂವೇದನೆಯೊಂದಿಗೆ ಆನಂದಿಸತೊಡಗಿದ.

ಸಿನಿಮಾ ಸಹ ಮಾತನಾಡುತ್ತದೆ ಎನ್ನುವ ಹೊಸ ಅವಿಷ್ಕಾರವನ್ನು ಬಲು ಬೇಗನೆ ತನ್ನ ಜಗತ್ತಿನೊಳಗೆ ಅಳವಡಿಸಿಕೊಳ್ಳತೊಡಗಿದ. ಮೂಕಿ ಸಿನಿಮಾ ಪರದೆಯ ಮೇಲೆ ಚಲಿಸುತ್ತಿದ್ದಾಗ, ನಟ/ನಟಿಯರು ಮೂಕವಾಗಿ ಅಭಿನಯಿಸುತ್ತಿದ್ದಾಗ ನೋಡುತ್ತಿದ್ದ ಪ್ರೇಕ್ಷಕರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ವೀಕ್ಷಿಸುತ್ತಲೇ ಸಿನಿಮಾವನ್ನು ವಿಮರ್ಶಿಸುತ್ತಿದ್ದರು. ಆದರೆ ನಟ/ನಟಿಯರು ಮಾತನಾಡತೊಡಗಿದಾಗ ಪ್ರೇಕ್ಷಕ ಮೌನವಾಗತೊಡಗಿದ. ಕುತೂಹಲದಿಂದ ಆಲಿಸತೊಡಗಿದ. ಕೇಳುವ ಆನಂದ ಮತ್ತು ಮೌನದ ಮಹತ್ವವನ್ನು ಅರಿತುಕೊಂಡ. ಮೂಕಿ ಸಿನಿಮಾದ ಪಾರುಪತ್ಯವನ್ನು ಮುರಿದು ಟಾಕಿ ಯುಗದ ಆರಂಬದ ವರ್ಷಗಳಲ್ಲಿಯೇ ಮಾತಿನ, ಧ್ವನಿಯ ಈ ಮಾಂತ್ರಿಕ ಶಕ್ತಿಯನ್ನು ಪ್ರೇಕ್ಷಕ ಬಲು ಬೇಗ ಗ್ರಹಿಸಿದ್ದು ಮತ್ತು ಮನಪೂರ್ವಕವಾಗಿ ಅನುಭವಿಸಿದ್ದು ಮುಂದೆ ಜಾಗತಿಕ ಸಿನಿಮಾ ರಂಗವು ಅನೇಕ ಪ್ರಯೋಗಗಳಿಗೆ, ಹೊಸ ಹುಟ್ಟುಗಳಿಗೆ  ತನ್ನನ್ನು ಒಡ್ಡಿಕೊಳ್ಳಲು ಸಾಧ್ಯವಾಯಿತು.

