(ಮಾಹಿತಿ – ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕರು)
ಸ್ವಾತಂತ್ರ್ಯ ಹೋರಾಟದ ಕಥಾವಸ್ತು ಹೊಂದಿರುವ ಕನ್ನಡ ಚಿತ್ರಗಳು ತೀರಾ ಕಡಿಮೆ. ‘ಕಿತ್ತೂರು ಚೆನ್ನಮ್ಮ’, ‘ಮಾಡಿ ಮಡಿದವರು’, ‘ಸಂಗೊಳ್ಳಿ ರಾಯಣ್ಣ’, ‘ಮೈಸೂರು ಮಲ್ಲಿಗೆ’, … ಹೀಗೆ ಕೆಲವು ಪ್ರಮುಖ ಚಿತ್ರಗಳನ್ನು ಹೆಸರಿಸಬಹುದು. ಲೇಖಕ ಬಸವರಾಜ ಕಟ್ಟೀಮನಿ ಅವರ ಕಾದಂಬರಿ ಆಧಾರಿತ ‘ಮಾಡಿ ಮಡಿದವರು’ ಒಂದು ಪೂರ್ಣ ಪ್ರಮಾಣದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಕಥಾವಸ್ತು ಹೊಂದಿದ್ದ ಚಿತ್ರ.
ಸ್ವಾತಂತ್ರ್ಯ ಹೋರಾಟಗಾರ ಸಾಗರದ ರಾಮದಾಸ್ ಅವರು ಚಿತ್ರದ ನಿರ್ಮಾಪಕರು. ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಾಲ್ವರು ಪದವೀಧರರು ಚಿತ್ರಕ್ಕೆ ಕೆಲಸ ಮಾಡಿರುವುದು ವಿಶೇಷ. ಚಿತ್ರದ ನಿರ್ದೇಶಕ ಕೆ.ಎಂ.ಶಂಕರಪ್ಪ, ಛಾಯಾಗ್ರಾಹಕ ಯು.ಎಂ.ಎನ್. ಷರೀಫ್, ಸಂಕಲನಕಾರ ಉಮೇಶ್ ಕುಲಕರ್ಣಿ, ಸೌಂಡ್ ಇಂಜಿನಿಯರ್ ಕೃಷ್ಣಮೂರ್ತಿ ಪುಣೆ ಇನ್ಸ್ಟಿಟ್ಯೂಟ್ನಲ್ಲಿ ಕಲಿತವರು.
ಕಲಾವಿದರಾದ ರಾಮಗೋಪಲ್, ಗಿರಿಜಾ ಲೋಕೇಶ್, ಸುಧೀರ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಚಿತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಒಂದು ಹಾಡನ್ನು ಹಾಡಿ, ಅಭಿನಯಿಸಿದ್ದಾರೆ. ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆದಿತ್ತು. ಸುದೀರ್ಘ ಅವಧಿಯಲ್ಲಿ ಚಿತ್ರಣಗೊಂಡ ಸಿನಿಮಾ 1974ರಲ್ಲಿ ಬಿಡುಗಡೆಯಾಯ್ತು. ಚಿತ್ರ ನಿರೀಕ್ಷಿಸದ ಯಶಸ್ಸು ಕಾಣಲಿಲ್ಲ. ರಾಜ್ಯ ಸರ್ಕಾರದ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಉತ್ತಮ ಛಾಯಾಗ್ರಹಣಕ್ಕಾಗಿ ಯು.ಎಂ.ಎನ್.ಷರೀಫ್ ರಾಜ್ಯಪ್ರಶಸ್ತಿ ಪಡೆದಿದ್ದಾರೆ.