ಚಂದನ್ ಶೆಟ್ಟಿ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ಇದೇ ಏಪ್ರಿಲ್ 24ರಂದು ತೆರೆಕಾಣಲಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ.
ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ಅವರು ನಿರ್ಮಿಸಿರುವ ‘ಎಲ್ರ ಕಾಲೆಳಿಯುತ್ತೆ ಕಾಲ’ ಏಪ್ರಿಲ್ 24ರಂದು ತೆರೆಕಾಣಲಿದೆ. ಚಿತ್ರದ ಕುರಿತು ಮಾತನಾಡಿದ ಚಿತ್ರದ ಹೀರೋ ಚಂದನ್ ಶೆಟ್ಟಿ, ‘ಈಗಾಗಲೇ ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದೇನೆ. ಈಗ ಹೇಳಬೇಕಿರುವುದು ನಮ್ಮ ಚಿತ್ರ ಒಂದು ವಾರ ತಡವಾಗಿ ಅಂದರೆ , ಏಪ್ರಿಲ್ 24 ರಂದು ಬಿಡುಗಡೆಯಾಗುತ್ತಿದೆ. ನಮ್ಮೆಲ್ಲರ ಆರಾಧ್ಯ ದೈವ ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿರುವುದು ಬಹಳ ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.
ಚಿತ್ರದಲ್ಲಿ ನನ್ನದು ಗಮನಾರ್ಹ ಪಾತ್ರ ಎಂದು ಮಾತನಾಡಿದ ನಟಿ ತಾರಾ ಅನುರಾಧ, ‘ಸುಜಯ್ ಶಾಸ್ತ್ರಿ ಹಾಗೂ ರಾಜ್ ಗುರು ಹೊಸಕೋಟೆ ರಂಗಭೂಮಿಯಿಂದ ಪರಿಚಿತರು. ಚಂದನ್ ಶೆಟ್ಟಿ ಹಾಗೂ ಅವರು ತಂದೆ – ತಾಯಿ ಕೂಡ ಪರಿಚಯ. ಇನ್ನೂ, ಅರ್ಚನಾ ಕೊಟ್ಟಿಗೆ ನಾನು ಇಷ್ಟ ಪಡುವ ನಾಯಕಿ. ಒಂದೊಳ್ಳೆ ತಂಡ ಸೇರಿ ಉತ್ತಮ ಚಿತ್ರ ಮಾಡಿದ್ದಾರೆ. ಹಾಡುಗಳು ಚೆನ್ನಾಗಿದೆ. ಇದೇ ಏಪ್ರಿಲ್ 24, ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರ ತೆರೆಗೆ ಬರಲಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಿ’ ಎಂದರು.
ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ಮಾಪಕ ಗೋವಿಂದರಾಜು, ಚಂದನ್ ಫಿಲಂಸ್ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದರು. ನಾಯಕಿ ಅರ್ಚನಾ ಕೊಟ್ಟಿಗೆ ಸಹ ಎಲ್ಲರಿಗೂ ಧನ್ಯವಾದ ಹೇಳಿದರು. ನಟರಾದ ರಜನಿಕಾಂತ್, ಅನಂತ ಪದ್ಮನಾಭ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ವಿತರಣೆಯ ಬಗ್ಗೆ ಚಂದನ್ ಫಿಲಂಸ್ ನ ಕುನಾಲ್ ಮಾತನಾಡಿದರು. ನಿರ್ಮಾಪಕರ ಸ್ನೇಹಿತರಾದ ಶ್ರೀನಿವಾಸ್, ಶಂಕರ್ ಅವರು ಚಿತ್ರಕ್ಕೆ ಯಶಸ್ಸನ್ನು ಕೋರಿದರು. ಉಷಾ ಗೋವಿಂದರಾಜು ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರವೀಣ್ – ಪ್ರದೀಪ್ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜ್ ಗುರು ಹೊಸಕೋಟೆ ಕಥೆ ಬರೆದಿದ್ದಾರೆ.