ಹಿಚ್‌ಕಾಕ್‌ ನಿರ್ದೇಶನದ ‘ಸೈಕೋ’ ಸಿನಿಮಾ

 ಈ ಹೊಸ ಹುಟ್ಟುಗಳ ಈ ಪಯಣ ಮುಂದುವರೆಯುತ್ತ  ಕಪ್ಪು ಬಿಳುಪು ಸಿನಿಮಾದ ಕಾಲದಿಂದ ಕ್ರಮೇಣ ಕಲರ್ ಸಿನಿಮಾಗಳಿಗೆ ಹೊರಳಿಕೊಂಡಿದ್ದು ಮಾತ್ರ ಕುತೂಹಲಕರ. ಕಲರ್ ಸಿನಿಮಾಗಳ ಟ್ರೆಂಡ್ ಪ್ರಾರಂಬವಾಗುವುದಕ್ಕಿಂತ ಮೊದಲು 20ನೇ ಶತಮಾನದ ಆರಂಬದಲ್ಲಿ ಕಪ್ಪು-ಬಿಳುಪು ಸಿನಿಮಾಗಳ ಕೆಲವು ಪ್ರೇಮ್‍ಗಳಿಗೆ ಕೈಯಿಂದ ಬಣ್ಣವನ್ನು ಅದ್ದಿ ಅದರ ಛಾಯೆ ಮೂಡಿಸುತ್ತಿದ್ದರು. 1914ರಲ್ಲಿ ತೆರೆಕಂಡ ‘ದ ವಲ್ಡ್, ದ ಫ್ಲೆಶ್ ಅಂಡ್ ದ ಡೆವಿಲ್’ ಮೊದಲ ಕಲರ್ ಸಿನಿಮಾ ಎಂದು ಹೇಳಲಾಗುತ್ತದೆ. ಆದರೆ ಆರಂಭದಲ್ಲಿ ನಿರ್ಮಾಪಕರು ಕಳಪೆ ಗುಣಮಟ್ಟ, ಬಳಕೆಯ ಅನನುಭವ ಮತ್ತು ತುಟ್ಟಿಯಾದ ನಿರ್ವಹಣ ವೆಚ್ಚ ಈ ಕಾರಣಗಳಿಗಾಗಿ ಕಲರ್ ಸಿನಿಮಾ ನಿರ್ಮಿಸಲು ಹಿಂದೇಟು ಹಾಕುತ್ತಿದ್ದರು. ಮತ್ತು ಚಿತ್ರೀಕರಣಕ್ಕೆ ಧಾರಾಳವಾಗಿ ಬೇಕಾದ ಬೆಳಕಿನ ಕೊರತೆಯೂ ಒಂದು ಕಾರಣ.

ಆಗ ಕಲರ್‍ನ ತಾಂತ್ರಿಕತೆ ಸಿನಿಮಾ ಮಾಧ್ಯಮವನ್ನೇ ಹಾಳು ಮಾಡಿಬಿಡುತ್ತದೆ ಎಂದು ನಂಬಿದ್ದರು. ಈ 1926ರಲ್ಲಿ ನಿರ್ದೇಶಕ ಅಲ್ಬರ್ಟ್‌ ಪಾರ್ಕರ್ “ಕಪ್ಪು ಬಿಳುಪು ಸಿನಿಮಾಗೆ ಬಣ್ಣವನ್ನು ತುಂಬುವುದು ಎಂದರೆ ‘ವೀನಸ್ ಡಿ ಮೆಲೋ’ (ಪ್ರಾಚೀನ ಗ್ರೀಕ್ ವಿಗ್ರಹ) ಗೆ ಕೆನೆಬಣ್ಣ ಬಳಿದಂತೆ” ಎಂದು ಕಲರ್ ಸಿನಿಮಾವನ್ನು ಹಂಗಿಸಿದ್ದ. ಮುಂದುವರೆದು ‘ಬಣ್ಣವು ನಿರೂಪಣೆಯ ಮೇಲೆ ಅಧಿಪತ್ಯ ಸಾಧಿಸಬಾರದು, ಬಣ್ಣ ಒಂದು ಹಿಂಸೆ. ಅದನ್ನು ಪ್ರತಿಬಂದಿಸಿದ್ದೇವೆ’ ಎಂದು ಹೇಳಿದ. ಆದರೆ ಕೆಲವೇ ವರ್ಷಗಳಲ್ಲಿ ಪಾರ್ಕರ್‍ನ ಮಾತುಗಳು ಬಣ್ಣಗಳ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಮಾತ್ರ ನಿಜ. ಏಕೆಂದರೆ ಬಣ್ಣದ ಸಿನಿಮಾಗಳು ಕ್ರಮೇಣ ತಳವೂರುತ್ತಿದ್ದಂತೆ ಕಪ್ಪು-ಬಿಳುಪು ಸಿನಿಮಾಗಳು ಒಂದು ಸ್ಥಗಿತತೆಯನ್ನು, ನಿಷ್ಕ್ರಿಯತೆಯನ್ನು ಪ್ರದರ್ಶಿಸುತ್ತವೆ ಆದರೆ ಕಲರ್ ಸಿನಿಮಾಗಳು ಜೀವಂತಿಕೆಯನ್ನು, ಚಲನಶೀಲತೆಯನ್ನು ತಂದುಕೊಟ್ಟವು ಎನ್ನುವ ಭಾವನೆ ಸಾರ್ವತ್ರಿಕವಾಗಿ ಮೂಡತೊಡಗಿತು. ಇದನ್ನು ಒಪ್ಪುವ, ಬಿಡುವ ಪ್ರಶ್ನೆ ಬೇರೆ. ಏಕೆಂದರೆ ಕಲರ್ ಸಿನಿಮಾಗಳ ಪ್ರದರ್ಶನದ ಸಂದರ್ಭದಲ್ಲಿ ಅನೇಕ ಭಾವತೀವ್ರತೆಯ, ಸಾಹಸದ ದೃಶ್ಯಗಳ ಸಂದರ್ಭದಲ್ಲಿ ಪ್ರೇಕ್ಷಕ ಶೀಟಿ ಊದುವುದು, ಹಣವನ್ನು ತೂರುವ ಟ್ರೆಂಡ್ ಸೃಷ್ಟಿಯಾಗಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಕಲರ್ ಸಿನಿಮಾಗಳ ಮೂಲಕ ಪ್ರೇಕ್ಷಕನ್ನು ಸಿನಿಮಾದ ಕತೆಯೊಂದಿಗೆ, ಭ್ರಾಮಕ ಲೋಕದೊಂದಿಗೆ ಬೆಸೆಯಲು ಸಾಧ್ಯವಾಯಿತು ಎನ್ನುವ ಸತ್ಯವನ್ನು ಸಹ ಅಲ್ಲಗೆಳೆಯಲು ಸಾಧ್ಯವಿಲ್ಲ.

ಮೊದಲ ಟೆಕ್ನಿಕಲರ್ ಹಿಂದಿ ಸಿನಿಮಾ ‘ಆನ್‌’

ಆದರೆ ಹಳೆಯ ಕಪ್ಪು-ಬಿಳುಪು ಸಿನಿಮಾಗಳ ಶಕ್ತಿಯನ್ನು, ಅದು ತಂದುಕೊಟ್ಟ ಅಪ್ತತೆಯನ್ನು ಗೌಣಗೊಳಿಸಿ ಕಲರ್ ಸಿನಿಮಾಗಳನ್ನು ಪ್ರಶಂಸಿಸುವುದೂ ತಪ್ಪಾಗುತ್ತದೆ. ಇದೇ ಕಾರಣಕ್ಕೆ ಅನೇಕ ಹಳೆಯ ಹಿಂದಿ, ಕನ್ನಡ ಕಪ್ಪು-ಬಿಳುಪು ಸಿನಿಮಾಗಳನ್ನು (ನಯಾ ದೌರ್, ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ ಇತ್ಯಾದಿ) ಇಂದು ಆಧುನಿಕಗೊಳಿಸುವ ಭರದಲ್ಲಿ ಕಲರ್ ಸಿನಿಮಾಗಳಾಗಿ ಪರಿವರ್ತಿಸಿ ಹೊಸದಾಗಿ ಬಿಡುಗಡೆ ಮಾಡಿದಾಗ ಅದು ಆಗಿನ ಕಪ್ಪು-ಬಿಳುಪು ಸಿನಿಮ ತಂದುಕೊಟ್ಟ ತೀವ್ರತೆ, ತನ್ಮಯತೆ ಮತ್ತು ನಮ್ಮದು ಎನ್ನುವ ಭಾವ ಕಲರ್ ಸಿನಿಮಾ ತಾಂತ್ರಿಕತೆಯ ಪರಿವರ್ತನೆಯಲ್ಲಿ ಕಳೆದು ಹೋಗಿತ್ತು. ಗ್ರೇಟಾ ಗಾರ್ಬೊ, ಹೆನ್ರಿ ಫಂಡ, ಅಂಡ್ರೆ ಹರ್ಬನ್, ಹಂಫ್ರಿ ಬೋಗಾರ್ಟ, ಇಂಗ್ರಿಡ್ ಬರ್ಗಮನ್, ದೇವಿಕಾ ರಾಣಿ, ಶಾಂತಾ ಹುಬ್ಳೀಕರ್, ಶಾಂತಾ ಅಪ್ಟೆ ರಂತಹ ಕಪ್ಪು-ಬಿಳುಪು ಸಿನಿಮಾದ ನಟ/ನಟಿಯರನ್ನು ಯಾವುದೇ ಬಣ್ಣಗಳ ಲೋಕವೂ ಕಳೆಗುಂದಿಸಲಾಗದು. ಹಾಲಿವುಡ್‍ನಲ್ಲಿ ಕಲರ್ ಸಿನಿಮಾ ಶಾಶ್ವತವಾಗಿ ನೆಲೆಯೂರಿದಂತಹ 1960ರ ದಶಕದಲ್ಲಿ ಹಿಚ್‍ಕಾಕ್‍ನ ಕಪ್ಪು-ಬಿಳುಪು “ಸೈಕೋ” ಸಿನಿಮಾದ ಥ್ರಿಲ್‍ಗೆ, ಅದು ಮಾಡಿದ  ಮೋಡಿಗೆ ಯಾವುದೇ ಬಣ್ಣದ ಸಿನಿಮಾ ಸಾಟಿಯಾಗಲಾರದು

ಆರಂಬದ 60ರ ದಶಕದಲ್ಲಿ ಈ ಕಲರ್ ಸಿನಿಮಾಗಳಲ್ಲಿ ವಿವಿದ ಬಣ್ಣಗಳ ಸಂಯೋಜನೆಯೂ ಸಹ ಉದ್ದೇಶಪೂರ್ವಕವಾಗಿರುತ್ತಿತ್ತು. ತೀವ್ರವಾದ ಮೆಲೋಡ್ರಾಮ ಅಥವಾ ಕ್ರೋಧವನ್ನು ಪ್ರದರ್ಶಿಸಲು ಕೆಂಪು ಬಣ್ಣವನ್ನು ಢಾಳಾಗಿ ಬಳಸುತ್ತಿದ್ದರೆ, ಬೂದು, ನೀಲಿ, ನೇರಳೆ ಬಣ್ಣದ ಸಂಯೋಜನೆಯನ್ನು ದುರಂತ ದೃಶ್ಯಗಳಿಗೆ ಬಳಸುತ್ತಿದ್ದರು. ಕಾಮಿಡಿ ದೃಶ್ಯಗಳಿಗೆ ಹಳದಿ, ಕಿತ್ತಳೆ, ಕೆಂಪು ಬಣ್ಣಗಳ ಸಂಯೋಜನೆಯನ್ನು ಬಳಸುತ್ತಿದ್ದರು.

