ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಯತಿರಾಜ್ ನಿರ್ದೇಶನದ ಏಳನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ

ಪೋಸ್ಟ್ ಶೇರ್ ಮಾಡಿ
ಯತಿರಾಜ್ ನಿರ್ದೇಶನದ ಏಳನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ

ಯತಿರಾಜ್‌ ನಿರ್ದೇಶನದ ನೂತನ ಸಿನಿಮಾಗೆ ಚಾಲನೆ ಸಿಕ್ಕಿದೆ. ಈ ಬಾರಿ ಅವರು ಹಾರರ್‌ ಕತೆಯನ್ನು ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ. ಸ್ಕ್ರಿಪ್ಟ್‌ ಪೂಜೆ ನೆರವೇರಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

ಪತ್ರಕರ್ತರಾಗಿ ಸಿನಿಮಾ ಪತ್ರಿಕೋದ್ಯಮಕ್ಕೆ ಪರಿಚಯವಾದ ಯತಿರಾಜ್‌ ಮುಂದೆ ನಟ, ಚಿತ್ರನಿರ್ದೇಶಕರಾಗಿ ಗುರುತಿಸಿಕೊಂಡರು. ಇತ್ತೀಚಿಗೆ ದಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ತಮ್ಮ ನಿರ್ದೇಶನದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿ ಚಿತ್ರಕಥೆಯಲ್ಲಿ ತೊಡಗಿಕೊಂಡಿದ್ದಾರೆ. ಮೊನ್ನೆ ಯುಗಾದಿ ಹಬ್ಬದಂದು ಬೆಂಗಳೂರಿನ ಪ್ರಶಾಂತನಗರದ ಪ್ರಶಾಂತ ಗಣಪತಿ ದೇವಾಲಯದಲ್ಲಿ ಸರಳವಾಗಿ ಪೂಜೆ ನೆರವೇರಿಸಿಕೊಂಡ ಚಿತ್ರತಂಡ ಇದೀಗ ಕಲಾವಿದರ ತಲಾಶೆಯಲ್ಲಿದೆ.

ಸುನಿ ವಿನಿ ಪ್ರಸ್ತುತ ಪಡಿಸುತ್ತಿರುವ ಈ ಹೊಸ ಚಿತ್ರ ವೃದ್ಧಿ ಎಂಟರ್ಪ್ರೈಸಸ್‌ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಟಿ.ಆರ್.ಚೇತನ್ ಬಂಡವಾಳ ಹೂಡುತ್ತಿದ್ದಾರೆ. ಇದೇ ಮೊದಲಬಾರಿಗೆ ಹಾರರ್ ಕಥಾ ಹಂದರದ ಹಿಂದೆ ಬಿದ್ದಿರುವ ಯತಿರಾಜ್, ಹೊಸಬಗೆಯ ಕಥೆ ಮಾಡಿಕೊಂಡಿದ್ದಾರಂತೆ. ಹಾರರ್ ಮಿಶ್ರಿತ ಕಥೆಯಲ್ಲಿ ಹಾಸ್ಯ ಹಾಗೂ ಭಾವನಾತ್ಮಕ ಬೆಸುಗೆಯ ತೀವ್ರತೆಗೂ ಹೆಚ್ಚು ಒತ್ತುಕೊಡಲಾಗಿದೆ ಎನ್ನುತ್ತಾರೆ. ಇನ್ನೂ ಹೆಸರಿಡದ ಈ ಚಿತ್ರ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಅತ್ಯುತ್ತಮ ಪ್ರತಿಭೆಗಳನ್ನು ಎದರು ನೋಡುತ್ತಿದೆ. ಈ ಹಿಂದೆ ಯತಿ ನಿರ್ದೇಶನದ ‘ಸಂಜು’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ವಿಜಯ್ ಹರಿತ್ಸ ಇದೀಗ ಮತ್ತೊಮ್ಮೆ ಅವರಿಗೆ ಜೊತೆಯಾಗಿದ್ದಾರೆ. ಶ್ರೀಕಾಂತ್ ಸಂಭಾಷಣೆ ಬರೆಯುತ್ತಿದ್ದು, ಸುಧೀಂದ್ರ ವೆಂಕಟೇಶ್ ಅವರ ಪ್ರಚಾರ ಕಲೆ, ಅರುಣ್ ಕುಮಾರ್ ಅವರ ಸಹ ನಿರ್ದೇಶನವಿರಲಿದೆ ಎಂದು ತಿಳಿದು ಬಂದಿದೆ. ಉಳಿದ ತಂತ್ರಜ್ಞರ ಹಾಗೂ ಕಲಾವಿದರ ಆಯ್ಕೆ ನಡೆಯುತ್ತಿದೆ.

ಈ ಬರಹಗಳನ್ನೂ ಓದಿ