`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ ಪಾತ್ರಕ್ಕೆ ರಾಜ್ ಅವರಿಗೂ ಮುನ್ನ ವೃತ್ತಿರಂಗಭೂಮಿ ಕಲಾವಿದರಾದ ಎಸ್.ಆರ್.ರಾಜನ್ ಮತ್ತು ಎಲಿವಾಳ ಸಿದ್ದಯ್ಯಸ್ವಾಮಿ ಅವರ ಹೆಸರುಗಳು ಪ್ರಸ್ತಾಪವಾಗಿದ್ದವು. ಚಿತ್ರದ ಸಹನಿರ್ಮಾಪಕರಾದ ಗುಬ್ಬಿ ವೀರಣ್ಣ ಮತ್ತು ಎಚ್.ಎಲ್.ಎನ್.ಸಿಂಹ ಅವರ ಒತ್ತಾಸೆಯ ಮೇರೆಗೆ ಅಂತಿಮವಾಗಿ ರಾಜಕುಮಾರ್ ಆಯ್ಕೆಯಾದರು.
ಮದರಾಸಿನ ಎವಿಎಂ ಸಂಸ್ಥೆಯ ಸಹಯೋಗದೊಂದಿಗೆ ಗುಬ್ಬಿ ವೀರಣ್ಣನವರು ನಿರ್ಮಿಸಿದ ಚಿತ್ರವಿದು. 1954ರ ಮೇ 7ರಂದು ರಾಜ್ಯದ 20 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿತು. ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಬೆಂಗಳೂರಿನ ‘ಸಾಗರ್’ ಮತ್ತು ಮೈಸೂರಿನ ‘ಅಪೇರಾ’ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿತು.
ಮುಂದೆ ಈ ಸಿನಿಮಾ ತೆಲುಗು (ಕಾಳಹಸ್ತಿ ಮಹಾತ್ಮ್ಯಂ), ತಮಿಳು (ವೇಡನ್ ಕಣ್ಣಪ್ಪ) ಮತ್ತು ಹಿಂದಿ (ಶಿವಭಕ್ತ್) ಭಾಷೆಗಳಲ್ಲೂ ತಯಾರಾಯ್ತು. ಮೂರೂ ಅವತರಣಿಕೆಗಳಿಗೆ ಎಚ್.ಎಲ್.ಎನ್.ಸಿಂಹ ನಿರ್ದೇಶಕರು. ತೆಲುಗು ಅವತರಣಿಕೆಯಲ್ಲಿ ರಾಜ್ ಅವರೇ ನಾಯಕನಾಗಿ ಅಭಿನಯಿಸಿದರು. ಮಾಲತಿ ನಾಯಕಿ. ಕನ್ನಡ ಸೇರಿದಂತೆ ಇತರೆ ಎರಡು ಅವತರಣಿಕೆಗಳಲ್ಲಿ ಫಂಡರೀಬಾಯಿ ನಾಯಕಿಯಾಗಿ ನಟಿಸಿದರು. ರಾಜಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ನಟಿಸಿದ ಏಕಮಾತ್ರ ಪರಭಾಷಾ ಚಿತ್ರವಾಗಿ ‘ಕಾಳಹಸ್ತಿ ಮಹಾತ್ಮ್ಯಂ’ (1955) ದಾಖಲಾಯಿತು. (ಮಾಹಿತಿ ಕೃಪೆ: ದೊಡ್ಡಹುಲ್ಲೂರು ರುಕ್ಕೋಜಿ ಅವರ ಡಾ.ರಾಜಕುಮಾರ್ ಸಮಗ್ರ ಚರಿತ್ರೆ)