
ಸಿನಿಮಾ ವಿಶ್ಲೇಷಕ
‘ಬೇಡರ ಕಣ್ಣಪ್ಪ’ ಚಿತ್ರದ ‘ಶಿವಪ್ಪ ಕಾಯೋ ತಂದೆ’ ಮತ್ತು ‘ಬದುಕು ಬಂಗಾರವಾಯಿತು’ ಚಿತ್ರದ ‘ಜಗದೀಶ ಸರ್ವೇಶ’ ಕನ್ನಡ ಸಿನಿಮಾದ ಎರಡು ಜನಪ್ರಿಯ ಶಿವಗೀತೆಗಳು. ಹಿರಿಯ ಸಿನಿಮಾ ವಿಶ್ಲೇಷಕ ಕೆ.ಫಣಿರಾಜ್ ಅವರು ಈ ಗೀತೆಗಳ ಹಿಂದಿನ ಭಕ್ತಿ – ಭಾವದ ಅಭಿವ್ಯಕ್ತಿಯನ್ನು ಇಲ್ಲಿ ಗುರುತಿಸಿದ್ದಾರೆ.
ಗೀತೆ: ಶಿವಪ್ಪ ಕಾಯೋ ತಂದೆ
ಸಿನಿಮಾ: ಬೇಡರ ಕಣ್ಣಪ್ಪ (1954)
ಸಾಹಿತ್ಯ: ಎಸ್.ನಂಜಪ್ಪ
ಸಂಗೀತ: ಆರ್.ಸುದರ್ಶನಂ
ಗಾಯನ: ಸಿ.ಎಸ್.ಜಯರಾಮನ್

ಎಸ್.ನಂಜಪ್ಪನವರು ರಚಿಸಿರುವ ಈ ‘ಬೇಡರ ಕಣ್ಣಪ್ಪ’ ಸಿನಿಮಾದ ಹಾಡಿನ ಲೌಕಿಕ ಆಧ್ಯಾತ್ಮವು ಇವತ್ತಿಗೂ ಬೋಧಕ. ಭಕ್ತಿ ಎಂಬುದು ಭಕ್ತ ಹಾಗು ಅವನೇ ಕಟ್ಟಿಕೊಂಡ, ಅವನ ಲೋಕಸ್ಥಿತಿಯ ಪ್ರತಿಮೆಯಾದ ದೇವರ ನಡುವಿನ ಲೋಕ ಸುಖ-ದುಃಖದ ಕೊಡುಕೊಳೆ; ಅಷ್ಟೇ! ಅದಕ್ಕಿಂತ ಹೆಚ್ಚಿನದು ವ್ಯವಹಾರ-ಅಪಚಾರವೆಂಬ ಅಪ್ಪಟ ನಂಬಿಕೆಯಲ್ಲಿ ನಂಜಪ್ಪ ಬರೆದ ಈ ಸಾಹಿತ್ಯವು ನಿಜಕ್ಕೂ ದಾರಿದೀಪ.:
ಶರಣು ಶಂಕರ ಶಂಭೋ
ಓಂಕಾರನಾದ ರೂಪಾ
ಮೊರೆಯ ನೀ ಆಲಿಸೀ
ಪಾಲಿಸೋ ಸರ್ವೇಶಾ
ಶಿವಪ್ಪ ಕಾಯೋ ತಂದೆ
ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಹರನೇ ಕಾಪಾಡೆಯಾ
ಭಕ್ತಿಯಂತೆ ಪೂಜೆಯಂತೆ
ಒಂದೂ ಅರಿಯೆ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ.. ಹರನೇ
ಶಿವಪ್ಪ ಕಾಯೋ ತಂದೆ…
ಶುದ್ಧನಾಗಿ ಪೂಜೆಗೈವೆ
ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ
ನಾ ಕಾಣೆ ದೇವನೇ
ಶಿವಪ್ಪ ಕಾಯೋ ತಂದೆ…
ನಾದವಂತೆ ವೇದವಂತೆ
ಒಂದು ತಿಳಿಯೇ ನಾ
ಬೆಂದ ಜೀವ ನೊಂದು
ಕೂಗೆ ಬಂದು ನೋಡೆಯಾ ಹರನೇ
ಶಿವಪ್ಪ ಕಾಯೋ ತಂದೆ…
ಏಕಚಿತ್ತದಿ ನಂಬಿದವರ
ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ
ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ
ಲೋಕವನಾಳುವ ನೀನಪ್ಪಾ
ಶಿವಪ್ಪ ಕಾಯೋ ತಂದೆ ಆಗಮ ವೈದಿಕ ಪ್ರತಿಮೆಗಳನ್ನು ಯಾವ ಆಡಂಬರ ಅಬ್ಬರವಿಲ್ಲದೆ ಒಡೆಯುವ ಈ ಸಾಹಿತ್ಯ ರಚನೆಗೆ ಹೆಗಲಾದ ಕಾಲ ಪ್ರಜ್ಞೆಯನ್ನು ಸಿನಿಮಾ ಪ್ರೇಮವನ್ನು ಹಚ್ಚಿಕೊಂಡವರು ನೆನೆದು ಹಾಡಬೇಕು.

ಗೀತೆ: ಜಗದೀಶ ಸರ್ವೇಶ ಮಲ್ಲೇಶ ಗೌರೀಶ….
