
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು
‘ಫಲಿತಾಂಶ’ದಲ್ಲಿ ಹೊಸ ನಾಯಕನನ್ನು ಪರಿಚಯಿಸಲು ನಿರ್ಧರಿಸಿದ್ದರು ನಿರ್ದೇಶಕ ಪುಟ್ಟಣ್ಣ. 5000ಕ್ಕೂ ಹೆಚ್ಚು ಯುವಕರು ಆಡಿಷನ್ನಲ್ಲಿ ಪಾಲ್ಗೊಂಡಿದ್ದರು! ಈ ಚಿತ್ರದ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ನೆನಪುಗಳನ್ನು ಹಂಚಿಕೊಂಡಿದ್ದಾರೆ.
‘ಫಲಿತಾಂಶ’ ಚಿತ್ರ ಪ್ರಾರಂಭವಾಗುವ ಮುನ್ನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಹೊಸ ನಾಯಕನಿಗಾಗಿ ‘ನಾಯಕನಟ ಬೇಕಾಗಿದ್ದಾನೆ’ ಜಾಹೀರಾತು ಕೊಟ್ಟಿದ್ದರು. ಜಾಹಿರಾತು ನೋಡಿ ಬೆಂಗಳೂರು ಏರ್ಲೈನ್ಸ್ ಹೋಟೆಲ್ನಲ್ಲಿ ನಡೆದ ಆಡಿಷನ್ಗೆ ಐದು ಸಾವಿರಕ್ಕೂ ಹೆಚ್ಚು ಯುವಕರು ಸರದಿ ಸಾಲಿನಲ್ಲಿ ನಿಂತರು!
ಇನ್ನು ಚಿತ್ರಕ್ಕೆ ಪ್ರಥಮ ಬಾರಿ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬಿಜಾಪುರದಲ್ಲಿ ಚಿತ್ರೀಕರಣ ನಡೆಸಲಾಯಿತು. ಸಿನಿಮಾ ಶೂಟಿಂಗ್ ನೋಡದ ಆ ಭಾಗದ ಜನ ಶೂಟಿಂಗ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದರು. ಇದರಿಂದ ಚಿತ್ರೀಕರಣ ಮಾಡುವುದು ಬಹಳಷ್ಟು ಕಷ್ಟವಾಗುತ್ತಿತ್ತು. ಬಹಳ ಬಿಸಿಲು. ಹಾಗಾಗಿ ಬೆಳಗ್ಗೆ 7ರಿಂದ 11 ಮತ್ತು ಸಂಜೆ 3ರಿಂದ 6ರವರೆಗೆ ಚಿತ್ರೀಕರಣ ಮಾಡಲಾಗುತ್ತಿತ್ತು.
ಮೊದಲ ಬಾರಿ ನಾಯಕನಟನಾಗಿ ಅಭಿನಯಿಸಿದ್ದ ಜೈಜಗದೀಶ್ ಅವರಿಗೆ ನಾಲ್ವರು ನಾಯಕಿಯಾಗಿ ನಟಿಸಿದ್ದಾರೆ. ಆರತಿ, ಶುಭಾ, ವೈಶಾಲಿ ಹಾಗೂ ಪದ್ಮಾಕುಮಟಾ. ಹರಿದಾಸ್ ರವರ ಸುಂದರ ಛಾಯಾಗ್ರಹಣವಿತ್ತು. ಶ್ರೀನಿವಾಸ ಕುಲಕರ್ಣಿ ಕಥೆ, ವಿಜಯಭಾಸ್ಕರ್ ಸಂಗೀತ ಸಂಯೋಜನೆ, ಪುಟ್ಟಣ್ಣ ಕಣಗಾಲ್ ಅವರ ಸಮರ್ಥ ನಿರ್ದೇಶನವಿದ್ದಾಗ್ಯೂ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.