1937ರಲ್ಲಿ ತೆರೆಕಂಡ ‘ಕಿಸಾನ್ ಕನ್ಯ’(ರೈತ ಹುಡುಗಿ) ಇಂಡಿಯಾದ ಮೊದಲ ಕಲರ್ ಸಿನಿಮಾ. ಅರ್ದೇಶಿರ್‌ ಇರಾನಿ ನಿರ್ಮಿಸಿದ ಕಿಸಾನ್ ಕನ್ಯ ಸಿನಿಮಾವನ್ನು ಮೋತಿ ಗಿದ್ವಾನಿ ನಿರ್ದೇಶಿಸಿದ್ದರು ಮತ್ತು ಸಾದತ್ ಹಸನ್ ಮಂಟೋ ಕತೆ, ಸಂಭಾಷಣೆ ರಚಿಸಿದ್ದರು. ಆದರೆ ಗ್ರಾಮೀಣ ಬಡತನದ ಕುರಿತು, ರೈತರ ಬವಣೆಯ ಕುರಿತು ಹೇಳುವ, ಸಾಮಾಜಿಕ ಸಮಸ್ಯೆಯನ್ನು ಒಳಗೊಂಡ ಸಿನಿಮಾವನ್ನು ಕಲರ್‍ಫುಲ್ ಆಗಿ ನೋಡಲು ಪ್ರೇಕ್ಷಕ ಬಯಸಲಿಲ್ಲ. ತನ್ನ ದಿನನಿತ್ಯದ ಜೀವನದ ಎಲ್ಲಾ ಬಿಕ್ಕಟ್ಟು, ದುಖ ದುಮ್ಮಾನಗಳನ್ನು ಕಪ್ಪುಬಿಳುಪಿನಲ್ಲಿ ನೋಡಲು ಯಾವದೇ ತಕರಾರು ತನಗಿಲ್ಲ ಆದರೆ ಕಲರ್‍ಫುಲ್ ಸಿನಿಮಾ ಎಂದರೆ ಅದು ಕೇವಲ ರಂಜನೆ, ಮನೋರಂಜನೆಯಾಗಿರಬೇಕು ಹೊರತಾಗಿ ಗೋಳಿನ ಚಿತ್ರಕತೆ ನಾನೊಲ್ಲೆ ಎಂದು ಪ್ರೇಕ್ಷಕ ಬಯಸಿದಂತಿತ್ತು. ಆ ಕಾರಣಕ್ಕೆ ಮೊದಲ ಕಲರ್ ಸಿನಿಮಾ ‘ಕಿಸಾನ್ ಕನ್ಯ’ ಗೆಲ್ಲಲಿಲ್ಲ, ಯಾವುದೇ ಪುಲಕ ಹುಟ್ಟಿಸಲಿಲ್ಲ. ಕಲರ್ ಸಿನಿಮಾ ಆರಂಬದಲ್ಲಿ ಸಾರ್ವಜನಿಕವಾಗಿ ಯಾವುದೇ ಹವಾ ಮೂಡಿಸದ ಕಾರಣಕ್ಕಾಗಿ ನಂತರ ಸುಮಾರು 15 ವರ್ಷಗಳ ಕಾಲ ಕಪ್ಪುಬಿಳುಪು ಸಿನಿಮಾಗಳೇ ತಯಾರಾದವು. ಆದರೆ ಮೆಹಬೂಬ್ ಖಾನ್ ನಿರ್ದೇಶನದ, ದಿಲೀಪ್ ಕುಮಾರ್-ನಿಮ್ಮಿ ಅಭಿನಯದ 1952ರಲ್ಲಿ ಬಿಡುಗಡೆಗೊಂಡ “ಆನ್” ಸಿನಿಮಾ ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾದ ಮೊದಲ ಟೆಕ್ನಿಕಲರ್ ಸಿನಿಮಾ. (ಒಂದು ವೇಳೆ ಇದು ವಿಫಲಗೊಂಡರೆ ಇರಲಿ ಎಂದು ಪ್ರತ್ಯೇಕವಾಗಿ ಕಪ್ಪು ಬಿಳಿಪುನಲ್ಲಿಯೂ ಚಿತ್ರೀಕರಿಸಿದ್ದರು) ಪ್ರೇಕ್ಷಕ ಬಯಸಿದಂತೆ ಇದರಲ್ಲಿ ಭರಪೂರು ರಂಜನೀಯ ಗುಣಗಳಿದ್ದವು.