ಸಿನಿಮಾ: ಬದುಕು ಬಂಗಾರವಾಯಿತು (1976)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯನ: ಎಸ್.ಜಾನಕಿ
ಚಿ.ಉದಯಶಂಕರ್ ಇಂಥ ಹಾಡು ಬರೆದ್ರಾ! ಅದು ಕಥನಾ ಹಂದರದ ಸೊಗಡು ಅವರನ್ನು ತಾಕಿದ್ದಾ! ಅಥವಾ ಸಿನಿಮಾದ ಹಾಡು ಲೋಕಪದವಾಗಿ ಇರಬೇಕು ಎಂಬ ವೃತ್ತಿವಂತಿಕೆಯ ಅಪ್ಪಟ ಅರಿವಾ! ಹ್ಯಾಗಾದರೂ ಸರಿಯೇ! ಸಂಭ್ರಮಿಸುವುದು ಮಾತ್ರ ಸರಿ:
ಜಗದೀಶ ಸರ್ವೇಶ ಮಲ್ಲೇಶ ಗೌರೀಶ….
ನೂರಾರು ಹೆಸರು ಶಿವನೀಗೆ…
ನೂರಾರು ಹೆಸರು ನಂಜುಂಡೇಶ್ವರನೀಗೆ…
ಇರುವನು ನೆನೆದೋರ ಮನದಾಗೆ….
ಜಗದೀಶ ಸರ್ವೇಶ ಮಲ್ಲೇಶ ಗೌರೀಶ…
ನೂರಾರು ಹೆಸರು ಶಿವನೀಗೆ…
ನೂರಾರು ಹೆಸರು ನಂಜುಂಡೇಶ್ವರನೀಗೆ….
ಇರುವನು ನೆನೆದೋರ ಮನದಾಗೆ….
ಮೊಗ್ಗಲ್ಲಿ ಕುಳಿತವ್ನೆ.. ಹೂವಲ್ಲಿ ನಗುತಾನೆ…
ಮಾಲ್ಯಾಗೆ ಹಾಯಾಗಿ ಮಲಗವ್ನೆ…
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ…
ಮಾಲ್ಯಾಗೆ ಹಾಯಾಗಿ ಮಲಗವ್ನೆ…
ಮಾಲ್ಯಾಗೆ ಹಾಯಾಗಿ ಮಲಗವ್ನೆ ಮಾದೇವ….
ಮನಸಿಟ್ಟು ಕೂಗಲು ಬರುತಾನೆ…
ಜಗದೀಶ ಸರ್ವೇಶ ಮಲ್ಲೇಶ ಗೌರೀಶ…
ನೂರಾರು ಹೆಸರು ಶಿವನೀಗೆ…
ನೂರಾರು ಹೆಸರು ನಂಜುಂಡೇಶ್ವರನೀಗೆ…
ಇರುವನು ನೆನೆದೋರ ಮನದಾಗೆ….
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ…
ಕೋಗಿಲೆ ದನಿಯಾ ಇಂಪಾಗಿ…
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ….
ಕೋಗಿಲೆ ದನಿಯಾ ಇಂಪಾಗಿ….
ಕೋಗಿಲೆ ದನಿಯಾ ಇಂಪಾಗಿ….
ಕೆಳೋರ ಮನಸೀಗೆ ತಂದವ್ನೆ ಆನಂದ….
ಜಗದೀಶ ಸರ್ವೇಶ ಮಲ್ಲೇಶ ಗೌರೀಶ…
ನೂರಾರು ಹೆಸರು ಶಿವನೀಗೆ….
ನೂರಾರು ಹೆಸರು ನಂಜುಂಡೇಶ್ವರನೀಗೆ…
ಇರುವನು ನೆನೆದೋರ ಮನದಾಗೆ….
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ….
ಎಲ್ಲೆಲ್ಲೂ ನಮ್ಮ ಶಿವನುಂಟು….
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ….
ಎಲ್ಲೆಲ್ಲೂ ನಮ್ಮ ಶಿವನುಂಟು….
ಎಲ್ಲೆಲ್ಲೂ ನಮ್ಮ ಶಿವನುಂಟು….
ಜಗದಲ್ಲಿ ಶರಣರಿಗೆ ಕಾಣೋ ಕಣ್ಣುಂಟು….
ಜಗದೀಶ ಸರ್ವೇಶ ಮಲ್ಲೇಶ ಗೌರೀಶ…
ನೂರಾರು ಹೆಸರು ಶಿವನೀಗೆ…
ನೂರಾರು ಹೆಸರು ನಂಜುಂಡೇಶ್ವರನೀಗೆ….
ಇರುವನು ನೆನೆದೋರ ಮನದಾಗೆ….”
ನೋಡಿ! ಒಂದೇ ಒಂದು ಅಲೌಕಿಕ ಪ್ರತಿಮೆ ಇರದ, ಇಹದ ಕಣ್ಣಲ್ಲಿ ಕಾಣುವಷ್ಟರಲ್ಲಿ, ಕಾಯಕದಲ್ಲಿ ಕೈಗೆಟ್ಟುಕ್ಕುವಷ್ಟರಲ್ಲಿ, ಅಮೂರ್ತವಾದ ಆದರೆ ಲೌಕಿಕ ಬದುಕಿನ ಘನತೆಯನ್ನು ಕಡೆದ ದೇವ ಪ್ರತಿಮೆ!
