ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮನೋರಂಜನ್ ನಟನೆಯ ‘ಕೌಂತೇಯ’ ಟೀಸರ್ ಬಿಡುಗಡೆ

ಪೋಸ್ಟ್ ಶೇರ್ ಮಾಡಿ
ಮನೋರಂಜನ್ ನಟನೆಯ 'ಕೌಂತೇಯ' ಟೀಸರ್ ಬಿಡುಗಡೆ

ಬಿ.ಕೆ.ಚಂದ್ರಹಾಸ್ ನಿರ್ದೇಶನದ ‘ಕೌಂತೇಯ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮನೋರಂಜನ್‌ ರವಿಚಂದ್ರನ್‌ ಮತ್ತು ಅಚ್ಯುತ್‌ ಕುಮಾರ್‌, ಪ್ರಿಯಾಂಕಾ ತಿಮ್ಮೇಶ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಬಿ.ಕೆ.ಚಂದ್ರಹಾಸ್ ಅವರ ನಿರ್ದೇಶನದ ಮತ್ತೊಂದು ಚಿತ್ರ ‘ಕೌಂತೇಯ’. ಶ್ರೀ ಮಹಾಂಕಾಳಿ ಪಿಕ್ಚರ್ಸ್ ಅಡಿ ಸುರೇಶ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ಹಿರಿಯನಟ ಅಚ್ಯುತ್ ಕುಮಾರ್ ನಿವೃತ್ತಿಗೆ ಹತ್ತಿರದಲ್ಲಿರೋ ಸಬ್-ಇನ್ಸ್‌ಪೆಕ್ಟರ್ ರಂಗನಾಥನ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೆ ಯುವನಟ ಮನೋರಂಜನ್ ರವಿಚಂದ್ರನ್ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೌಂತೇಯ’ ಕುಂತೀಪುತ್ರ ಕರ್ಣನ ಇನ್ನೊಂದು ಹೆಸರು. ಹಾಗಂತ ಇದು ಪೌರಾಣಿಕ ಕಥೆಯಲ್ಲ, ಮರ್ಡರ್ ಮಿಸ್ಟ್ರಿ ಆಧಾರಿತ ಎಮೋಷನಲ್ ಕ್ರೈಮ್ ಥ್ರಿಲ್ಲರ್. ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು‌.

ವೇದಿಕೆಯಲ್ಲಿ ನಿರ್ದೇಶಕ ಬಿ.ಕೆ. ಚಂದ್ರಹಾಸ್ ಮಾತನಾಡುತ್ತ, ‘ಮನೋರಂಜನ್ ಅವರು ವಿಲನ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಪಾತ ಒಳ್ಳೆಯದಲ್ಲ ಎಂದು ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಬೆಂಗಳೂರು, ಮೈಸೂರು ಸುತ್ತಮುತ್ತ 3 ಹಂತಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಸದ್ಯ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದ್ದು, ನವೆಂಬರ್ ವೇಳೆಗೆ ರಿಲೀಸ್ ಮಾಡೋ ಪ್ಲಾನಿದೆ’ ಎಂದರು.

ನಟಿ ಪ್ರಿಯಾಂಕಾ ತಿಮ್ಮೇಶ್ ಮಾತನಾಡುತ್ತ, ‘ಚಂದ್ರಹಾಸ ನನ್ನ ಹಳೇ ಸ್ನೇಹಿತರು. ಗಣಪ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಈ ಚಿತ್ರದಲ್ಲಿ ನಾನಿಲ್ಲಿ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಡಬ್ಬಿಂಗ್ ಟೈಮಲ್ಲಿ ಸಿನಿಮಾ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ, ಮುಂದೇನಾಗುತ್ತೆ ಅಂತ ನೋಡಿಸಿಕೊಂಡು ಹೋಗುತ್ತೆ’ ಎಂದರು. ನಟ ಮನೋರಂಜನ್ ಮಾತನಾಡುತ್ತ, ‘ನನ್ನದು ನೆಗೆಟಿವ್ ಶೇಡ್ ಇರೋ ಪಾತ್ರ, ಇಡೀ ಸಿನಿಮಾದಲ್ಲಿ ಇರಲ್ಲ, ಒಂದು ಎಕ್ಸ್‌ಪೆರಿಮೆಂಟ್‌ ಅಂತ ಇದನ್ನು ಟ್ರೈ ಮಾಡಿದ್ದೇನೆ. ನಾನು ಈ ಹಿಂದೆ ಮಾಡಿದ ಎಲ್ಲ ಪಾತ್ರಗಳಿಗಿಂತ ವಿಭಿನ್ನವಾಗಿದೆ. ಈ ನಡುವೆ ಒಂದು ವಿಷಯವಿದ್ದು ಅದನ್ನು ಸಿನಿಮಾದಲ್ಲೇ ನೋಡಬೇಕು’ ಎಂದರು.

ಅಚ್ಯುತ್ ಕುಮಾರ್ ಮಾತನಾಡಿ, ‘ಚಂದ್ರಹಾಸ ಬಹಳ ಕ್ಲಾರಿಟಿ ಇರುವಂಥ ನಿರ್ದೇಶಕ. ಇಡೀ ಸಿನಿಮಾದ ಚಿತ್ರೀಕರಣ ಯಾವುದೇ ತೊಂದರೆ ಇಲ್ಲದ ಹಾಗೆ ನಡೆದಿದೆ. ನಿರ್ಮಾಪಕರು ಬೆಳಗಿನಿಂದ ಸಂಜೆವರೆಗೆ ನಮ್ಮ ಜತೆಗೆ ಇದ್ದು ನೋಡಿಕೊಳ್ಳುತ್ತಿದ್ದರು‌. ಸಿನಿಮಾದಲ್ಲಿ ಒಂದು ವಿಷಯ ಇದೆ. ಅದು ಇಡೀ ಚಿತ್ರದ ಜತೆಗೇ ಸಾಗುತ್ತಿರುತ್ತದೆ’ ಎಂದರು. ಬಿಗ್ ಬಾಸ್ ನೀತು ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶಕ ರಾಘವೇಂದ್ರ ಮಾತನಾಡಿ, ‘ಚಿತ್ರದಲ್ಲಿ 2 ಹಾಡುಗಳಿವೆ’ ಎಂದರು. ಛಾಯಾಗ್ರಾಹಕ ಪಿ.ಎಲ್.ರವಿ, ಸಂಕಲನಕಾರ ಅನುರಂಜನ್, ಸಂಭಾಷಣೆ ಬರೆದಿರುವ ಅನುರಂಜನ್ ಕೌಂತೇಯ ಚಿತ್ರದ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಬರಹಗಳನ್ನೂ ಓದಿ