ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ 1934, ಮಾರ್ಚ್ 3ರಂದು ಬೆಂಗಳೂರು ಕಲಾಸಿಪಾಳ್ಯದಲ್ಲಿದ್ದ ‘ಪ್ಯಾರಾಮೌಂಟ್’ ಚಿತ್ರಮಂದಿರದಲ್ಲಿ ತೆರೆಕಂಡಿತು. ಷಾ ಚಮನ್ಲಾಲ್ ಡುಂಗಾಜಿ ಚಿತ್ರದ ನಿರ್ಮಾಪಕರು. ವೈ.ವಿ.ರಾವ್ ನಿರ್ದೇಶಕರು. 1903ರಲ್ಲಿ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು ಚಿಕ್ಕಪೇಟೆಯಲ್ಲಿ ನೆಲೆನಿಂತು ಪಾತ್ರೆ ವ್ಯಾಪಾರದಲ್ಲಿ ಯಶಸ್ಸು ಗಳಿಸಿದ್ದರು. ಕನ್ನಡ ಸಿನಿಮಾ ಮಾಡಬೇಕೆನ್ನುವ ಡುಂಗಾಜಿ ಅವರಿಗೆ ಒತ್ತಾಸೆಯಾಗಿ ನಿಂತವರು ಆರ್.ನಾಗೇಂದ್ರರಾವ್.
ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಚಿಸಿದ್ದ ಜನಪ್ರಿಯ ನಾಟಕ ‘ಸತಿ ಸುಲೋಚನಾ’ವನ್ನು ತೆರೆಗೆ ಅಳವಡಿಸುವುದೆಂದು ನಿರ್ಧಾರವಾಯ್ತು. ಚಿತ್ರದ ಸಂಭಾಷಣೆ, ಹಾಡುಗಳ ಜವಾಬ್ದಾರಿಯನ್ನು ಬೆಳ್ಳಾವೆಯವರಿಗೇ ವಹಿಸಲಾಯ್ತು. ಹೀಗಾಗಿ ನರಹರಿ ಶಾಸ್ತ್ರಿ ಅವರನ್ನು ಕನ್ನಡ ಚಿತ್ರರಂಗದ ಮೊದಲ ಕತೆಗಾರ, ಸಂಭಾಷಣೆ ರಚನೆಕಾರ, ಗೀತರಚನೆಕಾರರು ಎಂದು ಗುರುತಿಸಲಾಗುತ್ತದೆ.
ಆರ್.ನಾಗೇಂದ್ರರಾವ್ ‘ಸತಿ ಸುಲೋಚನ’ ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದಲ್ಲದೆ ಸಂಗೀತ ಸಂಯೋಜನೆಯ ಹೊಣೆಯನ್ನೂ ಹೊತ್ತರು. ನಾಯಕ ಇಂದ್ರಜಿತ್ ಪಾತ್ರದಲ್ಲಿ ಸುಬ್ಬಯ್ಯನಾಯ್ಡು, ಲಕ್ಷ್ಮಣನಾಗಿ ವೈ.ವಿ.ರಾವ್, ರಾಮನಾಗಿ ಡಿ.ಎನ್.ಮೂರ್ತಿರಾವ್, ನಾರದನ ಪಾತ್ರದಲ್ಲಿ ಶೇಷಾಚಲಂ, ಸುಲೋಚನಾ ಪಾತ್ರದಲ್ಲಿ ತ್ರಿಪುರಾಂಬ, ಮಂಡೋದರಿ ಪಾತ್ರದಲ್ಲಿ ಲಕ್ಷ್ಮೀಬಾಯಿ ಅಭಿನಯಿಸಿದರು.
ಕೊಲ್ಹಾಪುರದ ಛತ್ರಪತಿ ಸಿನಿಟೋನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದ್ದು. 16 ಹಾಡುಗಳಿದ್ದವು ಎನ್ನಲಾಗುತ್ತದೆ. ಚಿತ್ರದ ಅಂದಾಜು ಬಜೆಟ್ 40 ಸಾವಿರ ರೂಪಾಯಿ. ಚಿತ್ರದಲ್ಲಿನ ‘ದೇವ ಗುರುಗಳೆಮಗೆ’ ಗೀತೆಯನ್ನು ಹಾಡಿದ ಆರ್.ನಾಗೇಂದ್ರರಾವ್ ಕನ್ನಡದ ಮೊದಲ ಗಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ‘ಭಲೇ ಭಲೇ ಪಾರ್ವತಿ ಬಲು ಚತುರೆ’ ಹಾಡಿದ ಲಕ್ಷ್ಮೀಬಾಯಿ ಮೊದಲ ಗಾಯಕಿ ಎನಿಸಿಕೊಂಡರು.
ಹಾಗೆ ನೋಡಿದರೆ ಕನ್ನಡ ವಾಕ್ಚಿತ್ರದ ಸಂದರ್ಭದಲ್ಲಿ ಮೊದಲು ಚಿತ್ರೀಕರಣ ಆರಂಭಿಸಿದ್ದು ‘ಭಕ್ತದೃವ’. ಚಿತ್ರದ ನಿರ್ಮಾಪಕರ ಮಧ್ಯೆಯ ವೈಮನಸ್ಸಿನಿಂದಾಗಿ ಚಿತ್ರೀಕರಣ ತಡವಾಯ್ತು. ‘ಸತಿ ಸುಲೋಚನ’ ತೆರೆಕಂಡ ಒಂದು ತಿಂಗಳ ನಂತರ ‘ಭಕ್ತದೃವ’ ಸಿನಿಮಾ ತೆರೆಗೆ ಬಂದು ಯಶಸ್ವೀ ಪ್ರದರ್ಶನ ಕಂಡಿತು.
(ಮಾಹಿತಿ ಕೃಪೆ: ರಘುನಾಥ ಚ.ಹ. ಅವರ ‘ಸತಿ ಸುಲೋಚನಾ’ ಕೃತಿ)