ಕನ್ನಡದ ಮೊದಲ ಕಲರ್‌ ಸಿನಿಮಾ ‘ಅಮರಶಿಲ್ಪಿ ಜಕಣಾಚಾರಿ’

ವಿಲನ್‍ಗಳೊಂದಿಗೆ ಹೊಡೆದಾಡುವ ಹೀರೋ, ಧಿಮಾಕಿನ, ಸೊಕ್ಕಿನ ನಾಯಕಿಗೆ ಪಾಠ ಕಲಿಸುವ ಹೀರೂ ಎಲ್ಲವೂ ಕಲರ್‍ಫುಲ್ ಆಗಿ ಪರದೆಯ ಮೇಲೆ ಚಕಚಕನೆ ಓಡತೊಡಗಿದಾಗ ಪ್ರೇಕ್ಷಕ ಖುಷಿ ಪಟ್ಟಿದ್ದ. ಸಂತಸದಿಂದ ಮೊದಲ ಬಾರಿಗೆ ಶೀಟಿ ಊದಿದ್ದ. ಈ ಮೂಲಕ ನಂತರದ ವರ್ಷಗಳಲ್ಲಿ ಮನೋರಂಜನೆ ಅಂದರೆ ಅದು ಕಲರ್‍ಫುಲ್ ಆಗಿರಬೇಕು ಎನ್ನುವ ಹೊಸ ವ್ಯಾಕರಣ ಸೃಷ್ಟಿಯಾಯಿತು. ಅದು ಸಿನಿಮಾ ಅನ್ನು ಬಣ್ಣದ ಲೋಕ ಎಂದು ಕರೆಯುವ ವಾಡಿಕೆಗೆ ನಾಂದಿ ಹಾಡಿತು. ಎಲ್ಲರ ಕುತೂಹಲದ ಕೇಂದ್ರವಾಗಿದ್ದ ‘ಆನ್’ಸಿನಿಮಾದ  ಸಿನಿಮಟೋಗ್ರಾಫರ ಫರ್ದೂನ್ ಇರಾನಿ ಇದಕ್ಕಾಗಿಯೇ ಆರು ತಿಂಗಳುಗಳ ಕಾಲ ಹಾಲಿವುಡ್‍ನಲ್ಲಿ ತರಬೇತಿ ಪಡೆದುಕೊಂಡಿದ್ದ. ‘ಆನ್’ ಸಿನಿಮಾದ ಯಶಸ್ಸು ಸಹ ಆ ಕ್ಷಣಕ್ಕೆ ಕಲರ್ ಸಿನಿಮಾದ ಟ್ರೆಂಡ್ ಅನ್ನು ಹುಟ್ಟು ಹಾಕಲಿಲ್ಲ. ಬಹುಶಃ ನಿರ್ಮಾಣ ವೆಚ್ಚದ ಕಾರಣಕ್ಕಾಗಿ ಇರಬಹುದೇನೊ. ಆದರೂ ನಂತರದ ವರ್ಷಗಳಲ್ಲಿ 1955ರಲ್ಲಿ ವಿ.ಶಾಂತರಾಂ ನಿರ್ದೇಶನದ ‘ಝನಕ್ ಝನಕ್ ಪಾಯಲ್ ಬಾಜೆ’, 1957ರಲ್ಲಿ ಮೆಹಬೂಬ್ ಖಾನ್ ನಿರ್ದೇಶನದ ‘ಮದರ್ ಇಂಡಿಯಾ’, 1959ರಲ್ಲಿ ವಿ.ಶಾಂತಾರಾಂ ನಿರ್ದೇಶನದ ‘ನವರಂಗ್, ರಾಜ್‌ ಕಪೂರ್ ಅವರ ‘ಸಂಗಮ್’, ದಿಲೀಪ್ ಕುಮಾರ್ ಅವರ ‘ಗಂಗಾ ಜಮುನ’ ಆ ಕಾಲದ ಕೆಲವು ಪ್ರಮುಖ ಟೆಕ್ನಿಕಲರ್ ಮತ್ತು ಗೇವಾ ಕಲರ್ ಸಿನಿಮಾಗಳು.

ನಂತರ ‘ಹಮ್ ಹಿಂದುಸ್ತಾನಿ’ ಸಿನಿಮಾದ ಮೂಲಕ ಈಸ್ಟಮನ್ ಕಲರ್‍ನ ಯುಗ ಪ್ರಾರಂಬವಾಯಿತು. ಕನ್ನಡದಲ್ಲಿ 1964ರಲ್ಲಿ ಬಿಡುಗಡೆಯಾದ ಬಿ.ಎಸ್.ರಂಗಾ ಅವರ ‘ಅಮರ ಶಿಲ್ಪಿ ಜಕಣಾಚಾರಿ’ ಮೊಟ್ಟ ಮೊದಲ ಈಸ್ಟಮನ್ ಕಲರ್ ಸಿನಿಮಾ. ನಂತರದ ವರ್ಷಗಳಲ್ಲಿ ನಿರ್ಮಾಣ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣಕ್ಕೆ ಮತ್ತು ತಾಂತ್ರಿಕ ಪರಿಣಿತಿಯ ಕೊರತೆಯ ಕಾರಣಕ್ಕೆ ಕನ್ನಡದಲ್ಲಿ ಕಪ್ಪು ಬಿಳುಪು ಸಿನಿಮಾಗಳೇ ನಿರ್ಮಾಣಗೊಂಡವು. ಆದರೆ 70ರ ದಶಕದಲ್ಲಿ ಬಿಡುಗಡೆಗೊಂಡ ರಾಜಕುಮಾರ್ ಅವರ ‘ಬಂಗಾರದ ಮನುಷ್ಯ, ಎರಡು ಕನಸು, ಶ್ರೀ ಕೃಷ್ಣದೇವರಾಯ’ ಸಿನಿಮಾಗಳು ಕನ್ನಡದಲ್ಲಿ ಈಸ್ಟಮನ್ ಕಲರ್ ಟ್ರೆಂಡ್ ಅನ್ನು ಹುಟ್ಟು ಹಾಕಿದವು. ಇಂದು ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದಲ್ಲಿ ನಿಂತು ಹಿಂತಿರುಗಿ ನೋಡಿದಾಗ ಈ ಬಣ್ಣದ ಲೋಕ ಕ್ರಮಿಸಿದ ಹಾದಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಇಂದಿನ ಮಾಲ್‍ಗಳ ಭರಾಟೆಯ ಅಬ್ಬರದಲ್ಲಿ ಪ್ರೇಕ್ಷಕ ಸಿನಿಮಾ ನೋಡುವ ಮಗುವಿನ ಮುಗ್ಧತೆ, ಚಕಿತಗೊಳ್ಳುವ ಗುಣವನ್ನು ಕಳೆದುಕೊಂಡಿದ್ದಾನೆ ಹೌದಾ ಎಂದು ಕೇಳಿದರೆ ಹೌದು ಎನ್ನುತ್ತೇನೆ. ಆದರೆ ಸಿನಿಮಾ ತನ್ನ ಜೀವಂತಿಕೆ ಕಳೆದುಕೊಂಡಿಲ್ಲ. ಅದು ತಾಂತ್ರಿಕವಾಗಿ, ತಾತ್ವಿಕವಾಗಿ ಹೊಸ ಹೊಸ ಅವಿಷ್ಕಾರಗಳನ್ನು ಹುಡುಕಾಡುತ್ತಲೇ ಇದೆ. ಸದಾ ಚಲನಶೀಲವಾಗಿ ಹರಿಯುತ್ತಲೇ ಇದೆ. ಆದರೆ ಮನುಷ್ಯ  ಲವಲವಿಕೆ, ತಮಾಷೆ, ಪ್ರೀತಿ, ವ್ಯಂಗ ಎಲ್ಲವನ್ನೂ ಕಳೆದುಕೊಂಡು ಅಲೆಯುತ್ತಿದ್ದಾನೆ. ದೈಹಿಕವಾಗಿ ಓಡುತ್ತಿದ್ದಾನೆ. ಮಾನಸಿಕವಾಗಿ ತಟಸ್ಥಗೊಂಡಿದ್ದಾನೆ.

ಈ ಬರಹಗಳನ್ನೂ ಓದಿ